ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಅತ್ಯಧಿಕ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶವಾದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಬೆಳಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಇದರ ಪರಿಣಾಮ ಭತ್ತ ಮತ್ತು ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ 12.5 ಲಕ್ಷಕ್ಕೂ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 2.5 ಕೋಟಿ ಕ್ವಿಂಟಲ್ ಭತ್ತ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಈ ಪ್ರದೇಶದಲ್ಲಿ ಈ ಬಾರಿ ಬೆಳೆ ಬೆಳೆಯುವುದಿಲ್ಲ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದಂತೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಆರ್.ಎನ್.ಆರ್. ಭತ್ತದ ದರ 75 ಕೆಜಿಗೆ 1950-2000 ರೂ. ವರೆಗೆ ಏರಿಕೆಯಾಗಿದೆ. ಸೋನಾ ಮಸೂರಿ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಕೆಲವು ದಲ್ಲಾಳಿಗಳು ಮುಂಗಾರು ಬೆಳೆ ಕಟಾವು ಪ್ರಾರಂಭವಾಗುತ್ತಿದ್ದಂತೆ ಭತ್ತ, ಅಕ್ಕಿಸಂಗ್ರಹಿಸಿ ಅಭಾವ ಸೃಷ್ಟಿಸುವ ಸಾಧ್ಯತೆ ಇದೆ.
ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಸಲಹೆ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಭತ್ತಕ್ಕೆ ಪರ್ಯಾಯ ಕೆಲವು ಬೆಳೆ ಬೆಳೆಯಲು ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಿಂದ ಸಲಹೆಗಳನ್ನು ನೀಡಲಾಗಿದೆ.
ಭತ್ತಕ್ಕೆ ಪರ್ಯಾಯ ಬೆಳೆಗಳು: ಭತ್ತದ ಬದಲಾಗಿ ಸಾಸಿವೆ (ಎನ್.ಆರ್.ಸಿ.ಹೆಚ್.ಬಿ-101, ಪಿ.ಎಮ್-30, ಕೆ.ಎಮ್-29), ಎಳ್ಳು (ಶ್ವೇತಾ, ವಿ.ಆರ್.ಐ-1), ಮೆಕ್ಕೆಜೋಳ (ಆರ್.ಸಿ.ಎಮ್.ಎಚ್-2 & 4, ಒಂದು ಅಥವಾ ಎರಡು ನೀರು ಕೊಡಬೇಕು), ಕಡಲೆ (ಅಣ್ಣಿಗೇರಿ-1, ಜೆಜಿ-11, ಬಿ.ಜಿ.ಡಿ-103), ಸೂರ್ಯಕಾಂತಿ (ಕೆ.ಬಿ.ಎಸ್.ಹೆಚ್-44, 53) (ಆರ್.ಎಫ್.ಎಸ್.ಹೆಚ್-700, ಆರ್.ಎಫ್.ಎಸ್.ಹೆಚ್-1877), ಹೆಸರು (ಬಿ.ಜಿ.ಎಸ್-9, ಪಿ.ಡಿ.ಎಮ್-139), ಭತ್ತ ಉದ್ದು (ಡಿ.ಯು-1, ಎಲ್.ಬಿ.ಜಿ-752), ಹುರುಳಿ (ಕ್ರೀಡಾ-1, ಪಿ.ಹೆಚ್.ಜಿ-9), ಅಲಸಂದಿ (ಸಿ-152, ಡಿ.ಸಿ.-15) ಬೆಳೆಯಬಹುದು. ನೀರು ಲಭ್ಯವಿದ್ದರೆ ಟೋಮ್ಯಾಟೋ, ಕಲ್ಲಂಗಡಿ, ಸೌತೆಕಾಯಿ, ಬೆಂಡೆಕಾಯಿ, ಹೀರೆಕಾಯಿ, ಬೀಟ್ರೂಟ್, ಈ ತರಕಾರಿಗಳನ್ನು ಬೆಳೆಯಬಹುದು. ನೀರಿನ ಅನುಕೂಲವಿದ್ದಲ್ಲಿ ತರಕಾರಿಗಳು ಸೊಪ್ಪಿನ ಬೆಳೆಗಳಾದ ಪಾಲಕ್, ಮೆಂತ್ಯೆ, ಸಬ್ಬಸಿಗೆ, ರಾಜಗಿರಿ, ಉಳ್ಳಿಚಿಕಾ, ಖಾಸಗಿ ತಳಿಗಳನ್ನು ಬೆಳೆಯಬಹುದು. ಉಳಿದಿರುವ ತೇವಾಂಶದಿಂದ ಹಸಿರೆಲೆ ಡಯಾಂಚಾ, ಸೆಣಬು, ಪಿಳ್ಳೆಪೆಸರು ಸಹ ಬೆಳೆಯಬಹುದು. ಇದಲ್ಲದೇ ಭತ್ತ ಮೇವಿನ ಬೆಳೆಗಳ (ಹೈಬ್ರಿಡ್ ನೇಪಿಯರ್, ಸಿ.ಓ.ಎಫ್.ಹೆಚ್-29, ಸಿ.ಓ-4) ಬೆಳೆಯಬಹುದಾಗಿದೆ.
ನೀರು ಲಭ್ಯ ಇರುವ ಪ್ರದೇಶದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಈರುಳ್ಳಿ, ತರಕಾರಿ ಬೆಳೆಗಳನ್ನು ಬೆಳೆಯಬಹುದು. ಕಡಿಮೆ ನೀರಿರುವ ಪ್ರದೇಶದಲ್ಲಿ ಶೇಂಗಾ, ಹೆಸರು, ಉದ್ದು, ಸೂರ್ಯಕಾಂತಿ, ಅಲಸಂದಿ ಹಾಗೂ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಊದಲು, ಬರಗು ಮತ್ತು ಅತಿ ಕಡಿಮೆ ನೀರಿರುವ ಪ್ರದೇಶದಲ್ಲಿ ಸಾಸಿವೆ, ಕುಸುಬೆ, ಹುರುಳಿ, ಹಿಂಗಾರಿ ಜೋಳ, ಹೆಸರು, ಉದ್ದು ಬೆಳೆಯಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








