ಬೆಂಗಳೂರು: “ನಿಮ್ಮ ಬದುಕು, ಆಸ್ತಿ, ಖಾತೆಗಳ ರಕ್ಷಣೆಯೇ ನಮ್ಮ ಗ್ಯಾರಂಟಿ. ನಿಮ್ಮ ಆಸ್ತಿ ರಕ್ಷಣೆಗೆ ಈ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಬ್ಯಾಟರಾಯನಪುರದ ಸಹಕಾರ ನಗರ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಇ ಖಾತಾ ಮೇಳ ಹಾಗೂ ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.
“ಕರ್ನಾಟಕದ ಗ್ಯಾರಂಟಿ ಸರ್ಕಾರವು ಇಂದು ಸಚಿವ ಕೃಷ್ಣ ಭೈರೇಗೌಡ ಅವರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದೆ. ಇಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದೇವೆ. ನಾವು ಕೇವಲ ಮತಕ್ಕೆ ರಾಜಕಾರಣ ಮಾಡಿದವರಲ್ಲ. ನಿಮ್ಮ ಹಿತಕ್ಕೆ, ನಿಮ್ಮ ಬದುಕು ಹಾಗೂ ನಿಮ್ಮ ಆಸ್ತಿ ರಕ್ಷಣೆಗೆ ನಾವು ರಾಜಕಾರಣ ಮಾಡಿಕೊಂಡು ಬಂದಿದ್ದೇವೆ” ಎಂದು ಹೇಳಿದರು.
“ಉಳುವವನಿಗೆ ಭೂಮಿ ಕೊಟ್ಟಿದ್ದು, ಎ ಖಾತಾ ಇಲ್ಲದವರಿಗೆ ಬಿ ಖಾತಾ ಕೊಟ್ಟಿದ್ದೇವೆ, ಬಗರ್ ಹುಕುಂ ಸಾಗುವಳಿ ರೈತರಿಗೆ ಭೂಮಿ ನೀಡಿದ್ದೇವೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ್ದೆವು. ಭೂಮಿ ಯೋಜನೆ ಮೂಲಕ ರೈತರಿಗೆ ಕೇವಲ 5 ರೂ.ಗೆ ಖಾತಾ ದಾಖಲೆ ನೀಡಿದ್ದೇವೆ” ಎಂದರು.
“ನಿಮ್ಮ ಆಸ್ತಿಗಳ ದಾಖಲೆ ಸರಿಪಡಿಸಲು ಪಾಲಿಕೆ ವ್ಯಾಪ್ತಿಯಲ್ಲಿ ನಿಮ್ಮ ಆಸ್ತಿ ದಾಖಲೆ ಸ್ಕ್ಯಾನ್ ಮಾಡಿಸಲಾಗಿದೆ. ನಿಮ್ಮ ಕ್ಷೇತ್ರದಲ್ಲಿ ಇಂದು ಯಾರೂ ಲಂಚ ನೀಡದೇ, ನಿಮ್ಮ ಆಸ್ತಿ ಖಾತಾ ದಾಖಲೆ ನೀಡಬೇಕು ಎಂಬುದು ನನ್ನ ಆಲೋಚನೆ. ನನ್ನ ಈ ಕನಸಿನ ಯೋಜನೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಬಲವಾಗಿ ನಿಂತಿದ್ದಾರೆ” ಎಂದು ತಿಳಿಸಿದರು.
“ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ತಾಂಡಾ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ 1,11,111 ಜನರಿಗೆ ಉಚಿತವಾಗಿ ದಾಖಲೆ ಪತ್ರ ನೀಡಿದ್ದೇವೆ. ಆಮೂಲಕ ನಮ್ಮ ಸರ್ಕಾರ ಆರನೇ ಗ್ಯಾರಂಟಿ ಯೋಜನೆ ಭೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ” ಎಂದರು.
“ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳ ಡಿಜಿಟಲಿಕರಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾವಣೆ ತರಲು ತೀರ್ಮಾನಿಸಿದ್ದೇನೆ. ನೀವು ನಿಮ್ಮ ಆಸ್ತಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ಈ ಖಾತಾ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಇದು ಸಾಧ್ಯವಾಗದೆ ಇದ್ದರೆ ನಿಮಗೆ ನೀಡಲಾಗಿರುವ ದೂರವಾಣಿಗೆ ಕರೆ ಮಾಡಿ. ಅವರೇ ಬಂದು ನಿಮ್ಮ ದಾಖಲೆ ಅಪ್ ಲೋಡ್ ಮಾಡಿ ಇ ಖಾತಾ ಮಾಡುತ್ತಾರೆ” ಎಂದು ವಿವರಿಸಿದರು.
“ಪಾಲಿಕೆ ವ್ಯಾಪ್ತಿಯ 25 ಲಕ್ಷ ಆಸ್ತಿಗಳ ಪೈಕಿ 5 ಲಕ್ಷ ಆಸ್ತಿ ದಾಖಲೆಗಳನ್ನು ಈ ರೀತಿ ವಿತರಣೆ ಮಾಡಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 50 ಸಾವಿರ ಮನೆಗಳಿಗೆ ಈ ದಾಖಲೆ ವಿತರಣೆ ಮಾಡಲಾಗಿದೆ. ನಿಮ್ಮ ಗುರುತಿನ ಚೀಟಿಗೆ ಹೇಗೆ ಪ್ರತ್ಯೇಕ ಸಂಖ್ಯೆ ನೀಡಲಾಗಿದೆಯೋ ಅದೇ ರೀತಿ ನಿಮ್ಮ ಆಸ್ತಿಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲು ನಿಮ್ಮ ಸರ್ಕಾರ ಬದ್ಧವಾಗಿದೆ” ಎಂದರು.
