ಬೆಂಗಳೂರು: ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಮತ್ತು ಬಂಟಿಂಗ್, ಬ್ಯಾನರ್ ಹಾಕಲು ಹಾಗೂ ಅನುಮತಿಗೆ ಸಂಬಂಧಿಸಿ ಸುಮಾರು 6 ಸಾವಿರ ಹಣ ಕಟ್ಟಿಸಿಕೊಂಡ ಬಳಿಕ ಅನುಮತಿ ನಿರಾಕರಿಸಿದ್ದು ಮತ್ತು ಬ್ಯಾನರ್, ಬಂಟಿಂಗ್ ತೆರವು ಮಾಡಿದ್ದು ಸರಿಯಲ್ಲ; ಇದು ಸ್ಥಳೀಯ ಆಡಳಿತದ ದುಂಡಾವರ್ತಿ ಕ್ರಮ ಮತ್ತು ಪ್ರಿಯಾಂಕ್ ಖರ್ಗೆಯವರ ದುರ್ನಡತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗಳಿಗೆ ಉತ್ತರಿಸಿದರು. ಆರೆಸ್ಸೆಸ್ ಪಥ ಸಂಚಲನಕ್ಕೆ ಸಂಬಂಧಿಸಿ ಪಿಡಿಒ ಒಬ್ಬರ ಅಮಾನತಿನ ಕುರಿತು ಪ್ರಶ್ನಿಸಿದಾಗ, ಆರೆಸ್ಸೆಸ್ ಎಂಬುದು ಒಂದು ರಾಜಕೀಯ ಪಕ್ಷವಲ್ಲ; ಎಲ್ಲ ಸಾರ್ವಜನಿಕ ಸಂಘಟನೆಯಂತೆ ಆರೆಸ್ಸೆಸ್ ಒಂದು ಸಂಘಟನೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕೇಂದ್ರ ಸರಕಾರದ ಆದೇಶವೂ ಇದೆ ಎಂದು ನುಡಿದರು.
ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರೇ, ಎಐಸಿಸಿಯಲ್ಲಿ ಅಲೆಮಾರಿ ಸಮುದಾಯಗಳ ಒಂದು ಘಟಕ ಇದೆ. ಈ ಘಟಕಕ್ಕೆ ಕರ್ನಾಟಕದಿಂದ ಡಾ.ಎ.ಎಸ್. ಪ್ರಭಾಕರ್ ಅವರನ್ನು ರಾಷ್ಟ್ರೀಯ ಸಂಚಾಲಕ ಎಂದು ನೇಮಿಸಿದ್ದಾರೆ. ಇವರು ಹಂಪಿ ವಿವಿಯ ಪ್ರೊಫೆಸರ್. ನೀವು ಎಐಸಿಸಿ ಪದಾಧಿಕಾರಿಯನ್ನಾಗಿ ಅವರನ್ನು ನೇಮಿಸಿದ್ದೀರಿ. ಇದು ಕಾನೂನುಬಾಹಿರವೇ? ಅಥವಾ ಸಾಮಾಜಿಕ ಸಂಘಟನೆಯಲ್ಲಿ ಭಾಗಿ ಆಗುವುದು ತಪ್ಪೇ ಎಂದು ಕೇಳಿದರು.
ಎಐಸಿಸಿ ಅಧ್ಯಕ್ಷರು ಇದಕ್ಕೆ ಉತ್ತರ ಕೊಡಲಿ
ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡಲು ಯಾರನ್ನಾದರೂ ನೇಮಿಸಬಹುದು; ಆದರೆ, ಸಂಘಟನೆಗಳಲ್ಲಿ ಕೆಲಸ ಮಾಡಬಾರದೆಂಬ ಯಾವ ನೀತಿ ಇದು ಎಂದು ಟೀಕಿಸಿದರು. ರಾಜ್ಯದಲ್ಲಿ ಆಗುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ತರುತ್ತಿದ್ದಾರೆ ಎಂದು ದೂರಿದರು. ಆರೆಸ್ಸೆಸ್ ವಿಚಾರ ಪ್ರಶ್ನೆ ಕೇಳಿದ ಕಾರಣಕ್ಕೆ ಈ ಉತ್ತರ ನೀಡುತ್ತಿರುವುದಾಗಿ ಹೇಳಿದರು. ಆರೆಸ್ಸೆಸ್ ದೇಶದ ಪರವಾಗಿ ಕೆಲಸ ಮಾಡುವ ಸಂಘಟನೆ. ದೇಶಭಕ್ತರ ಕೂಟ ಎಂದರು.
ಬಡವರ ಮೇಲೆ ಕರುಣೆ ಇದೆಯೇ..
