ಬೆಂಗಳೂರು : ಪರಿಶಿಷ್ಟ ಜಾತಿಯೊಂದಿಗೆ ಜೋಡಿತಗೊಂಡ 14 ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿಲ್ಲ ಎಂದು ಆಯೋಗದ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರಾದ ವಿ. ಸುನಿಲ್ ಕುಮಾರ್ ಅವರುಗಳು ಆಯೋಗದ ಅಧ್ಯಕ್ಷರಿಗೆ 2025ನೇ ಸೆಪ್ಟೆಂಬರ್ 23 ರಂದು ಮನವಿ ಸಲ್ಲಿಸಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್ ಮತ್ತು ವಾಲ್ಮೀಕಿ ಕ್ರಿಶ್ಚಿಯನ್ ಜಾತಿಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸೇರಿಸಬಾರದು ಎಂದು ಆಗ್ರಹಿಸಿರುತ್ತಾರೆ.
ಈ 14 ಜಾತಿಗಳ ಕುರಿತು ಇಂದು ನಡೆದ ಆಯೋಗದ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಪರಿಶೀಲಿಸಲಾಯಿತು. ಅಲ್ಲದೇ 2025 ನೇ ಆಗಸ್ಟ್ 22 ರಂದು ಪತ್ರಿಕೆಗಳಲ್ಲಿ ಸಲಹೆ ಕೋರಿ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಈ ಜಾತಿಗಳ ಹೆಸರು ನಮೂದಾಗಿತ್ತು.
ನಂತರ ಸ್ವೀಕರಿಸಿರುವ ಸಲಹೆ ಮತ್ತು ಚರ್ಚೆಯ ನಂತರ ಮೇಲಿನ ಜಾತಿಗಳು ಸೇರಿದಂತೆ ಹಲವು ಜಾತಿಗಳ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈಬಿಟ್ಟು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಆದಾಗ್ಯೂ ಸಮೀಕ್ಷಾ ಕೈಪಿಡಿ-2025 ರ ಪುಟ ಸಂಖ್ಯೆ:57 ರಿಂದ 89 ರವರೆಗಿನ 1561 ಜಾತಿಗಳ ಪಟ್ಟಿಯಲ್ಲಿ ಹಾಗೂ EDCS ಸಂಸ್ಥೆಯು ಸಿದ್ಧಪಡಿಸಿರುವ ಸಮೀಕ್ಷಾ ಆಪ್ನಲ್ಲಿ ಅಳವಡಿಸಿರುವ ಜಾತಿ ಪಟ್ಟಿಯ Drop-down ನಲ್ಲಿಯೂ ಸಹ ಮೇಲ್ಕಂಡ 14 ಜಾತಿಗಳು ಸೇರಿರುವುದಿಲ್ಲವೆಂಬ ಅಂಶವನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು ಸ್ಪಷ್ಟಿಕರಣವನ್ನು ನೀಡಿರುತ್ತಾರೆ







