ಧಾರವಾಡ: ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡಲು ತಪ್ಪಿದ್ದಲ್ಲಿ ವಾಹನದ ಹಣ ಮರಳಿಸಲು ಟ್ರೈಯೋ ಗ್ರೂಪ್ಸ್ ಪ್ಯುವರ್ ಎನರ್ಜಿ ಪ್ರೈ.ಲಿ.ಗೆ ಗ್ರಾಹಕರ ಆಯೋಗದ ಆದೇಶಿಸಿದೆ.
ಧಾರವಾಡದ ಹಾವೇರಿ ಪೇಟ ನಿವಾಸಿ ಇಲಿಯಾಸ್ ಖಾನ್ ಮೈಸೂರು ಎನ್ನುವವರು ದಿ:15/03/2022 ರಂದು ರೂ.77,000 ಪಾವತಿಸಿ ಇಲೆಕ್ಟ್ರೀಕ್ ಸ್ಕೂಟರನ್ನು ಎದುರುದಾರರಿಂದ ಖರೀದಿಸಿದ್ದರು. ವಾಹನವು ಬ್ಯಾಟರಿಯ ಮೇಲೆ 5 ವರ್ಷದ ವಾರಂಟಿಯನ್ನು ಹೊಂದಿತ್ತು. ದೂರುದಾರರು ಎದುರುದಾರರ ಹೇಳಿಕೆಯಂತೆ ವಾಹನವನ್ನು ಉಪಯೋಗಿಸುತ್ತಿದ್ದು ನಂತರ ಒಮ್ಮಿಂದೊಮ್ಮೆಲೆ ರಸ್ತೆಯ ಮದ್ಯ ನಿಲ್ಲಲು ಪ್ರಾರಂಭಿಸಿತು. ಅಲ್ಲದೇ ಎದುರುದಾರರು ಹೇಳಿದಷ್ಟು ಮೈಲೇಜನ್ನೂ ಸಹ ವಾಹನವು ಕೊಡುತ್ತಿರಲಿಲ್ಲ. ಈ ವಿಷಯವನ್ನು ದೂರುದಾರರು ಎದುರುದಾರರಿಗೆ ತಿಳಿಸಿದಾಗ ಅವರು ಅದನ್ನು ಸರಿಪಡಿಸಿಕೊಟ್ಟಿರಲಿಲ್ಲ. ಅಲ್ಲದೇ 1ನೇ ಎದುರುದಾರರು ತಮ್ಮ ಮಳಿಗೆಯನ್ನು ಶಾಶ್ವತವಾಗಿ ಮುಚ್ಚಿರುತ್ತಾರೆ. ಇದರಿಂದ ದೂರುದಾರರಿಗೆ ವಾಹನವನ್ನು ರಿಪೇರಿ ಮಾಡಿಸಲು ಕಷ್ಟವಾಗಿರುತ್ತದೆ. ಎದುರುದಾರರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 20/09/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಾದ ಟ್ರೈಯೋ ಗ್ರೂಪ್ಸ್ ಇವರಲ್ಲಿ ರೂ.77,000 ಹಣ ಪಾವತಿಸಿ ಪ್ಯೂವರ್ ಎನರ್ಜಿಯ ಇ-ಟ್ರಾನ್ಸ್+ ವಾಹನವನ್ನು ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೋಗುವಾಗ ತಕ್ಷಣವೇ ನಿಲ್ಲುವುದು ಮತ್ತು ಎದುರುದಾರರು ಹೇಳಿದಷ್ಟು ಮೈಲೇಜ್ನ್ನು ವಾಹನ ಕೊಡುತ್ತಿರಲಿಲ್ಲ. ವಾಹನ ಖರೀದಿಸಿದ ಕೆಲವು ತಿಂಗಳುಗಳಲ್ಲಿ ಆ ರೀತಿ ಆಗುವುದು ದೂರುದಾರರಿಗೆ ತೊಂದರೆಯಾಗಿರುತ್ತದೆ. ಎದುರುದಾರರು ಅದನ್ನು ರಿಪೇರಿ ಮಾಡಿ ಕೊಡದೇ ಇರುವುದು ದೂರುದಾರರಿಗೆ ಅನಾನುಕೂಲವಾಗಿದೆ. ಮತ್ತು ಎದುರುದಾರರು ತಮ್ಮ ಮಳಿಗೆಯನ್ನು ಶಾಶ್ವತವಾಗಿ ಮುಚ್ಚಿರುತ್ತಾರೆ. 1ನೇ ಎದುರುದಾರ ಉತ್ಪಾದಕರಾಗಿದ್ದು ಅವರ ನಡಾವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರ ಪದ್ಧತಿ ಎಸಗಿದ್ದಾರೆಂದು ಆಯೋಗ ಎದುರುದಾರ ವಿರುದ್ಧ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಈ ಎಲ್ಲ ಸಂಗತಿಗಳನ್ನು ಆಧರಿಸಿ ಎದುರುದಾರ ಪ್ಯೂವರ್ಎನರ್ಜಿ ಟ್ರೈಯೋ ಗ್ರೂಪ್ಸ್ ಕಂಪನಿಗೆ ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿಯನ್ನು ಅಳವಡಿಸಿ ಕೊಡಬೇಕು ಒಂದು ವೇಳೆ ಅದನ್ನು ಸರಿಪಡಿಸಿಕೊಡದೇ ಇದ್ದ ಕಾರಣ ದೂರುದಾರರ ಪಾವತಿ ಮಾಡಿದ ಹಣ ರೂ.77,000 ಬಡ್ಡಿಯೊಂದಿಗೆ ದೂರುದಾರರಿಗೆ ಮರಳಿ ಕೊಡಬೇಕು ಅಂತಾ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಟ್ರೈಯೋ ಗ್ರೂಪ್ನ ಪ್ಯೂವರ್ ಎನರ್ಜಿ ಪ್ರೈ.ಲಿ. ಗೆ ನಿರ್ದೇಶಿಸಿದೆ.
ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut