ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ ಕೊನೆಯ ವಾರದಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಭಾರಿ ಹಿನ್ನಡೆಯಾಗಿದೆ. ಸಾರಿಗೆ ಕಾರ್ಮಿಕ ಸಂಘಟನೆಗಳ ‘ಜಂಟಿ ಕ್ರಿಯಾ ಸಮಿತಿ’ಯಿಂದ ಪ್ರಮುಖ ನೌಕರರ ಸಂಘಟನೆಗಳು ಹೊರಬಂದಿದ್ದು, ಮುಷ್ಕರಕ್ಕೆ ನೀಡಿದ್ದ ಬೆಂಬಲವನ್ನು ತಕ್ಷಣದಿಂದಲೇ ಹಿಂಪಡೆದಿರುವುದಾಗಿ ಪ್ರಕಟಿಸಿವೆ.
ಜಂಟಿ ಕ್ರಿಯಾ ಸಮಿತಿಯಲ್ಲಿ ಭಿನ್ನಾಭಿಪ್ರಾಯ ಸ್ಫೋಟ
‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ (ರಿ)’ ಹಾಗೂ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂ ನೌಕರರ ಸಂಘ (ರಿ)’ ಪ್ರತ್ಯೇಕ ಪತ್ರಗಳ ಮೂಲಕ ಜಂಟಿ ಕ್ರಿಯಾ ಸಮಿತಿಯಿಂದ ಹೊರಬರುವುದಾಗಿ ಅಧಿಕೃತವಾಗಿ ಘೋಷಿಸಿವೆ.
ಸಾರಿಗೆ ಕಾರ್ಮಿಕರ ಹಿತರಕ್ಷಣೆ ಮತ್ತು 2020-24ರ ವೇತನ ಒಪ್ಪಂದದ ಸಂಬಂಧ ತಾವು ಜಂಟಿ ಕ್ರಿಯಾ ಸಮಿತಿಗೆ ಸಂಪೂರ್ಣ ಬೆಂಬಲ ನೀಡಿದ್ದಾಗಿ ಸಂಘಟನೆಗಳು ತಿಳಿಸಿವೆ. ಆದರೆ, ಮುಷ್ಕರದ ಕರೆ ನೀಡಿದ ನಂತರ ಜಂಟಿ ಕ್ರಿಯಾ ಸಮಿತಿಯೊಳಗೆ ಭಿನ್ನಾಭಿಪ್ರಾಯಗಳು ಮತ್ತು ಅಸಮಾಧಾನಗಳು ತಲೆದೋರಿವೆ. ನೌಕರರಿಗೆ ನ್ಯಾಯ ಒದಗಿಸಲು ಹಾಗೂ ಯಾವ ಉದ್ದೇಶಕ್ಕಾಗಿ ಬೆಂಬಲ ನೀಡಲಾಗಿತ್ತೋ ಆ ಉದ್ದೇಶಗಳು ಈಡೇರುತ್ತಿಲ್ಲ ಎಂಬ ಕಾರಣ ನೀಡಿ ಈ ನಿರ್ಧಾರಕ್ಕೆ ಬರಲಾಗಿದೆ.
ವ್ಯವಸ್ಥಾಪಕ ನಿರ್ದೇಶಕರ ಭರವಸೆಗೆ ಮಣಿದ ನೌಕರರು
ಮೇ 18ರಂದು ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಸಂಧಾನ ಸಭೆ ನಡೆದ ಬೆನ್ನಲ್ಲೇ, ಅಂದು ರಾತ್ರಿ 7.50ಕ್ಕೆ ಸಾರಿಗೆ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ನೌಕರರ ಸಂಘಟನೆಯ ಪದಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ.
ಸರ್ಕಾರದ ಪ್ರಸ್ತುತ ಕಾರ್ಯಕ್ರಮಗಳು ಮುಗಿದ ತಕ್ಷಣವೇ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರನ್ನು ವೈಯಕ್ತಿಕವಾಗಿ ಒಪ್ಪಿಸಿ, ನೌಕರರ ಬೇಡಿಕೆಗಳ ಈಡೇರಿಕೆ ಕುರಿತು ಚರ್ಚಿಸಲು ಸೂಕ್ತ ಅವಕಾಶ ಕಲ್ಪಿಸಿಕೊಡುವುದಾಗಿ ವ್ಯವಸ್ಥಾಪಕ ನಿರ್ದೇಶಕರು ನೌಕರರ ಸಂಘಟನೆಗಳಿಗೆ ದೃಢ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಮುಷ್ಕರದಿಂದ ದೂರ ಸರಿದ ಪದಾಧಿಕಾರಿಗಳು
ವ್ಯವಸ್ಥಾಪಕ ನಿರ್ದೇಶಕರ ಮಾತಿಗೆ ಗೌರವ ನೀಡಿ ಹಾಗೂ ಅವರ ಮೇಲಿನ ನಂಬಿಕೆಯಿಂದಾಗಿ ಮೇ 18ರ ರಾತ್ರಿ 11 ಗಂಟೆಗೆ ತುರ್ತು ಸಭೆ ನಡೆಸಿದ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ’ ಪದಾಧಿಕಾರಿಗಳು, ಸರ್ವಾನುಮತದಿಂದ ಜಂಟಿ ಕ್ರಿಯಾ ಸಮಿತಿಯಿಂದ ಹೊರಬರಲು ನಿರ್ಧರಿಸಿದ್ದಾರೆ.
ಅದೇ ರೀತಿ, ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂ ನೌಕರರ ಸಂಘ’ ಕೂಡ ರಾಜ್ಯ ಅಧ್ಯಕ್ಷರಾದ ಎಫ್.ಹೆಚ್. ಜಕ್ಕಪ್ಪನವರ ಅವರ ಆದೇಶದ ಮೇರೆಗೆ ಜಂಟಿ ಕ್ರಿಯಾ ಸಮಿತಿಯಿಂದ ತಕ್ಷಣವೇ ನಿರ್ಗಮಿಸುತ್ತಿರುವುದಾಗಿ ಮತ್ತು ತಮ್ಮ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬೆಳವಣಿಗೆಗಳ ಕುರಿತು ಎರಡೂ ಸಂಘಟನೆಗಳು ಸಾರಿಗೆ ನಿಗಮದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಪತ್ರದ ಮೂಲಕ ಮಾಹಿತಿ ರವಾನಿಸಿವೆ. ಪ್ರಮುಖ ಸಂಘಟನೆಗಳು ಮುಷ್ಕರದಿಂದ ಹಿಂದೆ ಸರಿದಿರುವುದರಿಂದ ಸಾರಿಗೆ ನೌಕರರ ಮುಂದಿನ ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.








