ಬಿಜಾಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇಬ್ಬರು ಗ್ರಾಮಸ್ಥರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪಮೇಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಡ್ರಾಬೋರ್ ಮತ್ತು ಏಂಪುರ್ ಗ್ರಾಮಗಳಲ್ಲಿ ಇಬ್ಬರು ಮುಗ್ಧ ಗ್ರಾಮಸ್ಥರನ್ನು ನಕ್ಸಲರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಲೆಗಳ ಹಿಂದಿನ ಯಾವುದೇ ಕಾರಣವನ್ನು ಮತ್ತು ಅಪರಾಧ ಯಾವಾಗ ನಡೆಯಿತು ಎಂಬುದನ್ನು ನಿರ್ದಿಷ್ಟಪಡಿಸದೆ ಪೊಲೀಸರು ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಛತ್ತೀಸ್ ಗಢ ಭೇಟಿಗೆ ಮುಂಚಿತವಾಗಿ ಈ ಘಟನೆ ನಡೆದಿದೆ.ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಅಮಿತ್ ಶಾ ಭಾನುವಾರ ಮಧ್ಯಾಹ್ನ ರಾಯ್ಪುರಕ್ಕೆ ತಲುಪಲಿದ್ದಾರೆ.
ಜೂನ್ 17 ರಂದು ಬಿಜಾಪುರ ಜಿಲ್ಲೆಯ ಪೆದ್ದಕೋರ್ಮಾ ಬಿಜಾಪುರ ಗ್ರಾಮದಲ್ಲಿ 13 ವರ್ಷದ ಬಾಲಕ ಸೇರಿದಂತೆ ಮೂವರು ಗ್ರಾಮಸ್ಥರನ್ನು ನಕ್ಸಲರು ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದರು.
ಮೃತಪಟ್ಟ ಮೂವರಲ್ಲಿ ಇಬ್ಬರು ಈ ವರ್ಷದ ಮಾರ್ಚ್ನಲ್ಲಿ ಪೊಲೀಸರಿಗೆ ಶರಣಾದ ಹಿರಿಯ ಮಾವೋವಾದಿ ಕೇಡರ್ ದಿನೇಶ್ ಮೋದಿಯಮ್ ಅವರ ಸಂಬಂಧಿಕರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.