ಶಿವಮೊಗ್ಗ: ಇಂದು ದೇಶಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ್ ಮೂರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪವನ್ನು ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಮ್ ಸೂರನಗದ್ದೆ ಸೂಚಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮೃತ ಶ್ರೀಧರ್ ಮೂರ್ತಿ ಅವರು ದೇಶಿ ಫೌಂಡೇಶನ್ ಎನ್ನುವಂತ ಸಂಸ್ಥೆಯ ಮೂಲಕ ಹತ್ತಾರು ಸಮಾಜ ಮುಖಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ದಲಿತರು, ತುಳಿತಕ್ಕೆ ಒಳಗಾದವರು, ಧಮನಿತರ ಧ್ವನಿಯಾಗಿ ನಿಂತಿದ್ದರು. ನೊಂದವರ ಕಣ್ಣೀರೊರೆಸುತ್ತ, ಶೋಷಣೆಗೆ ಒಳಗಾದವರಿಗೆ ನ್ಯಾಯಕೊಡಿಸುವಂತ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ.
ಸಮಾಜದ ಒಳಿತಿಗಾಗಿ ಹಗಲಿರುಳೆನ್ನದೇ ಶ್ರೀಧರ್ ಮೂರ್ತಿ ನಿಸ್ವಾರ್ಥ ಸೇವೆ ಮಾಡಿದವರು. ಇತ್ತೀಚೆಗಷ್ಟೇ ದೇಶಿ ಬ್ರಿಗೇಡ್ ಪಡೆಯನ್ನು ಕಟ್ಟಿ ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಂತಿದ್ದರು. ಇಂತಹ ಯುವ ಹೋರಾಟಗಾರ ಇಂದು ಹೃದಯಾಘಾತದಿಂದ ನಿಧನರಾಗಿದ್ದು ತುಂಬಲಾರದ ನಷ್ಟವೇ ಸರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಖಃ ಭರಿಸುವಂತ ಶಕ್ತಿಯನ್ನು ದೇವರು ನೀಡಲಿ ಎಂಬುದಾಗಿ ಹೇಳಿದ್ದಾರೆ.
ವಸಂತ ಬಿ ಈಶ್ವರಗೆರೆ.., ಸಂಪಾದಕರು