ನವದೆಹಲಿ: ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ‘ಕೆನೆಪದರ’ ಅಥವಾ ‘ಕ್ರೀಮಿ ಲೇಯರ್’ ಅನ್ನು ನಿರ್ಧರಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಾರ್ವಜನಿಕ ವಲಯದ ಉದ್ಯಮಗಳು (PSU) ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಮಕ್ಕಳನ್ನು ಸರ್ಕಾರಿ ನೌಕರರ ಮಕ್ಕಳಿಗಿಂತ ಭಿನ್ನವಾಗಿ ನೋಡುವುದು ಸರಿಯಲ್ಲ. ಇದು ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರಿ ನೌಕರರಿಗೆ ಅನ್ವಯವಾಗುವ ಕೆನೆಪದರದ ನಿಯಮಗಳೇ ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳ ಮಕ್ಕಳಿಗೂ ಅನ್ವಯವಾಗಬೇಕು. ಪೋಷಕರ ಹುದ್ದೆ ಮತ್ತು ಸ್ಥಾನಮಾನಗಳನ್ನು ಪರಿಗಣಿಸದೆ ಕೇವಲ ಆದಾಯದ ಮೇಲೆ ಅವರನ್ನು ಕೆನೆಪದರಕ್ಕೆ ಸೇರಿಸುವುದು ತಪ್ಪು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಒಬಿಸಿ ಮೀಸಲಾತಿ ಪಡೆಯಲು ಪ್ರಯತ್ನಿಸಿದ ಅಭ್ಯರ್ಥಿಗಳ ಅರ್ಹತೆಗೆ ಸಂಬಂಧಿಸಿದಂತೆ ಮದ್ರಾಸ್, ಕೇರಳ ಮತ್ತು ದೆಹಲಿ ಹೈಕೋರ್ಟ್ಗಳು ನೀಡಿದ್ದ ತೀರ್ಪುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠವು ಈ ಆದೇಶ ನೀಡಿದೆ.
ಕೆನೆಪದರ ಎಂದರೇನು?
ಒಬಿಸಿ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗುವ ಶೇ. 27ರಷ್ಟು ಮೀಸಲಾತಿಯ ಲಾಭವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವವರಿಗೆ ಸಿಗಬಾರದು ಎಂಬ ಉದ್ದೇಶದಿಂದ ಈ ‘ಕೆನೆಪದರ’ ವ್ಯವಸ್ಥೆಯನ್ನು ತರಲಾಗಿದೆ. ಪ್ರಸ್ತುತ, ಸರ್ಕಾರಿ ನೌಕರರಲ್ಲದವರಿಗೆ ವಾರ್ಷಿಕ 8 ಲಕ್ಷ ರೂಪಾಯಿ ಆದಾಯದ ಮಿತಿ ಇದೆ. ಆದರೆ ಸರ್ಕಾರಿ ನೌಕರರ ಮಕ್ಕಳ ವಿಷಯದಲ್ಲಿ ಅವರ ಪೋಷಕರ ಹುದ್ದೆಯನ್ನು (ಗ್ರೂಪ್ ಎ, ಗ್ರೂಪ್ ಬಿ ಇತ್ಯಾದಿ) ನೋಡಿ ನಿರ್ಧರಿಸಲಾಗುತ್ತದೆ.
ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ, ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳ ಮಕ್ಕಳಿಗೂ ಪೋಷಕರ ಹುದ್ದೆಯ ಆಧಾರದ ಮೇಲೆ ಸಮಾನವಾಗಿ ಮೀಸಲಾತಿ ಲಾಭ ಸಿಗುವ ನಿರೀಕ್ಷೆಯಿದೆ.








