ಬೆಂಗಳೂರು: 5-9 ವರ್ಷದೊಳಗಿನ ಮಕ್ಕಳಲ್ಲಿ ಸ್ಥೂಲಕಾಯ ಹೆಚ್ಚಳ ಹಿನ್ನೆಲೆಯಲ್ಲಿ ಪಿಎಂ ಪೋಷಣ್ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೀಡುವ ಬಿಸಿಯೂಟದಲ್ಲಿ ಬಳಕೆ ಮಾಡುವ ಸೂರ್ಯಕಾಂತಿ ಎಣ್ಣೆ ಪ್ರಮಾಣವನ್ನು ಶೇ. 10ರಷ್ಟು ಕಡಿತ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಪ್ರಧಾನಿ ಮೋದಿ ಸೂಚನೆ ಬೆನ್ನಲ್ಲೇ ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿಯ ಅನುಸಾರ ರಾಜ್ಯ ಶಿಕ್ಷಣ ಇಲಾಖೆ ಮಧ್ಯಾಹ್ನದ ಬಿಸಿಯೂಟಕ್ಕೆ 1-5 ತರಗತಿಗೆ 5 ಗ್ರಾಂ, 6ರಿಂದ 10ನೇ ತರಗತಿಯ ತಲಾ ಒಬ್ಬ ವಿದ್ಯಾರ್ಥಿಗೆ 7.5 ಗ್ರಾಂ ನಂತೆ ಎಣ್ಣೆ ಬಳಸಲಾಗುತ್ತಿದೆ.
1990ರಲ್ಲಿ ದೇಶದ 0.4 ಮಿಲಿಯನ್ ಮಕ್ಕಳಲ್ಲಿ ಸ್ಥೂಲಕಾಯವಿದ್ದರೆ, 2022 ರಲ್ಲಿ 12.5 ಮಿಲಿಯನ್ ಮಕ್ಕಳಲ್ಲಿ ಸ್ಥೂಲಕಾಯ ಕಂಡು ಬಂದಿದೆ. ಇದರಿಂದ ಅಲಸ್ಯ, ಹೃದ್ರೋಗ, ಅಜೀರ್ಣ ಸೇರಿ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತವೆ.ಇದರಿಂದ ಹೊರಬರಲು ಪ್ರಧಾನಿ ಮೋದಿ ಬಿಸಿಯೂಟದಲ್ಲಿ ಶೇಕಡ 10ರಷ್ಟು ಅಡುಗೆ ಎಣ್ಣೆ ಕಡಿಮೆ ಮಾಡಲು ಸೂಚಿಸಿದ್ದಾರೆ.
ಆರೋಗ್ಯಕರ ಜೀವನ ಶೈಲಿ, ಹಣ್ಣು, ತರಕಾರಿ, ತಾಜಾ ಆಹಾರ ಸೇವನೆ ಮಾಡಬೇಕು. ಕ್ರೀಡೆ, ಯೋಗ, ವ್ಯಾಯಾಮದ ಕುರಿತು ಪೋಷಕರು, ಬೋಧಕರು, ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ, ಅಭಿಯಾನ, ಉಪನ್ಯಾಸ ಕಾರ್ಯಕ್ರಮ ಆಯೋಜಿಸಬೇಕು. ಕಡಿಮೆ ಎಣ್ಣೆ ಬಳಕೆ ಮಾಡಿ ಆಹಾರ ಸಿದ್ಧಪಡಿಸುವ ಬಗ್ಗೆ ಸಂಸ್ಥೆಗಳಿಂದ ಸಲಹೆ ಪಡೆಯಬೇಕು. ಆರೋಗ್ಯಕರ ಆಹಾರ ಪದ್ಧತಿ ಕುರಿತಾದ ಚರ್ಚೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಆಯೋಜಿಸಬೇಕು ಎಂದು ತಿಳಿಸಲಾಗಿದೆ.