ಬೆಂಗಳೂರು : ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಸಿನಿಮಾ ನಿರ್ಮಾಣಕ್ಕೆಂದು ಪಡೆದ ಸಾಲ ಹಿಂತಿರುಗಿಸದೇ ವಂಚಿಸಿದ ಆರೋಪದಡಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ತಲಕಾವೇರಿ ಲೇಔಟ್ ನಿವಾಸಿ ಎಚ್.ಜಿ. ಲಕ್ಷ್ಮೀ ಅವರು ದೂರು ನೀಡಿದ್ದಾರೆ.
ನಟರಾದ ಶಿವರಾಜಕುಮಾರ್ ಹಾಗೂ ಗಣೇಶ್ ಅವರನ್ನು ಹಾಕಿಕೊಂಡು ‘ಪ್ರೊಡಕ್ಷನ್ ನಂಬರ್ 06’ ಚಿತ್ರ ನಿರ್ಮಿಸುತ್ತಿರುವುದಾಗಿ ನಂಬಿಸಿ 92.50 ಲಕ್ಷ ರೂ. ಪಡೆದುಕೊಂಡಿದ್ದರು. ಈ ಪೈಕಿ 25 ಲಕ್ಷ ರೂ. ಮಾತ್ರ ಹಿಂದಿರುಗಿಸಿ, ಉಳಿದ ಮೊತ್ತವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.