ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS 2.0) ಯಲ್ಲಿನ ದತ್ತಾಂಶದ ನಿಖರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಸಕ್ರಿಯ ನೌಕರರ ಪಟ್ಟಿಯಲ್ಲಿ ಮುಂದುವರಿಯಲು ಅರ್ಹರಲ್ಲದ ನೌಕರರನ್ನು ತಕ್ಷಣವೇ ವ್ಯವಸ್ಥೆಯಿಂದ ಹೊರಹಾಕಲು (Exit Protocol) ಎಲ್ಲಾ ಇಲಾಖೆಗಳ ರೇಖನಾ ಮತ್ತು ವಿತರಣಾಧಿಕಾರಿಗಳಿಗೆ (DDOs) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವ್ಯವಸ್ಥೆಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ನೌಕರರ ಮಾಹಿತಿ ಮಾತ್ರ ಇರಬೇಕಾಗಿದ್ದು ಕಡ್ಡಾಯವಾಗಿದೆ. ಆದರೆ, ಅರ್ಹರಲ್ಲದ ಹಲವು ನೌಕರರ ವಿವರಗಳು ಇನ್ನೂ ಸಕ್ರಿಯ ಪಟ್ಟಿಯಲ್ಲಿ ಮುಂದುವರಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ವೇತನ ಮತ್ತು ಇತರ ಭತ್ಯೆಗಳು ಅನಧಿಕೃತವಾಗಿ ಪಾವತಿಯಾಗುವುದನ್ನು ತಡೆಗಟ್ಟಲು ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಡ್ಡಾಯವಾಗಿ ಹೊರಗಡಬೇಕಾದ (Exit) 12 ವರ್ಗಗಳು:
ಕೆಳಗಿನ ಯಾವುದೇ ಮಾನದಂಡಗಳ ಅಡಿಯಲ್ಲಿ ಬರುವ ನೌಕರರನ್ನು ಸಕ್ರಿಯ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಬೇಕಾಗುತ್ತದೆ:
ಮರಣ (Death): ಮೃತಪಟ್ಟ ನೌಕರರ ವಿವರಗಳು.
ವಯೋನಿವೃತ್ತಿ (Superannuation): ನಿವೃತ್ತಿ ವಯಸ್ಸನ್ನು ದಾಟಿದ ನೌಕರರು.
ವಿದೇಶಿ ಸೇವೆಗೆ ನಿಯೋಜನೆ (Deputation to Foreign Service): ಬಾಹ್ಯ ಸಂಸ್ಥೆಗಳಿಗೆ ಅಥವಾ ವಿದೇಶಿ ಸೇವೆಗೆ ನಿಯೋಜನೆಗೊಂಡವರು.
ರಾಜೀನಾಮೆ (Resignation): ಔಪಚಾರಿಕ ರಾಜೀನಾಮೆ ಅಂಗೀಕರಿಸಲ್ಪಟ್ಟ ನೌಕರರು.
ಸ್ವಯಂಪ್ರೇರಿತ ನಿವೃತ್ತಿ (VRS): ಸ್ವಯಂಪ್ರೇರಿತ ನಿವೃತ್ತಿ ಮನವಿ ಅಂಗೀಕಾರವಾಗಿರುವವರು.
ಕಡ್ಡಾಯ ನಿವೃತ್ತಿ (Compulsory Retirement): ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಲ್ಪಟ್ಟವರು.
ಸೇವೆಯಿಂದ ತೆಗೆದುಹಾಕುವುದು (Removal from Service): ಕರ್ತವ್ಯದಿಂದ ತೆಗೆದುಹಾಕಲ್ಪಟ್ಟ ನೌಕರರು.
ಸೇವೆಯಿಂದ ವಜಾ (Dismissal from Service): ಸೇವೆಯಿಂದ ವಜಾಗೊಳಿಸಿರುವ ನೌಕರರು.
ಅನಧಿಕೃತ ಗೈರುಹಾಜರಿ (Unauthorised Absence): ಅನುಮೋದಿತ ರಜೆ ಇಲ್ಲದೆ ಸುದೀರ್ಘ ಅವಧಿಗೆ ಗೈರುಹಾಜರಾಗಿರುವವರು.
ತಾಂತ್ರಿಕ ರಾಜೀನಾಮೆ (Technical Resignation): ಸರ್ಕಾರದ ಇನ್ನೊಂದು ಹುದ್ದೆ ಅಥವಾ ಇಲಾಖೆ ಸೇರಲು ರಾಜೀನಾಮೆ ನೀಡಿದ ಸಿಬ್ಬಂದಿ.
ಅಶಕ್ತತಾ ಪಿಂಚಣಿ (Invalid Pension): ದೈಹಿಕ ಅಥವಾ ಮಾನಸಿಕ ಅಶಕ್ತತೆಯ ಆಧಾರದ ಮೇಲೆ ನಿವೃತ್ತರಾದವರು.
ಪರಿಹಾರ ಪಿಂಚಣಿ (Compensation Pension): ಹುದ್ದೆಗಳು ರದ್ದಾದ ಕಾರಣ ಪರಿಹಾರ ಪಿಂಚಣಿಗೆ ಅರ್ಹರಾಗಿರುವ ನೌಕರರು.
ಗಮನಿಸಿ: ಸಕ್ರಿಯ ನೌಕರರ ಪಟ್ಟಿಯಿಂದ ಹೊರಹಾಕಲ್ಪಟ್ಟ (Exit) ನೌಕರರ ಬಾಕಿ ಇರುವ ಪಾವತಿಗಳು ಅಥವಾ ಬಾಕಿ ವಸೂಲಾತಿಗಾಗಿ HRMS 2.0 ನಲ್ಲಿ ಲಭ್ಯವಿರುವ ಪ್ರತ್ಯೇಕ ಪ್ರಕ್ರಿಯೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮೇ 30ರ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವು:
ಬಟವಾಡಾಧಿಕಾರಿಗಳು (DDOs) ಈ ಮೇಲ್ಕಂಡ ವರ್ಗಗಳಿಗೆ ಸೇರಿದ ಎಲ್ಲಾ ಅನರ್ಹ ನೌಕರರನ್ನು 30ನೇ ಮೇ 2026 ರೊಳಗೆ ವ್ಯವಸ್ಥೆಯಿಂದ ಯಶಸ್ವಿಯಾಗಿ ಹೊರಗಡಲು (Exit) ಕ್ರಮ ವಹಿಸಬೇಕು. ಹಾಗೆಯೇ, ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಡಿ.ಡಿ.ಓ ಗಳಿಗೆ 25 ಮೇ 2026 ರೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಯೋಜನೆ ನಿರ್ದೇಶಕರು (ಹೆಚ್.ಆರ್.ಎಂ.ಎಸ್-2, ಆರ್ಥಿಕ ಇಲಾಖೆ) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.









