ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪೊಲೀಸ್ ಪದಕ’ವನ್ನು ಪ್ರಕಟಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಐಜಿಪಿ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಅವರು ಮಾರ್ಚ್ 27ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪ್ರಮುಖ ಪುರಸ್ಕೃತರು:
ಈ ಬಾರಿಯ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೇಬಲ್ ಹಂತದವರೆಗಿನ ಸಿಬ್ಬಂದಿ ಸೇರಿದ್ದಾರೆ. ಪ್ರಮುಖವಾಗಿ:
ಡಾ. ಸುಮನ್ ಡಿ. ಪೆನ್ನೇಕರ್ (ಎಸ್ಪಿ, ಬಳ್ಳಾರಿ ಜಿಲ್ಲೆ)
ಡಾ. ಅರುಣ್ ಕೆ. (ಎಸ್ಪಿ, ಉಡುಪಿ ಜಿಲ್ಲೆ)
ಪ್ರತೀಕ್ ಶಂಕರ್ (ಎಸ್ಪಿ, ಯಾದಗಿರಿ ಜಿಲ್ಲೆ)
ಡಾ. ಗೋಪಾಲ ಎಂ. ಬ್ಯಾಕೋಡ (ಡಿಸಿಪಿ, ಸಂಚಾರ ದಕ್ಷಿಣ ವಿಭಾಗ, ಬೆಂಗಳೂರು) ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಟ್ಟು 153 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ.
ಏಪ್ರಿಲ್ 2ರಂದು ಪದಕ ಪ್ರದಾನ ಸಮಾರಂಭ:
ಪದಕ ಪುರಸ್ಕೃತರಿಗೆ ಏಪ್ರಿಲ್ 02, 2026 ರಂದು ನಡೆಯುವ ವಿಶೇಷ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ತಾಲೀಮು ಮತ್ತು ನಿಯಮಗಳು:
ಪೂರ್ವಭಾವಿ ತಾಲೀಮು: ಪದಕ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ಮಾರ್ಚ್ 29, 2026 ರಿಂದಲೇ ಪೂರ್ವಭಾವಿ ತಾಲೀಮು (ರಿಹರ್ಸಲ್) ನಡೆಯಲಿದೆ. ಆಯ್ಕೆಯಾದ ಎಲ್ಲಾ 153 ಸಿಬ್ಬಂದಿಗಳು ಮಾ.29ರ ಬೆಳಗ್ಗೆ 8:00 ಗಂಟೆಗೆ ಕೋರಮಂಗಲದ ಕೆಎಸ್ಆರ್ಪಿ 3ನೇ ಪಡೆಯ ಕಮಾಂಡೆಂಟ್ ಎದುರು ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಕಡ್ಡಾಯ ಹಾಜರಾತಿ: ತಾಲೀಮಿನಲ್ಲಿ ಭಾಗವಹಿಸದೇ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ನಿಗದಿಪಡಿಸಿದ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಮವಸ್ತ್ರ ಸಂಹಿತೆ: ಡಿವೈಎಸ್ಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳು ‘ವರ್ಕಿಂಗ್ ಡ್ರೆಸ್’ ಜೊತೆಗೆ ಕ್ರಾಸ್ ಬೆಲ್ಟ್ ಹಾಗೂ ಕತ್ತಿ (Sword) ಧರಿಸಬೇಕು. ಸಿಪಿಐ ನಿಂದ ಎಎಸ್ಐ ವರೆಗಿನ ಅಧಿಕಾರಿಗಳು ‘ವರ್ಕಿಂಗ್ ಡ್ರೆಸ್’ ಜೊತೆಗೆ ಕ್ರಾಸ್ ಬೆಲ್ಟ್ ಹಾಗೂ ಮುಖ್ಯ ಕಾನ್ಸ್ಟೇಬಲ್ (HC) ಮತ್ತು ಕಾನ್ಸ್ಟೇಬಲ್ (PC) ಹಂತದ ಸಿಬ್ಬಂದಿ ‘ಸೆರಿಮೋನಿಯಲ್ ಡ್ರೆಸ್’ ಧರಿಸುವಂತೆ ನಿರ್ದೇಶನ ನೀಡಲಾಗಿದೆ.
ಒಂದು ವೇಳೆ ಆಯ್ಕೆಯಾದ ಅಧಿಕಾರಿ/ಸಿಬ್ಬಂದಿಗಳಲ್ಲಿ ಯಾರಾದರೂ ಪ್ರಸ್ತುತ ಅಮಾನತ್ತಿನಲ್ಲಿದ್ದರೆ ಅಂತಹವರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ನಿವೃತ್ತರಾಗಿದ್ದರೂ ಅಥವಾ ಮರಣ ಹೊಂದಿದ್ದರೂ ಅವರಿಗೆ/ಅವರ ಕುಟುಂಬದವರಿಗೆ ಈ ಗೌರವವನ್ನು ತಲುಪಿಸುವ ಜವಾಬ್ದಾರಿಯನ್ನು ಆಯಾ ಘಟಕಾಧಿಕಾರಿಗಳಿಗೆ ವಹಿಸಲಾಗಿದೆ.









