ಬೆಳಗಾವಿ : ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನದ ಬೆನ್ನಲ್ಲೇ ಇದೀಗ ಸಿಎಂ ಬಲಾವಣೆ ಕುರಿತು ಕೂಗು ಕೇಳಿ ಬರುತ್ತಿದ್ದು, ನಿನ್ನೆ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿಯವರು ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂದು ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಮನವಿ ಮಾಡಿದರು. ಇದೀಗ ಶ್ರೀಶೈಲ ಜಗದ್ಗುರುಗಳು ಕೂಡ ಸಿಎಂ ಬದ್ಲಾವಣೆ ಆದರೆ ವೀರಶೈವ ಲಿಂಗಾಯತ ಸಮುದಾಯದವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾದರೆ ವೀರಶೈವ ಲಿಂಗಾಯತರಿಗೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಅನೇಕರಿಗೆ ಆದ್ಯತೆ ಕೊಡಬೇಕು ಎಂದು ಸ್ವಾಮೀಜಿ ಈ ಕುರಿತು ಆಗ್ರಹಿಸಿದ್ದಾರೆ.

ಸಿಎಂ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ವೀರಶೈವ ಲಿಂಗಾಯತ ಸಮುದಾಯದ ಸಚಿವರಿಗೆ ಆದ್ಯತೆ ನೀಡಬೇಕು.ಕಾಂಗ್ರೆಸ್ ಗೆ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಕೊಟ್ಟಿದ್ದಾರೆ. ಸಚಿವರಾದ ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನವರಿಗೆ ಅವಕಾಶ ನೀಡಬೇಕು.

ಈ ಬಗ್ಗೆ ಕಾಶಿ ಉಜ್ಜಯನಿ ಜಗದ್ಗುರುಗಳ ಜೊತೆಯು ಚರ್ಚಿಸಿದ್ದೇವೆ ಒಂದು ವೇಳೆ ಸಿಎಂ ಮಾಡುವ ಸಂದರ್ಭದಲ್ಲಿ ಒಡಂಬಡಿಕೆ ಆಗಿದ್ದರೆ ಕೊಡಂಬಡಿಕೆ ಪ್ರಕಾರ ನಡೆದುಕೊಳ್ಳುವಂತೆ ಶ್ರೀಶೈಲ ಜಗದ್ಗುರುಗಳು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಸಿಎಂ ಡಿಸಿಎಂ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ.

Share.
Exit mobile version