ಬೆಂಗಳೂರು : ಖಜಾನೆ-2 ರಲ್ಲಿನ ಪಿಂಚಣಿಗೆ ಸಂಬಂಧಿಸಿದಂತೆ ಕೆಲವೊಂದು ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆ ಕುರಿತು ಹಾಗೂ ನಿವೃತ್ತಿ ವೇತನವನ್ನು ಪಡೆಯಲು ಸ್ವೀಕರ್ತರ ವಿಧ 28 ರಲ್ಲಿ ನೊಂದಾವಣೆಯಾಗಲು ಇನ್ನೊಂದು ಬ್ಯಾಂಕ್ ಖಾತೆಯನ್ನು ತೆರೆಯದೆ ವೇತನ ಬ್ಯಾಂಕ್ ಖಾತೆಯನ್ನು ಮುಂದುವರೆಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಖಜಾನೆ-2 ರಲ್ಲಿ, ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಪಾವತಿಸಲು ನೌಕರರನ್ನು ಸ್ವೀಕರ್ತರ ವಿಧ 27 ರಲ್ಲಿ ಸ್ವೀಕರ್ತರನ್ನಾಗಿ ನೋಂದಾಯಿಸಲಾಗುತ್ತದೆ. ಸದರಿ ನೌಕರರು ಸೇವೆಯಿಂದ ನಿವೃತ್ತರಾದಲ್ಲಿ ಪಿಂಚಣಿ ಸೌಲಭ್ಯವನ್ನು ಪಾವತಿಸಲು ಅವರನ್ನು ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಬೇಕಾಗಿರುತ್ತದೆ. ಒಂದೇ ಬ್ಯಾಂಕ್ ಖಾತೆಗೆ 2 ಸ್ವೀಕರ್ತರ ವಿಧಗಳಲ್ಲಿ ನೋಂದಾಯಿಸಲು ಅವಕಾಶವಿಲ್ಲದಿರುವುದರಿಂದ ಪ್ರಸ್ತುತ ನಿವೃತ್ತಿದಾರರು ಮತ್ತೊಂದು ಬ್ಯಾಂಕ್ ಖಾತೆಯನ್ನು ತೆರೆದು ವಿವರಗಳನ್ನು ನೀಡಬೇಕಾಗಿರುತ್ತದೆ. ಈ ರೀತಿ ಇನ್ನೊಂದು ಬ್ಯಾಂಕ್ ಖಾತೆಯನ್ನು ತೆರೆದು, ಪಿಂಚಣಿ ಸ್ವೀಕರ್ತರ ವಿಧ-28 ರಲ್ಲಿ ಸ್ವೀಕರ್ತರಾಗಿ ನೋಂದಾಯಿಸುವ ಬದಲು ವೇತನ ಬ್ಯಾಂಕ್ ಖಾತೆಯಲ್ಲೇ ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಲು ಈ ಕೆಳಕಂಡಂತೆ ಅವಕಾಶ ಕಲ್ಪಿಸಲಾಗಿದೆ.
1) ಸರ್ಕಾರಿ ನೌಕರರು ನಿವೃತ್ತರಾದ ನಂತರವೂ ನಿವೃತ್ತ ದಿನಾಂಕ ದಿಂದ 20 ದಿನಗಳವರೆಗೆ ಸ್ವೀಕರ್ತ ವಿಧ-27 ನ್ನು ಸಕ್ರಿಯ ಸ್ಥಿತಿಯಲ್ಲಿ ಮುಂದುವರಿಸಲಾಗುತ್ತದೆ. ಸದರಿ ಅವಧಿಯಲ್ಲಿ ನಿವೃತ್ತ ನೌಕರರಿಗೆ ಯಾವುದೇ ಬಾಕಿಯಿರುವ ವೇತನ ಭತ್ಯೆಗಳನ್ನು ಪಾವತಿಸಬಹುದಾಗಿರುತ್ತದೆ. 20 ದಿನಗಳ ನಂತರ ಸದರಿ ವಿಧದಲ್ಲಿನ ನೋಂದಣಿಯನ್ನು ನಿಷ್ಕ್ರಿಯಗೊಳಿಸಲಾಗುವುದು.
2) ಈ ರೀತಿ ನಿಷ್ಕ್ರಿಯಗೊಂಡ ನಂತರ ಸದರಿ ಬ್ಯಾಂಕ್ ಖಾತೆಯ ವಿವರಗಳನ್ನು ಉಪಯೋಗಿಸಿಕೊಂಡು ಪಿಂಚಣಿ ಸೌಲಭ್ಯವನ್ನು ಪಡೆಯಲು ಸ್ವೀಕರ್ತರ ವಿಧ-28 ರಲ್ಲಿ ನೋಂದಾವಣೆ ಮಾಡಿಕೊಳ್ಳುವುದು.
3) ಒಂದು ವೇಳೆ ಸದರಿ ನಿವೃತ್ತ ವೇತನದಾರರಿಗೆ ಪುನಃ ಯಾವುದೇ ವೇತನ ಭತ್ಯೆ ಪಾವತಿಸಬೇಕಾಗಿದ್ದಲ್ಲಿ, ಸಂಬಂಧಿಸಿದ ಡಿಡಿಓ ರವರು ಖಜಾನೆ-2 ರಲ್ಲಿ ಈ ಕುರಿತು ಟಿಕೇಟ್ ಮಂಡಿಸಿದಲ್ಲಿ, ಸದರಿ ಸ್ವೀಕರ್ತರ ವಿಧ-27ನ್ನು ಪುನಃ ಸಕ್ರಿಯಗೊಳಿಸಿ ಪಾವತಿಗೆ ಅವಕಾಶ ಮಾಡಿಕೊಡಲಾಗುವುದು.
ಮೇಲ್ಕಂಡ ಸೌಲಭ್ಯವು ದಿನಾಂಕ:01.06.2025 ರಿಂದ ಲಭ್ಯವಾಗುತ್ತದೆ. ಈ ಕುರಿತು ಪಿಂಚಣಿದಾರರಿಗೆ ಹಾಗೂ ಡಿಡಿಓರವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಸೂಚಿಸಿದೆ.