ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ (NA) ಗೊಂಡಿದ್ದರೂ, ಇನ್ನೂ ಅಭಿವೃದ್ಧಿಯಾಗದ (Converted but Un-developed) ಜಮೀನುಗಳ ಮಾಲೀಕರಿಗೆ ರಾಜ್ಯ ಸರ್ಕಾರವು ಮಹತ್ವದ ಸೌಲಭ್ಯವೊಂದನ್ನು ಕಲ್ಪಿಸಿದೆ. ಇಂತಹ ಜಮೀನುಗಳ ಪಹಣಿಗಳಲ್ಲಿ ಖಾತಾ ಬದಲಾವಣೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕಂದಾಯ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಏನಿದೆ ರಾಜ್ಯ ಸರ್ಕಾರದ ಆದೇಶದಲ್ಲಿ?
ಈ ಮೊದಲು ಭೂಪರಿವರ್ತನೆಗೊಂಡ ಪಹಣಿಗಳಲ್ಲಿ ‘NA’ ಎಂದು ಫ್ಲಾಗ್ ಆದ ನಂತರ, ಆಸ್ತಿ ಗುರುತಿನ ಸಂಖ್ಯೆ (ಇ-ಖಾತಾ) ಇಲ್ಲದೆ ನೋಂದಣಿ ಪ್ರಕ್ರಿಯೆಗೆ ಅಡಚಣೆಯಾಗುತ್ತಿತ್ತು. ಈಗ ‘ಭೂಮಿ’ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.
ಅಭಿವೃದ್ಧಿಯಾಗದ ಜಮೀನುಗಳಿಗೆ ಅವಕಾಶ: ಕೃಷಿಯೇತರ ಉದ್ದೇಶಕ್ಕೆ ಬದಲಾಗಿದ್ದರೂ, ಲೇಔಟ್ ಅಥವಾ ಇನ್ಯಾವುದೇ ಅಭಿವೃದ್ಧಿ ಕಾಣದ ಜಮೀನುಗಳನ್ನು ‘ಅಭಿವೃದ್ಧಿಯಾಗದ ಜಮೀನು’ ಎಂದು ಪರಿಗಣಿಸಿ, ಅವುಗಳ ಪಹಣಿ ಆಧಾರದ ಮೇಲೆ ನೋಂದಣಿ ಮತ್ತು ಖಾತಾ ಬದಲಾವಣೆಗೆ ಅವಕಾಶ ನೀಡಲಾಗಿದೆ.
ಮಾರುಕಟ್ಟೆ ಮೌಲ್ಯದ ಅನ್ವಯ: ಇಂತಹ ಜಮೀನುಗಳ ನೋಂದಣಿ ಸಂದರ್ಭದಲ್ಲಿ ಇವುಗಳನ್ನು ಕೃಷಿ ಜಮೀನು ಎಂದು ಪರಿಗಣಿಸದೆ, ಪ್ರಚಲಿತದಲ್ಲಿರುವ ಕೃಷಿಯೇತರ ಅಭಿವೃದ್ಧಿಯಾಗದ ಜಮೀನುಗಳ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳಲು ಸೂಚಿಸಲಾಗಿದೆ.
ಮ್ಯುಟೇಷನ್ ತಿರಸ್ಕರಿಸುವಂತಿಲ್ಲ: ಕೇವಲ ಭೂಪರಿವರ್ತನೆಯಾಗಿದೆ ಎಂಬ ಕಾರಣ ನೀಡಿ ಯಾವುದೇ ಮ್ಯುಟೇಷನ್ (ಖಾತಾ ಬದಲಾವಣೆ) ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ತಹಶೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಇ-ಸ್ವತ್ತು ಮತ್ತು ಇ-ಆಸ್ತಿ ಸಂಯೋಜನೆ: ಒಂದು ವೇಳೆ ಜಮೀನಿಗೆ ಈಗಾಗಲೇ ಇ-ಸ್ವತ್ತು ಅಥವಾ ಇ-ಆಸ್ತಿ ಗುರುತಿನ ಸಂಖ್ಯೆ ಸೃಜನೆಯಾಗಿದ್ದರೆ, ಅದರ ಮಾಹಿತಿಯನ್ನು ‘ಭೂಮಿ’ ತಂತ್ರಾಂಶಕ್ಕೆ ವರ್ಗಾಯಿಸಿ ಅದರ ಆಧಾರದ ಮೇಲೆ ವಹಿವಾಟು ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಯಾರಿಗೆ ಅನುಕೂಲ?
ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬದಲಿಸಿಕೊಂಡು, ಇನ್ನೂ ಸೈಟುಗಳನ್ನಾಗಿ ಮಾಡದ ಅಥವಾ ಅಭಿವೃದ್ಧಿ ಪಡಿಸದ ಮಾಲೀಕರಿಗೆ ಈ ನಿರ್ಧಾರದಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇದರಿಂದ ಮ್ಯುಟೇಷನ್ ಪ್ರಕ್ರಿಯೆ ವೇಗಗೊಳ್ಳಲಿದ್ದು, ಅನಗತ್ಯ ವಿಳಂಬಕ್ಕೆ ಬ್ರೇಕ್ ಬೀಳಲಿದೆ.









