ಬೆಂಗಳೂರು: “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025”ಕ್ಕೆ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧೇಯಕವನ್ನು ಗುರುವಾರದಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಂತರ ಮಾತನಾಡಿದರು. “ಬೆಂಗಳೂರು ನಗರದ ಖಾಸಗಿ ಬಡಾವಣೆಗಳಲ್ಲಿ ರಸ್ತೆಗಳನ್ನು ಮಾಡಲಾಗಿದೆ. ಆ ರಸ್ತೆಗಳನ್ನು ನಾವು ಸಹ ಅಭಿವೃದ್ದಿ ಮಾಡಿದ್ದೇವೆ. ನಿವೇಶನಗಳನ್ನು ಮಾಡಿ ಹಂಚಿದ್ದರೂ ಸಹ ಕಂದಾಯ ದಾಖಲೆಗಳಲ್ಲಿ ಇನ್ನೂ ಭೂ ಮಾಲೀಕರ ಹೆಸರು ನಮೂದಾಗಿಯೇ ಇದೆ. ಈ ಭೂ ದಾಖಲೆಗಳನ್ನು ನವೀಕರಣ ಮಾಡಬೇಕಿದೆ. ಖಾಸಗಿ ಬಡಾವಣೆಗಳ ರಸ್ತೆಗಳನ್ನು ಸರ್ಕಾರಿ ರಸ್ತೆಗಳೆಂದು ಘೋಷಣೆ ಮಾಡಬೇಕಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಂತರ ಮಾತನಾಡಿದ ಅವರು, “ಭೂ ಮಾಲೀಕರಲ್ಲಿ ಒಂದಷ್ಟು ಜನ ನಾವು ನಿವೇಶನ ಮಾತ್ರ ಹಂಚಿದ್ದೇವೆ. ರಸ್ತೆ ನೀಡಿಲ್ಲ ಎಂದು ಈಗ ತಕರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ರಸ್ತೆಗಳನ್ನು ತೆಗೆದು ಮಾರಾಟ ಮಾಡಲು ಪ್ರಯತ್ನ ಮಾಡುವುದು ನಡೆಯುತ್ತಿದೆ. ಸರ್ಕಾರ ಟಿಡಿಆರ್ ನೀಡುತ್ತದೆ ಎಂದು ಈಗ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಅವರ ಬಡಾವಣೆಗಳಿಗೆ ರಸ್ತೆ ಮಾಡಿ ಅದಕ್ಕೆ ಈಗ ಪರಿಹಾರ ನೀಡಿ ಎಂದರೆ ಹೇಗೆ? ಆದ ಕಾರಣ ಈ ಪರಿಹಾರಗಳನ್ನು ನೀಡಲು ಆಗುವುದಿಲ್ಲ ಎಂದು ಈ ತಿದ್ದುಪಡಿ ತರಲಾಗಿದೆ” ಎಂದರು.
ಪ್ರಸ್ತುತ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಕಾಯ್ದೆ ಜಾರಿಗೆ ತಂದಿದ್ದು, ಮುಂದಕ್ಕೆ ಪಟ್ಟಣಗಳು, ಪಂಚಾಯಿತಿಗಳಲ್ಲೂ ಜಾರಿಗೆ ತರಬೇಕಾಗುತ್ತದೆ” ಎಂದು ಹೇಳಿದರು.
ಲೆವಿಯನ್ನು ಹಾಕುವ ಅಧಿಕಾರ ಮುಖ್ಯ ಆಯುಕ್ತರಿಗಿತ್ತು. ಇದು ಏಕಾಂಗಿ ನಿರ್ಧಾರಕ್ಕೆ ಕಾರಣವಾಗುತ್ತದೆ. ಈ ಅಧಿಕಾರವನ್ನು ಪಾಲಿಕೆಗೆ ನೀಡಿ, ಸಭೆಗಳಲ್ಲಿ ಇಟ್ಟು ತೀರ್ಮಾನ ಮಾಡುವುದನ್ನು ತಿದ್ದುಪಡಿಯಲ್ಲಿ ತರಲಾಗಿದೆ. ಅಕ್ರಮ ನಿರ್ಮಾಣಗಳಿಗೆ ಪಾಲಿಕೆಗೆ ಸೀಲಿಂಗ್ ಮಾಡುವ ಅವಕಾಶವಿರಲಿಲ್ಲ. ತಿದ್ದುಪಡಿ ಮೂಲಕ ಈ ಅವಕಾಶವನ್ನು ತರಲಾಗಿದೆ”ಎಂದು ಹೇಳಿದರು.
