ಶಿವಮೊಗ್ಗ: ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿಧಿಕ ಸಂಘಟನೆಯಾದ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (Karnataka Union of Working Journalists-KUWJ)” ದ 2025-28 ನೆ ಅವಧಿಯ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ಘೋಷಣೆ ಆಗಿದೆ.
ಶನಿವಾರದಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಚುನಾವಣೆ ಕುರಿತು ಮಾಹಿತಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಖ್ಯಚುನಾವಣಾಧಿಕಾರಿ ಎನ್ .ರವಿಕುಮಾರ್ ಟೆಲೆಕ್ಸ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 9000 ಸಾವಿರಕ್ಕೂ ಹೆಚ್ಚು ಸಕ್ರೀಯ ಕಾರ್ಯನಿರತ ಪತ್ರಕರ್ತ ಸದಸ್ಯರುಗಳನ್ನೊಳಗೊಂಡ ಬೃಹತ್ ಸಂಘಟನೆಯಾಗಿದ್ದು, ಕಾರ್ಮಿಕ ಇಲಾಖೆಯ ಉಸ್ತುವಾರಿಯಲ್ಲಿ ಸಂಘದ ರಾಜ್ಯ ಘಟಕವೂ ಸೇರಿದಂತೆ ಎಲ್ಲಾ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಅಕ್ಟೋಬರ್ 13 ರಂದು ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಂದೇ ವೇಳಾಪಟ್ಟಿ ಹಾಗೂ ಮತದಾರರ ಕರಡು ಪ್ರತಿಯನ್ನು ಪ್ರಕಟಿಸಲಾಗುವುದು. ಅಕ್ಟೋಬರ್ 19ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅ.28 ನಾಮಪತ್ರಗಳ ಪರಿಶೀಲನೆ, ಅ. 30 ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿರುತ್ತದೆ ಎಂದರು.
ನವಂಬರ್ 9 ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೇಂದ್ರ (KUWJ )ಕಚೇರಿ ಕಂದಾಯ ಭವನ 3ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು ಮತ್ತು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3ಗಂಟೆ ವರೆಗೆ ಮತದಾನ ನಡೆಯಲಿದೆ. ಮತದಾನ ಬಳಿಕ ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಎನ್.ರವಿಕುಮಾರ್ ಟೆಲೆಕ್ಸ್ ವಿವರಿಸಿದರು.
ಮಾದರಿ ನೀತಿ ಸಂಹಿತೆ ಜಾರಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಘಟಕ ಮತ್ತು ಜಿಲ್ಲಾ ಘಟಕಗಳಿಗೆ ಚುನಾವಣೆ ಹಿನ್ನಲೆಯಲ್ಲಿ ಅ. 10 ರಿಂದ ನ.9 ರವರೆಗೆ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಘಟಕಗಳು ಯಾವುದೇ ಅಧಿಕೃತ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಜಾತಿ, ಧರ್ಮ, ಲಿಂಗ ಆಧಾರಿತವಾಗಿ ಮತಯಾಚಿಸುವಂತಿಲ್ಲ. ಅಭ್ಯರ್ಥಿಗಳ ವಿರುದ್ದ ವ್ಯಕ್ತಿಗತ ಆರೋಪ. ಅಪಪ್ರಚಾರಗಳನ್ನು ನಡೆಸುವಂತಿಲ್ಲ.