ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ಗಳನ್ನು ಬಿಜೆಪಿ ಹೈಕಮಾಂಡ್ ಗೆ ನೀಡಿ ಹುದ್ದೆ ಸ್ವೀಕಾರ ಮಾಡಿದ್ದಾರೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ದಾಖಲಾಗಿದ್ದ ದೂರಿನ್ವಯ ಇಂದು ಸಿಎಂ ಸಿದ್ದರಾಮಯ್ಯ ಕೋರ್ಟ್ ಗೆ ಹಾಜರಾಗಲಿದ್ದಾರೆ.
ಭಾರತೀಯ ಜನತಾ ವಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಕೇಶವ ಪ್ರಸಾದ್ ರವರು ದಿನಾಂಕ: 08.05.2023 ರಂದು 42ನೇ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು. ಇಂದು ಬೆಳಗ್ಗೆ 10.30ಕ್ಕೆ ಕೋರ್ಟ್ ದೂರಿನ ಕುರಿತು ವಿಚಾರಣೆ ನಡೆಸಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.
ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ-2023 ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ರವರುಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರವು 2019 ರಿಂದ 2023 ರವರೆಗೆ ಭ್ರಷ್ಟ ಆಡಳಿತವನ್ನು ನೀಡಿರುತ್ತದೆ. ಅಂದರೆ ಸಿ.ಎಂ. ಹುದ್ದೆ- ರೂ.2500 ಕೋಟಿ, ಮಂತ್ರಿಗಳ ಹುದ್ದೆ- ರೂ. 500 ಕೋಟಿ ರೂಗಳನ್ನು ಬಿಜೆಪಿ ಹೈಕಮಾಂಡ್ ಗೆ ನೀಡಿ ಹುದ್ದೆ ಸ್ವೀಕಾರ ಮಾಡಿರುತ್ತಾರೆ. ಭ್ರಷ್ಟಾಚಾರ ಅಡಳಿತವನ್ನು ನೀಡಿರುತ್ತಾರೆ ಎಂದು ಆರೋಪಿಸಿದ್ದರು.
ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್ ನ ಡೀಲ್ ಗಳಲ್ಲಿ ಶೇಕಡಾ 75%, ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್ ನ ಡೀಲ್ ಗಳಲ್ಲಿ ಶೇಕಡಾ 40%, ಮಠಕ್ಕೆ ನೀಡುವ ಅನುದಾನದ ಡೀಲ್ ಗಳಲ್ಲಿ ಶೇಕಡಾ 30%, ಉವಕರಣಗಳ ಪೂರೈಕೆ ಡೀಲ್ ಗಳಲ್ಲಿ ಶೇಕಡಾ 40% ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್ ನ ಡೀಲ್ ಗಳಲ್ಲಿ ಶೇಕಡಾ 30% ಮತ್ತು ರಸ್ತೆ ಕಾಮಗಾರಿಗಳ ಟೆಂಡರ್ ನ ಡೀಲ್ ಗಳಲ್ಲಿ ಶೇಕಡಾ 40% ಮೊತ್ತದ ಶೇಕಡಾವಾರು ಕಮಿಷನ್ ಅನ್ನು ಟೆಂಡರ್ ದಾರರಿಂದ ಪಡೆದು ಭ್ರಷ್ಟ ಆಡಳಿತವನ್ನು ನೀಡಿರುವ ಅಂಕಿ ಅಂಶಗಳನ್ನು ದಿನಾಂಕ: 05.05.2023 ರಂದು ಪ್ರಜಾವಾಣಿ, ಇಂಡಿಯನ್ ಎಕ್ಸ್ ಪ್ರೆಸ್, ದಿ ಹಿಂದು, ದಿ ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ವಿಜಯವಾಣಿ, ಕನ್ನಡಪ್ರಭ ದಿನಪತ್ರಿಕೆಗಳಲ್ಲಿ ಬಿತ್ತರಗೊಂಡಿರುತ್ತದೆ. ಇದು ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಮಾಡಿರುವ ಅಪಮಾನವಾಗಿದೆ ಆದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರುಗಳ ವಿರುದ್ಧ ಕಲಂ 499, 500 ಐಪಿಸಿ ರೀತ್ಯಾ ಮಾನನಷ್ಟ ಮೊಕದ್ದಮೆಯ ಖಾಸಗಿ ದೂರನ್ನು ದಾಖಲು ಮಾಡಿಕೊಳ್ಳುವಂತೆ ಭಾರತೀಯ ಜನತಾ ವಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಕೇಶವ ಪ್ರಸಾದ್ ರವರು ದಿನಾಂಕ: 08.05.2023 ರಂದು 42ನೇ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿರುತ್ತಾರೆ.