ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಕಾರಣದಿಂದಾಗಿ ಕೆಲ ಕಂಪನಿಗಳು ಬೆಂಗಳೂರು ತೊರೆಯುತ್ತಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ 7,000 ರಸ್ತೆ ಗುಂಡಿ ಮುಚ್ಚಲಾಗಿದ್ದು, 5,000 ಬಾಕಿ ಇವೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದರು. ಈ ಬೆನ್ನಲ್ಲೇ ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಒಂದು ತಿಂಗಳು ಸಿಎಂ ಸಿದ್ಧರಾಮಯ್ಯ ಡೆಡ್ ಲೈನ್ ನೀಡಿದ್ದಾರೆ.
ಇಂದು ಈ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರು ಜಿಬಿಎ, ನಮ್ಮ ಮೆಟ್ರೋ, ಜಲಮಂಡಳಿ, ಬೆಸ್ಕಾಂ ಹಾಗೂ ವಿವಿಧ ಇಲಾಖೆಯ ಜೊತೆಗೆ ಸಭೆಯನ್ನು ನಡೆಸಿದರು.
ಈ ಸಭೆಯಲ್ಲಿ ಬೆಂಗಳೂರಲ್ಲಿನ ರಸ್ತೆ ಗುಂಡಿಗಳನ್ನು ಒಂದು ತಿಂಗಳ ಒಳಗಾಗಿ ಮುಚ್ಚುವಂತೆ ಖಡಕ್ ಸೂಚನೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದಾರೆ.
ಜಿಬಿಎ ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಗರಂ ಆದ ಘಟನೆಯೂ ನಡೆಯಿತು. ಇಂಜಿನಿಯರ್ ಗಳ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಟ ಎಂಬುದಾಗಿ ಗರಂ ಆದರು.
ನಿಮಗೆ ನಾಚಿಕೆ ಆಗಲ್ವ? ಎಂಬುದಾಗಿ ಕ್ಲಾಸ್ ತೆಗೆದುಕೊಂಡ ಸಿಎಂ ಸಿದ್ಧರಾಮಯ್ಯ, ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ. ಮುಚ್ಚಿರುವ ಗುಂಡಿಗಳೂ ನೆಟ್ಟಗಿಲ್ಲ. ಜನರ ಕಷ್ಟ ಗೊತ್ತಾಗಲ್ವ? ನಿಮ್ಮನ್ನು ಸಸ್ಪೆಂಡ್ ಮಾಡಿ, ಮನೆಗೆ ಕಳುಹಿಸಬೇಕಾಗುತ್ತದೆ ಎಂಬುದಾಗಿ ವಾರ್ನಿಂಗ್ ಮಾಡಿದ್ದಾರೆ.







