ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿಜಿ ರಾಮ್ ಜಿ ಎಂದು ನಾಮಕರಣ ಮಾಡುವ ಮೂಲಕ ಜನಪರ, ಬಡವರ ಪರವಾಗಿದ್ದ ಕಾರ್ಯಕ್ರಮವನ್ನು ಬುಡಮೇಲು ಮಾಡುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ನರೇಗಾ ಬಚಾವ್ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಬಡವರು, ಕಾರ್ಮಿಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹೆಸರಿನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತ್ತು. ಅಂದಿನಿಂದ ಇಂದಿನವರೆಗೆ ಕೋಟ್ಯಂತರ ಬಡಜನರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿದ್ದರು. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮನರೇಗಾ ಹೆಸರನ್ನು ಬದಲಿಸಿ ವಿಬಿಜಿ ರಾಮ್ ಜಿ ಹೆಸರಿನಲ್ಲಿ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ ಎಂದು ಕಿಡಿಕಾರಿದರು.
ರೈತರು, ಮಹಿಳೆಯರ ಜೀವನಾಧಾರಾವಾಗಿದ್ದ ಉದ್ಯೋಗದ ಹಕ್ಕನ್ನು ನೀಡಿದ್ದ ಮನರೇಗಾ ಹೆಸರನ್ನೇ ಬದಲಾಯಿಸುವ ಮೂಲಕ ಸ್ಥಳೀಯವಾಗಿ ಕೇಳಿ ಪಡೆಯುವ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಜನರ ಜೊತೆ, ರಾಜ್ಯ ಸರ್ಕಾರಗಳ ಜೊತೆ ಚರ್ಚೆ ಮಾಡದೇ ಸರ್ವಾಧಿಕಾರಿ ಧೋರಣೆ ಅನುಸರಿಸಿ ಬಡಜನರ ಆಶಯಗಳನ್ನು ಧ್ವಂಸ ಮಾಡಿದೆ ಮೋದಿ ಸರ್ಕಾರ. ಸಂಸತ್ತಿನಲ್ಲಿ ಇಂತಹ ಮಹತ್ತರ ಯೋಜನೆ ಬಗ್ಗೆ ಕೇವಲ 8 ಗಂಟೆ ಚರ್ಚೆ ಮಾಡಿ ಕಲಾಪವನ್ನು ಮುಂದೂಡುವಂತೆ ಮಾಡಿ ಅನುಮೋದನೆ ಪಡೆಯುವ ಮೂಲಕ ಮನೆ ಹಾಳು ನಿರ್ಧಾರವನ್ನು ಕೈಗೊಂಡಿದೆ ಎಂದು ಬೈರತಿ ಸುರೇಶ್ ತೀವ್ರ ವಾಗ್ದಾಳಿ ನಡೆಸಿದರು.
2025-26 ರಲ್ಲಿ ರಾಜ್ಯದಲ್ಲಿ 71.8 ಲಕ್ಷ ಸಕ್ರಿಯ ಕಾರ್ಮಿಕರಿದ್ದರು. 36.75 ಲಕ್ಷ ಮಹಿಳೆಯರಿಗೆ ಇದರಿಂದ ಅನುಕೂಲ ಪಡೆಯುತ್ತಿದ್ದರು. ಇಂತಹ ಯೋಜನೆಯನ್ನು ಬದಲಾಯಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಅವರೆಲ್ಲರ ಹಕ್ಕನ್ನು ಕಸಿದುಕೊಳ್ಳುವ ಲಜ್ಜೆಗೆಟ್ಟ ನಿರ್ಧಾರ ಕೈಗೊಂಡಿದೆ. ಸಣ್ಣ ರೈತರು, ಕೂಲಿ ಕಾರ್ಮಿಕರು ತಾವಿರುವ ಜಾಗದಲ್ಲಿಯೇ ಉದ್ಯೋಗ ಪಡೆದು ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದರು. ಆದರೆ, ಮೋದಿ ಸರ್ಕಾರ ಕಾರ್ಪೊರೇಟ್ ಮತ್ತು ಕೃಷಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳನ್ನು ಟೀಕಿಸುತ್ತಾ ಜನವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಬಿಜೆಪಿ ಜನರಿಗೆ ಮೋಸ ಮಾಡಿದೆ. ದಿನಕ್ಕೊಂದು ಸುಳ್ಳು ಹೇಳುತ್ತಲೇ ಬಿಜೆಪಿ ಚುನಾವಣೆಗಳನ್ನು ನಡೆಸುತ್ತಿದೆ. ಆ ಸುಳ್ಳುಗಳಿಗೆ ಇಂದಲ್ಲಾ ನಾಳೆ ಅಂತ್ಯ ಸಿಗಲಿದೆ. ಆಗ ಈ ಮೋದಿ ಸರ್ಕಾರವೂ ಅಂತ್ಯ ಕಾಣುತ್ತದೆ ಎಂದರು.
ಕೂಡಲೇ, ಜನವಿರೋಧಿ, ಕಾರ್ಮಿಕ ವಿರೋಧಿ ವಿಬಿಜಿ ರಾಮ್ ಜಿಯನ್ನು ಕೈಬಿಟ್ಟು ಮನರೇಗಾ ಕಾಯ್ದೆಯನ್ನು ಮರುಜಾರಿಗೆ ತರಬೇಕು, ಕಾರ್ಮಿಕರಿಗೆ ಕನಿಷ್ಠ 400 ರೂಪಾಯಿ ಕೂಲಿ ನಿಗದಿಪಡಿಸಬೇಕೆಂದು ಅವರು ಒತ್ತಾಯಿಸಿದರು.
ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA
ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!








