ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ ಯೋಜನೆಗೆ ಚಾಲನೆ ನೀಡಿದ್ದಾರೆ. ಕ್ವಿನ್ ಸಿಟಿಯು ಒಂದೇ ಸ್ಥಳದಲ್ಲಿ ಸುಸ್ಥಿರ ಪರಿಸರದ ನಡುವೆ ಜ್ಞಾನ, ಆರೋಗ್ಯ, ನಾವೀನ್ಯತೆ ಹಾಗೂ ಸಂಶೋಧನೆಯನ್ನು ಒಟ್ಟುಗೂಡಿಸುವ ಹೊಸ ಪರಿಕಲ್ಪನೆಯುಳ್ಳ ನಗರವಾಗಿರಲಿದೆ.
ಈ ನಗರ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳು, ಆಧುನಿಕ ಆರೋಗ್ಯ ಸೇವಾ ಸೌಲಭ್ಯಗಳು, ಅತ್ಯಾಧುನಿಕ ಸಂಶೋಧನಾ ಕೇಂದ್ರಗಳು ಹಾಗೂ ನವೋದ್ಯಮ ಸಂಪ್ರದಾಯಗಳನ್ನು ಒಟ್ಟುಗೂಡಿಸುವ ಮತ್ತು ಸುಸ್ಥಿರ ಮೂಲಸೌಕರ್ಯ ಮತ್ತು ಅತ್ಯುತ್ತಮ ಸಂಪರ್ಕವಿರುವಂತಹ ವಿಶೇಷ ನಗರವಾಗಿರುತ್ತದೆ.
ಮೊದಲ ಹಂತದಲ್ಲಿ 2,000 ಎಕರೆಯಲ್ಲಿ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. 5 ಲಕ್ಷ ಜನವಸತಿ ಸಾಮರ್ಥ್ಯದ ಈ ನಗರದಲ್ಲಿ ಶೇ.40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗಿದೆ. ಜಲ ಪೂರಣ ವ್ಯವಸ್ಥೆ, 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆ, ಹಣ್ಣು-ತರಕಾರಿ ಕೃಷಿ ಕೂಡ ಮಾಡಲಾಗುತ್ತದೆ. ಕ್ವಿನ್ ಸಿಟಿ ಯೋಜನೆ ಮೂಲಕ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಗುಣಮಟ್ಟದ ಶಾಲಾ-ಕಾಲೇಜು, ವಿಶ್ವ ವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿ ಕೊಡಲಾಗುವುದು. ಜಗತ್ತಿನ ಅಗ್ರ 500 ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಉತ್ಕೃಷ್ಟ ದರ್ಜೆಯ ಆಸ್ಪತ್ರೆಗಳು, ವೈದ್ಯ ಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ 40,000 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ವಿವರಿಸಿದರು. ಕ್ವಿನ್ ಸಿಟಿ ಬಗೆಗಿನ ಮಾಹಿತಿಗೆ kwincity.com ನೋಡಬಹುದು.