ಚರ್ಚೆಯ ವೇಳೆ ಮಾತನಾಡಿದ ಡಿಸಿಎಂ ಅವರು “ಉದಾಹರಣೆಗೆ ಒಬ್ಬ ವ್ಯಕ್ತಿ 30/40 ಅಳತೆಯ ನಿವೇಶನ ಅಥವಾ ಅನೇಕ ನಿವೇಶನಗಳು ಸೇರಿ 20 ಸಾವಿರ ಚದರ ಅಡಿ ನಿವೇಶನಗಳನ್ನು ಉಪನೋಂದಾವಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿರುತ್ತಾನೆ. ಈಗಾದಾಗ ಮಿಕ್ಕ ಜಾಗಗಳು ಅವನ ಹೆಸರಿಗೆ ಬರದಂತೆ ಹಾಗೂ ಆತನ ಹೆಸರಿನಲ್ಲಿ ಪಹಣಿಯನ್ನೂ ಉಳಿಸಿಕೊಳ್ಳಲು ನೋಡುತ್ತಾನೆ. ಈಗ ಅನೇಕರು ತಕರಾರು ತೆಗೆದು ರಸ್ತೆಯ ಮಧ್ಯೆ ಗೋಡೆ ಎಬ್ಬಿಸುವುದು ಅಥವಾ ಅನೇಕರು ಈ ವಿಚಾರ ನನಗೆ ಗೊತ್ತಿಲ್ಲ, ನನ್ನ ತಂದೆ ಈ ರೀತಿ ಮಾಡಿದ್ದಾರೆ. ನಾನು ಮಾಡಿಲ್ಲ, ನನಗೆ ಗೊತ್ತಿಲ್ಲ ಎನ್ನುವುದೂ ನಡೆಯುತ್ತಿದೆ” ಎಂದರು.
“ಕೊಳೆಗೇರಿಗಳನ್ನು ಅಭಿವೃದ್ದಿ ಮಾಡುತ್ತೇವೆ, ಕಂದಾಯ ಬಡಾವಣೆಗಳನ್ನು ಮಾಡದೇ ಇರುತ್ತೇವಾ? ಕಳೆದ ನೂರಾರು ವರ್ಷಗಳಿಂದ ರಸ್ತೆ ಎಂದು ಬಳಸಿರುವುದನ್ನು ಈಗ ನನ್ನ ಆಸ್ತಿ ಎಂದು ಅಧಿಕಾರ ಚಲಾಯಿಸಲು ಹೋಗಬಾರದು. ರಸ್ತೆಗಳು ಸರ್ಕಾರದ ಆಸ್ತಿಗಳು. ಈ ದೃಷ್ಟಿಯಿಂದ ತಿದ್ದುಪಡಿ ಮಾಡಲಾಗಿದೆ. ಇನ್ನೂ ಕೆಲವೊಂದು ಕಡೆ ಕಾಂಪೌಂಡ್ ಕಮ್ಯುನಿಟಿ ಎಂದು ಮಾಡಿರುತ್ತಾರೆ. ಈ ಹಿಂದೆ ಎಂಬೆಸಿಯವರು ಈ ರೀತಿ ಮಾಡಿದ್ದರು. ನಂತರ ಸಾರ್ವಜನಿಕರು ನ್ಯಾಯಲಯಕ್ಕೆ ತೆರಳಿ ಸಮಸ್ಯೆ ಬಗೆಹರಿಸಲಾಯಿತು. ಜನರ ಬಳಕೆಗೆ ಮುಕ್ತವಾಗಿರಬೇಕು ಎಂಬುದು ನಮ್ಮ ಆಶಯ” ಎಂದರು.
ಈಗಾಗಲೇ ಗೇಟೆಡ್ ಕಮ್ಯೂನಿಟಿ ಎಂದು ಮಾಡಿರುವುದರ ಬಗ್ಗೆ ಸರ್ಕಾರ ನಿಲುವೇನು ಎಂದು ಪ್ರತಿಪಕ್ಷಗಳು ಪ್ರಶ್ನಿಸಿದಾಗ, “ಒಂದು ಬಡಾವಣೆ ಮಾಡಿದರೆ ಒಳಬರಲು ಮತ್ತು ಹೊರ ಹೋಗಲು ವ್ಯವಸ್ಥೆ ಇರಬೇಕು. ಈಗಾಗಲೇ ಮಾಡಿರುವುದರ ಬಗ್ಗೆ ಮುಂದಕ್ಕೆ ಆಲೋಚಿಸಿ ಕ್ರಮ ತಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
ಬಂದ್ ಗಳಿಗೆ ಉತ್ತೇಜನ ನೀಡುವುದಿಲ್ಲ:
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾ.22 ರಂದು ನಡೆಯಲಿರುವ ಕರ್ನಾಟಕ ಬಂದ್ ನಿಂದ ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆಯಾಗುತ್ತದೆ ಎನ್ನುವ ವಿಚಾರ ಪ್ರಸ್ತಾಪಿಸಿದಾಗ, “ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಕಾರಣ ಬಂದ್ ಗಳಿಗೆ ಉತ್ತೇಜನ ನೀಡಲು ಸಾಧ್ಯವಿಲ್ಲ. ರಾಜಕೀಯವಾಗಿ ಹಾಗೂ ನ್ಯಾಯಲಯ ಸಹ ಇದಕ್ಕೆ ಬೆಂಬಲ ನೀಡುವುದಿಲ್ಲ. ಬಂದ್ ಕರೆ ನೀಡಿರುವವರಿಗೆ ತಿಳುವಳಿಕೆ ನೀಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
“ಈಗಾಗಲೇ ಪರೀಕ್ಷೆಗಳು ಪ್ರಾರಂಭವಾಗಿವೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಬಳಿ ಮಾತನಾಡಿ ಹೇಳಿಕೆ ನೀಡಲಾಗುವುದು” ಎಂದು ಸದನಕ್ಕೆ ತಿಳಿಸಿದರು.
ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 900, ನಿಫ್ಟಿ 23,100 ಅಂಕ ಏರಿಕೆ | Sensex, Nifty Update