“ಜುಲೈ 1ರಿಂದ ಒಂದು ತಿಂಗಳ ಕಾಲ ಇ ಖಾತಾ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ನೀವುಗಳು ಭಾಗವಹಿಸಿ ನಿಮ್ಮ ಆಸ್ತಿ ಇ ಖಾತೆ ಮಾಡಿಸಿಕೊಳ್ಳಿ ವಂಚನೆಯಿಂದ ತಪ್ಪಿಸಿಕೊಳ್ಳಿ. ನಂತರ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇವೆ. ನಿಮಗೆ ನಮ್ಮ ಅಧಿಕಾರಿಗಳು, ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ” ಎಂದು ಹೇಳಿದರು.
“ಈ ಸರ್ಕಾರ ಬೆಂಗಳೂರಿನಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಹಾಗೂ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಈ ಪೈಕಿ ಪಿಆರ್ ಆರ್ ರಸ್ತೆ ನಿಮ್ಮ ಕ್ಷೇತ್ರದಲ್ಲಿ ಹಾದು ಹೋಗಲಿದೆ” ಎಂದು ಹೇಳಿದರು.
“ಇನ್ನು ಮುಂದೆ ನೀವು ಮನೆ ಕಟ್ಟುವಾಗ ಕಟ್ಟಡ ನಕ್ಷೆ ಅನುಮತಿ ಕಚೇರಿ ಅಲೆಯುವಂತಿಲ್ಲ. ನಂಬಿಕೆ ನಕ್ಷೆ ಯೋಜನೆ ಮೂಲಕ 50×80 ವಿಸ್ತೀರ್ಣವರೆಗಿನ ನಿವೇಶನವರೆಗೂ ಕಟ್ಟಡ ನಕ್ಷೆಯನ್ನು ನೋಂದಾಯಿತ ಇಂಜಿನಿಯರ್ ಗಳ ಮೂಲಕ ಒಂದೇ ದಿನದಲ್ಲಿ ಅನುಮತಿ ಪಡೆಯಬಹುದು. ಈ ಯೋಜನೆ ಮೂಲಕ ನಾವು ಈವರೆಗೂ 9 ಸಾವಿರ ಕಟ್ಟಡ ನಕ್ಷೆಗಳಿಗೆ ಮಂಜೂರಾತಿ ನೀಡಿದ್ದೇವೆ. ಇನ್ನು ನಗರದಲ್ಲಿ ಆಸ್ತಿ ತೆರಿಗೆ ಕಟ್ಟದವರಿಗೆ ಒನ್ ಟೈಮ್ ಸೆಟ್ಟಲ್ಮೆಂಟ್ ಯೋಜನೆ ಮೂಲಕ ಒಂದು ಅವಕಾಶ ನೀಡಲಾಗಿತ್ತು” ಎಂದು ಹೇಳಿದರು.
“ಈ ಕ್ಷೇತ್ರದಲ್ಲಿ ಅಗತ್ಯ ಮೇಲ್ಸೇತುವೆ, ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ಮೊತ್ತದ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೃಷ್ಣ ಭೈರೇಗೌಡ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬೆಂಗಳೂರಿನ ಕೊಳಚೆ ನೀರು ಕಾಲುವೆಗಳ ತಡೆಗೋಡೆ ಎತ್ತರಿಸಲು 2 ಸಾವಿರ ಕೋಟಿ ಅನುದಾನ ತಂದಿದ್ದಾರೆ” 3ಎಂದರು.
“ಇತ್ತೀಚೆಗೆ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿದ್ದು, ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಮನೆ ಕಟ್ಟಿದರೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಆದೇಶ ಹೊರಡಿಸಿದೆ. ಈಗಾಗಲೇ ಮನೆ ಕಟ್ಟಿರುವ ಸಾರ್ವಜನಿಕರಿಗೆ ನಾವು ಹೇಗೆ ಸಹಾಯ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತಿದೆ” ಎಂದು ಭರವಸೆ ನೀಡಿದರು.
“ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ ನಾವು ಏನು ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ. ಬೆಂಗಳೂರು ಕಟ್ಟಿದ ಕೆಂಪೇಗೌಡರನ್ನು, ವಿಧಾನ ಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಬೆಂಗಳೂರನ್ನು ಅಭಿವೃದ್ಧಿ ಮಾಡಿದ ಎಸ್.ಎಂ ಕೃಷ್ಣ ಅವರನ್ನು ನಾವು ಸ್ಮರಿಸುತ್ತೇವೆ. ಅದೇ ರೀತಿ ನೀವು ನಿಮ್ಮ ಆಸ್ತಿ ದಾಖಲೆ ನೀಡಿ, ನಿಮ್ಮ ಆಸ್ತಿ ಕಾಪಾಡಿದ ಕೃಷ್ಣ ಭೈರೇಗೌಡ ಅವರನ್ನು ಸದಾ ಸ್ಮರಿಸಬೇಕು. ಮುಂದಿನ ಚುನಾವಣೆಯಲ್ಲಿ ನೀವು ಕೃಷ್ಣ ಭೈರೇಗೌಡ ಅವರನ್ನು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
BIG NEWS: ಡಿಸೆಂಬರ್ ಬಳಿಕ ಮಧ್ಯಂತರ ಚುನಾವಣೆ ಬರುತ್ತೆ, ಬಿಜೆಪಿ 150 ಸ್ಥಾನ ಗೆದ್ದು ಸರ್ಕಾರ ರಚನೆ: ಕಾರಜೋಳ ಭವಿಷ್ಯ
BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!