ಪ್ರಿಯಾಂಕ್ ಖರ್ಗೆಯವರೇ, ಮೈಸೂರಿನಲ್ಲಿ ಗುಲ್ಬರ್ಗ ಮೂಲದ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ನೀವು ಗುಲ್ಬರ್ಗದ ಸಚಿವರಲ್ಲವೇ? ನೀವು ಅಲ್ಲಿ ಹೋಗಿ ಏನಾಗಿದೆ ಎಂದು ಪರಿಶೀಲನೆ ಮಾಡಿದ್ದೀರಾ? ನಿಮಗೆ ಆ ಅಲೆಮಾರಿಗಳು, ಬಡವರ ಮೇಲೆ ಕರುಣೆ ಇದೆಯೇ ಎಂದು ಕೇಳಿದರು.
ಬಿಜಾಪುರದಲ್ಲಿ 9-10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಸಾಯಿಸಿದ್ದಾರೆ. ಅದರ ಬಗ್ಗೆ ನೀವು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ಊರಿನಲ್ಲಿ ವಾಡಿಯ ಶಾಲೆಯ ಮೇಲ್ಛಾವಣಿ ಬಿದ್ದು ಹೋಗಿದೆ. ರಜೆ ಇರುವ ಕಾರಣ ಮಕ್ಕಳು ಬಚಾವ್ ಆಗಿದ್ದಾರೆ. ಅದರ ಬಗ್ಗೆ ನೀವೇನಾದರೂ ತಲೆ ಕೆಡಿಸಿಕೊಂಡಿದ್ದೀರಾ? ನೀವು ಅಲ್ಲೇ ಲೈಬ್ರೆರಿಯನ್ ತಮಗೆ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಕುರಿತು ನೀವು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮದೇ ಇಲಾಖೆ ನೀರಘಂಟಿ 23 ತಿಂಗಳುಗಳಿಂದ ವೇತನ ಸಿಕ್ಕಿಲ್ಲ ಎಂದಿದ್ದಾರೆ. ಇಂಥವನ್ನು ಮರೆಮಾಚಲು, ನಿಮ್ಮನ್ನು ಎಲ್ಲರೂ ಅಯೋಗ್ಯರು ಎನ್ನುವುದನ್ನು ತಪ್ಪಿಸಿಕೊಳ್ಳಲು ನೀವು ಆರೆಸ್ಸೆಸ್, ಆರೆಸ್ಸೆಸ್ ಎನ್ನುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ನೀವು ಅಧಿಕಾರ ನಡೆಸಲು ಯೋಗ್ಯರಲ್ಲ..
ನಿಮಗ್ಯಾಕೆ ಸಚಿವ ಸ್ಥಾನ ಎಂದು ಕೇಳಿದರು. ನೀವು ಸಚಿವ ಸ್ಥಾನ ನಿಭಾಯಿಸುವಲ್ಲಿ ವಿಫಲವಾಗಿದ್ದೀರಿ. ಜನರನ್ನು ದಾರಿ ತಪ್ಪಿಸಿ ಅವರ ಜೀವನದಲ್ಲಿ ಆಟ ಆಡುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು. ಅತಿವೃಷ್ಟಿ, ಅನಾವೃಷ್ಟಿಗೆ ಹಣ ಕೊಟ್ಟಿಲ್ಲ; ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ; ಶೇ 80 ಕಮಿಷನ್ ಎಂದು ಅವರು ಹೇಳುತ್ತಿದ್ದಾರೆ. ಇವುಗಳನ್ನು ಪರಿಹರಿಸದೆ ನೀವು ಕ್ಷುಲ್ಲಕ ಕಾರಣ ಇಟ್ಟುಕೊಂಡು ಇದನ್ನೆಲ್ಲ ಮಾಡುತ್ತ ಇದ್ದೀರಲ್ಲವೇ? ನೀವು ಅಧಿಕಾರ ನಡೆಸಲು ಯೋಗ್ಯರಲ್ಲ ಎಂದು ಆಕ್ಷೇಪಿಸಿದರು.
ಪ್ರಿಯಾಂಕ್ ಖರ್ಗೆ ಹೊಣೆಗೇಡಿ; ದುರಹಂಕಾರದ ಕಣಜ ಎಂದು ದೂರಿದರು. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡು ಕೆರಕೊಂಡ ಪರಿಸ್ಥಿತಿ ಇವರದು ಎಂದು ಟೀಕಿಸಿದರು.
ನೀವು ದಲಿತ ಸಮುದಾಯದಿಂದ ಬಂದವರು. ದಲಿತರಿಗೆ ಈ ಸಮಾಜದಲ್ಲಿ ಯಾವ ಪರಿಸ್ಥಿತಿ ಇದೆ ಎಂದು ನಿಮಗೂ ಗೊತ್ತಿದೆ. ಯಾವತ್ತಾದರೂ ಒಂದು ದಿನ ಇಷ್ಟೊಂದು ದಲಿತ ಸಂಘಟನೆಗಳಲ್ಲಿ ಪ್ರಿಯಾಂಕ್ ಖರ್ಗೆ ಕೆಲಸ ಮಾಡಿದ್ದಾರಾ ಎಂದು ಕೇಳಿದರು.