ಬೆಂಗಳೂರು : ಮಾವನ ಆಸ್ತಿಗಳಿಗೆ ಅಳಿಯ ಉತ್ತರಾಧಿಕಾರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕಾನೂನುಬದ್ಧ ಉತ್ತರಾಧಿಕಾರಿ ಮಾತ್ರ ಆಸ್ತಿಗೆ ಪ್ರತಿನಿಧಿ ಎಂದು ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಬಸವರಾಜು ಸಲ್ಲಿಸಿಸದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನಗಂಟಿ ಅವರ ಪೀಠ ಈ ಆದೇಶ ನೀಡಿದೆ.
ಮೃತ ಮಾವನಿಗೆ ನಾಲ್ಕು ಹೆಣ್ಣು ಮಕ್ಕಳಿರುವುದರಿಂದ ತನ್ನನ್ನೇ ಮೃತನ ಆಸ್ತಿಯನ್ನು ಪ್ರತಿನಿಧಿಸಲು ಮತ್ತು ಹಿತಾಸಕ್ತಿ ರಕ್ಷಣೆ ಮಾಡಲು ಕಾನೂನುಬದ್ಧ ಉತ್ತರಾಧಿಕಾರಿ ಎಂಬುದಾಗಿ ಘೋಷಣೆ ಮಾಡುವಂತೆ ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಾನೂನು ಬದ್ದ ಉತ್ತರಾಧಿಕಾರಿ ಮಾತ್ರ ಮೃತಪಟ್ಟ ವ್ಯಕ್ತಿಯ ಆಸ್ತಿ ಪ್ರತಿನಿಧಿಸುವ ಮತ್ತು ಹಿತಾಸಕ್ತಿ ರಕ್ಷಣೆ ಮಾಡುವ ಜವಾಬ್ದಾರಿ ಹೊಂದಿರುತ್ತಾನೆ. ಆದರೆ ಈ ಪ್ರಕರಣದಲ್ಲಿ ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಮೃತರ ಆಸ್ತಿಯಲ್ಲಿ ಭಾಗಕ್ಕೆ ಅರ್ಹರಾಗಿದ್ದಾರೆಯೇ ಹೊರತು ಉತ್ತರಾಧಿಕಾರಿಯಾಗುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೋರ್ಟ್ ತಿಳಿಸಿದೆ.
ತನ್ನದೇ ಗ್ರಾಮದ ಮಹಿಳೆಯನ್ನು ವಿವಾಹವಾಗಿ ವ್ಯಕ್ತಿಯೊಬ್ಬರು ಮಾವನ ಆಸ್ತಿಯಲ್ಲಿ ಪತ್ನಿಗೆ ಪಾಲು ನೀಡಲು ಆದೇಶಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಮಾವ ಮೃತಪಟ್ಟಿದ್ದರು. ಇದರಿಂದ ತಾನೇ ಮಾವನ ಮನೆಗೆ ಮನೆ ಅಳಿಯ, ಅವರ ಆಸ್ತಿಯನ್ನು ಪ್ರತಿನಿಧಿಸುವ ಕಾನೂನುಬದ್ದ ಉತ್ತರಾಧಿಕಾರಿಯಾಗಿ ನನ್ನನ್ನೇ ಘೋಷಣೆ ಮಾಡಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.