ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಜನತೆಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಿಶೇಷವಾಗಿ ಆರೋಗ್ಯ ಇಲಾಖೆ, ಕೃಷಿ ವಲಯ ಹಾಗೂ ನಿರುದ್ಯೋಗಿ ಯುವಕರಿಗೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ: 2,500 ಹುದ್ದೆಗಳ ಭರ್ತಿ
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಆರೋಗ್ಯ ಮೂಲಸೌಕರ್ಯಕ್ಕಾಗಿ 900 ಕೋಟಿ ರೂ. ಮೀಸಲಿಡಲಾಗಿದ್ದು, ಪ್ರಮುಖ ಘೋಷಣೆಗಳು ಹೀಗಿವೆ:
ಟ್ರಾಮಾ ಕೇರ್: ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನೂತನ ಟ್ರಾಮಾ ಕೇರ್ ಸೆಂಟರ್ಗಳ ಸ್ಥಾಪನೆ.
ಐಸಿಯು ಮೇಲ್ದರ್ಜೆ: 45 ಕೋಟಿ ರೂ. ವೆಚ್ಚದಲ್ಲಿ ಐಸಿಯು ಉಪಕರಣಗಳ ಆಧುನೀಕರಣ.
ಉಚಿತ ಇನ್ಸುಲಿನ್: 18 ವರ್ಷದೊಳಗಿನ ಮಧುಮೇಹ ರೋಗಿಗಳಿಗೆ ಉಚಿತ ‘ಇನ್ಸುಲಿನ್ ಪೆನ್’ ವಿತರಣೆ.
ಕ್ಯಾನ್ಸರ್ ಚಿಕಿತ್ಸೆ: ಬೆಂಗಳೂರಿನಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರಗಳ ಸ್ಥಾಪನೆ.
ಮಕ್ಕಳ ಆರೋಗ್ಯ: ಅಪೌಷ್ಟಿಕತೆ ನಿವಾರಿಸಲು ‘ಪೌಷ್ಟಿಕ ಪುನಶ್ಚೇತನ ಕೇಂದ್ರ’ಗಳ ಸ್ಥಾಪನೆ.
ESI ಆಸ್ಪತ್ರೆಗಳು: ರಾಯಚೂರು, ಬಾಗಲಕೋಟೆ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ESI ಆಸ್ಪತ್ರೆಗಳ ಉನ್ನತೀಕರಣ.
ಕೃಷಿ ವಲಯ: ಎಐ ತಂತ್ರಜ್ಞಾನ ಮತ್ತು ವಸುಧಾಮೃತ ಯೋಜನೆ
ರೈತರ ಆದಾಯ ಹೆಚ್ಚಿಸಲು ಮತ್ತು ಮಣ್ಣಿನ ಗುಣಮಟ್ಟ ಸುಧಾರಿಸಲು ಸರ್ಕಾರ ಮುಂದಾಗಿದೆ:
ರೈತ ಕರೆ ಕೇಂದ್ರ: ಕೃಷಿ ಮಾಹಿತಿಗಾಗಿ AI (ಕೃತಕ ಬುದ್ಧಿಮತ್ತೆ) ಆಧಾರಿತ ರೈತ ಕರೆ ಕೇಂದ್ರ ಸ್ಥಾಪನೆ.
ವಸುಧಾಮೃತ ಯೋಜನೆ: ಮಣ್ಣಿನ ಗುಣಮಟ್ಟ ಹೆಚ್ಚಿಸಲು ಹೊಸ ಯೋಜನೆ ಜಾರಿ.
ಮಿಲೆಟ್ ಹಬ್: ಸಿರಿಧಾನ್ಯ ಉತ್ಪನ್ನಗಳ ಉತ್ತೇಜನಕ್ಕಾಗಿ ಪ್ರತ್ಯೇಕ ಹಬ್ ನಿರ್ಮಾಣ.
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಲಿದೆ.
ಉದ್ಯೋಗ ಮತ್ತು ಶಿಕ್ಷಣ
ಬೃಹತ್ ನೇಮಕಾತಿ: ಈ ವರ್ಷ ಒಟ್ಟು 56,432 ಉದ್ಯೋಗಗಳ ಭರ್ತಿಗೆ ಚಾಲನೆ ನೀಡಲಾಗುವುದು. ನೇಮಕಾತಿ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಘೋಷಿಸಲಾಗಿದೆ.
ಶ್ರಮಿಕ ಶಾಲೆ: ಕಾರ್ಮಿಕರ ಮಕ್ಕಳಿಗಾಗಿ 62 ನೂತನ ವಸತಿ ಶಾಲೆಗಳು ಸೇರಿದಂತೆ ಒಟ್ಟು 104 ಶಾಲೆಗಳ ಆರಂಭ.
ಕೌಶಲ್ಯ ಅಕಾಡೆಮಿ: ಹುಬ್ಬಳ್ಳಿ-ಧಾರವಾಡದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ.
ಗೃಹಲಕ್ಷ್ಮಿ ಮತ್ತು ಇತರೆ ಪ್ರಮುಖಾಂಶಗಳು
ಗೃಹಲಕ್ಷ್ಮಿ ಯೋಜನೆ: ಈ ವರ್ಷದ ಅನುಷ್ಠಾನಕ್ಕೆ 28,608 ಕೋಟಿ ರೂ. ಭಾರಿ ಅನುದಾನ ಮೀಸಲು.
ಧಾರ್ಮಿಕ ದತ್ತಿ: ಮುಜರಾಯಿ ಇಲಾಖೆಯ 259 ಕಲ್ಯಾಣಿಗಳ ಪುನರುಜ್ಜೀವನ.
ಆದಾಯ ಗುರಿ: ಅಬಕಾರಿ ಇಲಾಖೆಯಿಂದ 45,000 ಕೋಟಿ ರೂ. ಹಾಗೂ ನೋಂದಣಿ ಇಲಾಖೆಯಿಂದ 29,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ.
ರಾಜ್ಯದ ಸಾಲದ ಸ್ಥಿತಿ: ಕರ್ನಾಟಕದ ಒಟ್ಟು ಸಾಲದ ಮೊತ್ತ 8,24,389 ಕೋಟಿ ರೂಪಾಯಿಗಳಷ್ಟಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.





