ಬೆಂಗಳೂರು : ರಾಜ್ಯದಲ್ಲಿ ಇನ್ಮುಂದೆ ವಿಷಪೂರಿತ ಔಷಧ, ಡಿಕಂಪೋಸ್, ಟೊಕ್ಸಿಕ್ ಔಷಧಗಳ ಮಾರಾಟ ಮಾಡಿದರೆ ನಾನ್ ಬೇಲೆಬಲ್ ಪ್ರಕರಣ ಆಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಔಷಧ ಮತ್ತು ಪ್ರಸಾಧನ ಸಾಮಗ್ರಿ ತಿದ್ದುಪಡಿ ವಿಧೇಯಕ- 2025ದ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಸಾಕಷ್ಟು ಚರ್ಚೆ ಮಾಡಿಯೇ ಈ ವಿಧೇಯಕ ಮಾಡುತ್ತಿದ್ದೇವೆ. ಇದರ ಮುಖ್ಯ ಉದ್ದೇಶ ಕಳಪೆ ಮತ್ತು ನಕಲಿ ಔಷಧ ಜಾಲ ತಲೆ ಎತ್ತದಂತೆ ನೋಡಿಕೊಳ್ಳುವುದು. ಎಲ್ಲ ಔಷಧಗಳನ್ನು Central drug lab ನಲ್ಲಿ ಕಡೆಯದಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ರಾಜ್ಯದಲ್ಲಿಯೇ ಲ್ಯಾಬ್ ಮಾಡುತ್ತಿದ್ದೇವೆ. ಔಷಧ ಪರೀಕ್ಷೆಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸುವುದು ಇದರ ಉದ್ದೇಶ. ಎಲ್ಲದಕ್ಕೂ ಸರಿಯಾದ ಸಪ್ಲೈ ಚೈನ್ ಇರಬೇಕು, ಇಲ್ಲದಿದ್ದರೆ ಅಡಲ್ಟ್ರೇಟೆಡ್ ಔಷಧ ಮಾರುಕಟ್ಟೆಗೆ ಬರುವ ಸಾಧ್ಯತೆ ಇರುತ್ತದೆ. ಈ ಮೊದಲು ಕೇಸ್ ಹಾಕಿದರೆ ಸುಲಭದಲ್ಲಿ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತಿತ್ತು. ಈ ಕಾಯಿದೆ ಮೂಲಕ ಔಷಧ ಎಲ್ಲಿಂದ ಎಲ್ಲಿಗೆ ಬರುತ್ತದೆ ಎನ್ನುವುದಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದರು.
ವಿಷಪೂರಿತ ಔಷಧ, ಡಿಕಂಪೋಸ್, ಟೊಕ್ಸಿಕ್ ಔಷಧಗಳ ಮಾರಾಟ ಮಾಡಿದರೆ ನಾನ್ ಬೇಲೆಬಲ್ ಪ್ರಕರಣ ಆಗುತ್ತದೆ. ಈಗ ಸುಲಭದಲ್ಲಿ ಸೂಕ್ತ ಸಾಕ್ಷಿಗಳ ಕೊರತೆಯಿಂದ ಪೋಲಿಸ್ ಸ್ಟೆಷನ್ನಲ್ಲಿಯೇ ಜಾಮೀನು ಪಡೆಯುತ್ತಿದ್ದರು. ಹಾಗೆಯೇ ಆಯುಷ್, ಯುನಾನಿ ಮತ್ತಿತರ ಔಷಧಗಳಿಗೂ ಲೈಸೆನ್ಸ್ ಪಡೆಯುವಂತೆ ಮಾಡುತ್ತೇವೆ. ಔಷಧಗಳು ಎಲ್ಲಿ, ಎಷ್ಟು ತಯಾರಿಸಿದರು, ಎಷ್ಟು ಮಾರಾಟ ಆಗಿದೆ ಎಲ್ಲ ಮಾಹಿತಿ ನಮಗೆ ಸರಿಯಾಗಿ ದೊರಕಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.








