ಬೆಂಗಳೂರು: ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ವರದಿಯನ್ನು ತಿರುಚಲು ವೈದ್ಯರೊಬ್ಬರು 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಮಾಧ್ಯಮಗಳ ಆರೋಪವನ್ನು ತಳ್ಳಿಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಹಿರಿಯ ತಜ್ಞರೊಬ್ಬರು, ‘ಈ ಆರೋಪಗಳು ಆಧಾರರಹಿತವಾಗಿವೆ.
ಶವಪರೀಕ್ಷೆ ವರದಿಯು ಮೃತಪಟ್ಟ ರೇಣುಕಾ ಸ್ವಾಮಿ ದೇಹದ ಮೇಲೆ ವಿವಿಧ ಗಾಯಗಳನ್ನು ವಿವರಿಸುತ್ತದೆ ಮತ್ತು ಸಾವು ಸ್ವಾಭಾವಿಕ ಎಂದು ಹೇಳುವುದಿಲ್ಲ.
“ಶವಪರೀಕ್ಷೆ ತಂಡದಲ್ಲಿ ಯಾರೂ ವರದಿಯಲ್ಲಿ ಸುಳ್ಳು ಹೇಳಲು 1 ಕೋಟಿ ರೂ. ಲಂಚ ಪಡೆದಿಲ್ಲ. ಕೆಲವು ವರದಿಗಳು ಹೇಳುವಂತೆ ನಮಗೆ ಯಾವುದೇ ರಾಜಕಾರಣಿಯಿಂದ ಯಾವುದೇ ಕರೆಗಳು ಬಂದಿಲ್ಲ” ಎಂದು ಹೆಸರು ಹೇಳಲಿಚ್ಛಿಸದ ತಜ್ಞರು ಸ್ಪಷ್ಟಪಡಿಸಿದ್ದಾರೆ.
ದೇಹದಾದ್ಯಂತ, ವಿಶೇಷವಾಗಿ ಜನನಾಂಗಗಳು, ಎದೆ, ತಲೆ, ಬೆನ್ನು ಮತ್ತು ಕೈಕಾಲುಗಳ ಮೇಲೆ ಕನಿಷ್ಠ 20 ಕ್ಕೂ ಹೆಚ್ಚು ಗಾಯಗಳಾಗಿವೆ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಆಘಾತ ಮತ್ತು ರಕ್ತಸ್ರಾವದಿಂದ ಸಾವು ಸಂಭವಿಸಿದೆ’ ಎಂದು ವರದಿಗೆ ಮಾಹಿತಿ ನೀಡಿದ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮರದ ಕೋಲು ಅಥವಾ ಹಲಗೆಯಿಂದ ದೇಹಕ್ಕೆ ಪದೇ ಪದೇ ಹೊಡೆದಿದ್ದರಿಂದ ಇದು ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ .