ನವದೆಹಲಿ: ಪ್ರೀತಿ ಮತ್ತು ಮದುವೆಯ ಭರವಸೆ ನೀಡಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ನಂತರ, ‘ಜಾತಕ ಅಥವಾ ಕುಂಡಲಿ’ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆಯಿಂದ ಹಿಂದೆ ಸರಿಯುವುದು ಇನ್ಮುಂದೆ ಕೇವಲ ನೈತಿಕ ತಪ್ಪಲ್ಲ, ಅದು ಶಿಕ್ಷಾರ್ಹ ಕ್ರಿಮಿನಲ್ ಅಪರಾಧ ಎಂದು ದೆಹಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69 ರ ಅಡಿಯಲ್ಲಿ ಇಂತಹ ಕೃತ್ಯಗಳು ‘ವಂಚನೆಯಿಂದ ಕೂಡಿದ ಮದುವೆ ಭರವಸೆ’ ಎಂಬ ಗಂಭೀರ ಅಪರಾಧದ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಮಹಿಳೆಯೊಬ್ಬರ ಜೊತೆ ದೈಹಿಕ ಸಂಬಂಧ ಬೆಳೆಸಿ, ನಂತರ ‘ಜಾತಕ ಸರಿ ಇಲ್ಲ’ ಎಂಬ ಕಾರಣ ನೀಡಿ ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಪೀಠ ಈ ಮಹತ್ವದ ಅವಲೋಕನ ಮಾಡಿದೆ.
ಸಂತ್ರಸ್ತ ಮಹಿಳೆ ಮೊದಲು 2025ರ ನವೆಂಬರ್ನಲ್ಲಿ ದೂರು ನೀಡಿದ್ದರು. ಆಗ ಮದುವೆಯಾಗುವುದಾಗಿ ಭರವಸೆ ನೀಡಿ ದೂರು ಹಿಂಪಡೆಯುವಂತೆ ಮಾಡಿದ್ದ ಆರೋಪಿ, ನಂತರ ಮತ್ತೆ ಜಾತಕದ ನೆಪ ಹೇಳಿ ಕೈಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಜನವರಿ 2026 ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಬಿಎನ್ಎಸ್ ಸೆಕ್ಷನ್ 69 ರ ಅಡಿಯಲ್ಲಿ ಹೊಸದಾಗಿ ಎಫ್ಐಆರ್ ದಾಖಲಿಸಲಾಗಿತ್ತು.
ನ್ಯಾಯಾಲಯದ ಪ್ರಮುಖ ಅಂಶಗಳು:
ಇದು ಕೇವಲ ಸಂಬಂಧ ಮುರಿದ ಪ್ರಕರಣವಲ್ಲ: ಆರೋಪಿಯ ಕುಟುಂಬಕ್ಕೆ ಜಾತಕ ಹೊಂದಾಣಿಕೆ ಮುಖ್ಯ ಎಂಬುದು ಆತನಿಗೆ ಮೊದಲೇ ತಿಳಿದಿತ್ತು. ಹಾಗಿದ್ದರೂ ಆತ ಮಹಿಳೆಗೆ ಮದುವೆಯ ಸುಳ್ಳು ಭರವಸೆ ನೀಡುತ್ತಾ ಲೈಂಗಿಕವಾಗಿ ಬಳಸಿಕೊಂಡಿರುವುದು ವಂಚನೆಯಾಗಿದೆ ಎಂದು ಕೋರ್ಟ್ ಹೇಳಿದೆ.
ಬಿಎನ್ಎಸ್ ಸೆಕ್ಷನ್ 69 ಅನ್ವಯ: ಮದುವೆಯಾಗುವ ಪ್ರಾಮಾಣಿಕ ಉದ್ದೇಶವಿಲ್ಲದೆ, ಕೇವಲ ದೈಹಿಕ ಸುಖಕ್ಕಾಗಿ ಸುಳ್ಳು ಭರವಸೆ ನೀಡುವುದು ಈ ಸೆಕ್ಷನ್ ಅಡಿಯಲ್ಲಿ ಶಿಕ್ಷಾರ್ಹ.
ಅತ್ಯಾಚಾರಕ್ಕೆ ಸಮಾನ: ಜಾತಕದ ಅಡೆತಡೆಗಳಿಲ್ಲ ಎಂದು ಪದೇ ಪದೇ ನಂಬಿಸಿ ಸಂಬಂಧ ಬೆಳೆಸುವುದು ‘ಅತ್ಯಾಚಾರ’ದಷ್ಟೇ ಗಂಭೀರವಾದ ವಂಚನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕೋರ್ಟ್ ಕಠಿಣ ಸಂದೇಶ:
“ಕೇವಲ ಪ್ರೇಮ ಸಂಬಂಧ ವಿಫಲವಾಯಿತು ಅಥವಾ ಮದುವೆ ನಡೆಯಲಿಲ್ಲ ಎಂಬ ಕಾರಣಕ್ಕೆ ಕ್ರಿಮಿನಲ್ ಕಾನೂನನ್ನು ಬಳಸಲಾಗದು. ಆದರೆ, ಇಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ, ನಂತರ ಜಾತಕದ ನೆಪ ಹೇಳಿರುವುದು ಆ ಭರವಸೆಯ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ,” ಎಂದು ಹೇಳಿದ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕಠಿಣ ಸಂದೇಶ ರವಾನಿಸಿದೆ.








