ಬೆಂಗಳೂರು : ತಳವಾರ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಎಸ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ತಳವಾರ ಸಮುದಾಯ ಸೇರಿದಂತೆ ಎಲ್ಲ ಅರ್ಹ ಸಮುದಾಯಗಳಿಗೂ ಪರಿಶಿಷ್ಟ ಪಂಗಡ ಪ್ರಮಾಣಪತ್ರ ದೊರಕಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಇರುವ ಸಮಸ್ಯೆ ಕುರಿತು ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಇತರೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಒಂದು ಸಭೆ ನಡೆದಿದೆ. ಇದಲ್ಲದೆ ಇದೇ ವಿಷಯವಾಗಿ ಬೆಂಗಳೂರಿನಲ್ಲಿ 03 ಬಾರಿ ಸಭೆ ಸೇರಲಾಗಿದೆ. ಒಟ್ಟಾರೆ 04 ಸಭೆಗಳನ್ನು ನಡೆಸಿ, ಸಂಬಂಧಿಸಿದ ಇಲಾಖೆಯಿಂದ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ST ಪ್ರಮಾಣ ಪತ್ರ ವಿತರಿಸಲು ಸ್ಪಷ್ಟ ಸೂಚನೆ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಸಭೆ ನಂತರವೂ ಹೋರಾಟ ಮಾಡುವ ಮುಂಚೂಣಿಯಲ್ಲಿರುವ ನಾಯಕರಿಗೆ ಹಾಗೂ ಸಮಾಜದ ಮುಖಂಡರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ 2-3 ಬಾರಿ ಭೇಟಿ ಮಾಡಿಸಿ, ಸಮಾಲೋಚಿಸಿ, ಸಲಹೆ ನೀಡಿದ ನಂತರವೇ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು.
ದಿನಾಂಕ: 01.01.2023 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 14,282 ಜನರಿಗೆ Naikda (including Parivara and Talawara) ST ಜಾತಿ ಪ್ರಮಾಣಪತ್ರ ನೀಡಲಾಗಿರುತ್ತದೆ.
ದಿನಾಂಕ: 01.01.2023 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,624 ಜನರಿಗೆ Talwar_Boya CAT-1 ನಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.
ದಿನಾಂಕ: 01.03.2020 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 29,306 ಜನರಿಗೆ Naikda (including Parivara and Talawara) ST ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.
ದಿನಾಂಕ: 01.03.2020 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 12,126 ಜನರಿಗೆ Talwar_Boya CAT-1 ನಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ ರಿಟ್ ಪಿಟಿಷನ್ ನಂ. 13777/2023 ರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು ಪಡಿಸುವ ಕುರಿತು ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ 17 ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರವಾಗಿರುವ ಸಹಾಯಕ ಆಯುಕ್ತರು ಉಪವಿಭಾಗ ಕಲಬುರಗಿ ಮತ್ತು ಸೇಡಂ ಅವರಿಂದ ರದ್ದುಗೊಳಿಸಲಾಗಿರುತ್ತದೆ.
ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ (ರಿ) ಇವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಪುಯತ್ನಿಸುತ್ತಿದ್ದು, ಇದರಿಂದ ನಿಜವಾದ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ. ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಯನ್ನು ತಹಸೀಲ್ದಾರರ ಹಂತದಲ್ಲಿ ನಿಯಮಾವಳಿಗಳ ಪ್ರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಸ್ಪಷ್ಟವಾದ ಸೂಚನೆ ನೀಡಲಾಗಿರುತ್ತದೆ.
ಸರ್ಕಾರದಿಂದ ಅರ್ಹರಿಗೆ ST ಜಾತಿ ಪ್ರಮಾಣ ಪತ್ರ ನೀಡಲು ನಮ್ಮ ಸರ್ಕಾರ ಮತ್ತು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದಾಗಲೂ ಸಹ ಕೆಲವು ಸಂಘ-ಸಂಸ್ಥೆಗಳು, ಹೋರಾಟಗಾರರು ವಾಸ್ತವಿಕ ಸತ್ಯ ಅರಿಯದೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವುದು ನೋಡಿದರೆ ಇದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ತಳವಾರ ಸಮುದಾಯದ ಜನರು ತಪ್ಪಾಗಿ ರಾಜಕೀಯ ಪ್ರೇರಣೆಗೆ ಬಲಿಯಾಗದೆ ಸತ್ಯವನ್ನು ಅರಿಯಬೇಕು. ಗ್ಯಾರಂಟಿ ಸರ್ಕಾರವು ಸದಾ ನಿಮ್ಮೊಂದಿಗೆ ಇರಲಿದೆ ಎಂದು ತಿಳಿಸಿದ್ದಾರೆ.








