ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ತಮ್ಮ ಹೇಳಿಕೆಗಳ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ, ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಸುಗಮ ಬಿಡುಗಡೆಗೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಕಮಲ್ ಹಾಸನರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಿ.ರಾಜಗೋಪಾಲಚಾರಿ ಇದೇ ರೀತಿ ಹೇಳಿಕೆ ನೀಡಿದ್ರು. ನಂತರ ಅವರು ಕ್ಷಮೆಯಾಚನೆ ಮಾಡಿದ್ದರು. ಆದರೆ ಕಮಲ್ ಹಾಸನ್ ಕ್ಷಮೆ ಕೇಳಿಲ್ಲ. ನಿಮ್ಮ ಹೇಳಿಕೆಯಿಂದ ಶಿವರಾಜ್ ಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ.
‘ಕನ್ನಡ ತಮಿಳಿನಿಂದ ಹುಟ್ಟಿತು’ ಎಂಬ ಹಾಸನ್ ಹೇಳಿಕೆಗೆ ಔಪಚಾರಿಕ ಕ್ಷಮೆಯಾಚಿಸದಿದ್ದರೆ ಚಿತ್ರ ಬಿಡುಗಡೆಯನ್ನು ನಿಷೇಧಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಎಚ್ಚರಿಕೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಜೂನ್ 5 ರಂದು ತೆರೆಗೆ ಬರಲಿರುವ ‘ಥಗ್ ಲೈಫ್’, ಮೇ 24 ರಂದು ಚೆನ್ನೈನಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಸನ್ ಅವರ ಹೇಳಿಕೆಗಳ ನಂತರ ವಿವಾದಕ್ಕೆ ಸಿಲುಕಿದೆ. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಾಸನ್, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.