ಬೆಂಗಳೂರು: ರಾಜ್ಯದ ಎಲ್ಲಾ ಅರೇಬಿಕ್ ಮದರಸಾ ಬೋಧಕರಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವಸತಿ, ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯದ ಆರಂಭಿಸಿದ ಮದರಸಾಗಳ 200 ಬೋಧಕರಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 200 ಮದರಸಾಗಳ ಬೋಧಕರಿಗೆ ಕನ್ನಡ ಕಲಿಸಲಿದ್ದು, ಮುಂದಿನ ದಿನಗಳಲ್ಲಿ ಮಸೀದಿಗಳ ಮೌಲ್ವಿಗಳಿಗೂ ಕನ್ನಡ ಕಲಿಸಲಾಗುವುದು ಎಂದರು.
ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರದಿಂದ ಮದರಸಾ ಶಿಕ್ಷಕರಿಗೆ ಕನ್ನಡ ಕಲಿಸಲು ಪಠ್ಯ ಸಿದ್ಧಪಡಿಸಲಾಗಿದೆ. 36 ಗಂಟೆಗಳ ಕಾಲಾವಧಿಯ ಕನ್ನಡ ಕಲಿಕಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೋಧಕರಿಗೆ ವಾರಾಂತ್ಯದಲ್ಲಿ ದಿನಕ್ಕೆ ಎರಡು ಗಂಟೆ ಕನ್ನಡ ಕಲಿಸಲಾಗುವುದು. ಮುಂದೆ ಎಲ್ಲಾ 2000 ಮದರಸಾಗಳಿಗೆ ಇದನ್ನು ವಿಸ್ತರಿಸಲಾಗುವುದು. ಮಸೀದಿಗಳ ಮೌಲ್ವಿಗಳಿಗೂ ಕನ್ನಡ ಕಲಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಹಂತ ಹಂತವಾಗಿ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪಿಯು ವರೆಗೆ ತರಗತಿ ಪ್ರಾರಂಭಿಸಲುಘೋಷಿಸಲಾಗಿತ್ತು. ಪ್ರಸಕ್ತ ವರ್ಷ 100 ಆಜಾದ್ ಶಾಲೆ ಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಗಳನ್ನಾಗಿ ಮೇಲ್ದರ್ಜೆ ಗೇರಿಸಲು ಆದೇಶ ಹೊರಡಿಸಲಾಗಿದೆ.