ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಕ್ರೋಢೀಕೃತ ನಿರ್ದೇಶನಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರಡಿ ಈಗಾಗಲೇ ದಾಖಲಾದ ಪ್ರಕರಣಗಳ ತನಿಖೆ, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದಾಖಲಾದ ದೂರು ಹಾಗೂ ಮಿಸಲೇನಿಯಸ್ ಪ್ರಕರಣಗಳಲ್ಲಿ ಪೊಲೀಸ್ ವಿಭಾಗಕ್ಕೆ ಕಳುಹಿಸಲಾದ ಪ್ರಕರಣಗಳಲ್ಲಿ ತನಿಖೆ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಗಿರುವ ಅಕ್ರಮಗಳ ತನಿಖೆಯನ್ನು ನಿರ್ವಹಿಸುತ್ತಿದ್ದು, ಇದರೊಂದಿಗೆ ಸಾರ್ವಜನಿಕರ ಕುಂದು-ಕೊರತೆಗಳನ್ನು ನಿವಾರಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ದುರಾಡಳಿತವನ್ನು ತಪ್ಪಿಸಲು ಅಗತ್ಯವಿರುವ ವಿವಿಧ ಕಾರ್ಯಗಳನ್ನು ನಿರ್ವಹಿಸಬೇಕೆಂದು ಬೇರೆ ಬೇರೆ ದಿನಾಂಕಗಳಲ್ಲಿ ಹಲವಾರು ನಿರ್ದೇಶನಗಳನ್ನು ನೀಡಲಾಗಿದೆ. ಆದರೆ, ಪೊಲೀಸ್ ವಿಭಾಗವು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಕ್ರೋಢೀಕೃತ ನಿರ್ದೇಶನ/ಸುತ್ತೋಲೆ ಹೊರಡಿಸಿರುವುದಿಲ್ಲ. ಪೊಲೀಸ್ ವಿಭಾಗದಲ್ಲಿ ಆಗಾಗ್ಗೆ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿ ಹೊಸದಾಗಿ ನಿಯೋಜನೆಗಳಾಗುತ್ತಿರುವುದರಿಂದ ಮತ್ತು ಜಿಲ್ಲಾ ಕಚೇರಿಗಳಲ್ಲಿ ಕೇಂದ್ರ ಕಚೇರಿಯಿಂದ ನೀಡಲಾಗಿದ್ದ ನಿರ್ದೇಶನಗಳನ್ನು ಸಮರ್ಪಕವಾಗಿ ಕ್ರೋಢೀಕರಿಸಿ ಸಂರಕ್ಷಿಸದೇ ಇರುವುದರಿಂದ, ಹೊಸತಾಗಿ ಪೊಲೀಸ್ ಅಧಿಕಾರಿಗಳು ನಿಯೋಜನೆಗೊಂಡಾಗ ಜಿಲ್ಲಾ ಲೋಕಾಯುಕ್ತ ಪೊಲೀಸ್ ವಿಭಾಗದ ನಿರ್ಧಿಷ್ಟ ಕರ್ತವ್ಯಗಳೇನು
ಮತ್ತು ನಿರ್ವಹಿಸಿದ ಕಾರ್ಯಗಳ ಬಗ್ಗೆ ಯಾವ ರೀತಿ ವರದಿ ನೀಡಬೇಕೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಗೊಂದಲ ಉಂಟಾಗುತ್ತಿರುವುದು ತಿಳಿದು ಬಂದಿರುತ್ತದೆ. ಆದುದರಿಂದ, ಗೌರವಾನ್ವಿತ ಲೋಕಾಯುಕ್ತರ (ಪ್ರಭಾರ) ಸೂಚನೆಯ ಮೇರೆಗೆ ಉಲ್ಲೇಖದಲ್ಲಿನ ಸುತ್ತೋಲೆ / ನಿರ್ದೇಶನಗಳನ್ನು ಕ್ರೋಢೀಕರಿಸಿ. ಈ ಕೆಳಗಿನಂತೆ ಕರ್ತವ್ಯ ನಿರ್ವಹಿಸಿ, ವರದಿ ನೀಡಬೇಕೆಂದು ಕ್ರೋಢೀಕೃತ ಸುತ್ತೋಲೆ ಹೊರಡಿಸಲಾಗಿದೆ.
1) ತನಿಖಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳು
ಪ್ರಸ್ತುತ ತನಿಖಾ ಹಂತದಲ್ಲಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳು ದಿನಾಂಕ 14-03-2016ಕ್ಕಿಂತ ಮೊದಲು ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಾಗಿದ್ದು, ಶೀಘ್ರವಾಗಿ ಎಲ್ಲಾ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಬೇಕಾಗಿದೆ. ಎಲ್ಲಾ ಪ್ರಕರಣಗಳು 6 ವರ್ಷಗಳ ಹಿಂದೆ ದಾಖಲಾದ ಪ್ರಕರಣಗಳಾಗಿರುವುದರಿಂದ, ಪ್ರತೀ ತಿಂಗಳು ತನಿಖೆಯಲ್ಲಿ ಆದ ಪ್ರಗತಿಯ ವಿವರವನ್ನು ಸಲ್ಲಿಸಬೇಕು. ತನಿಖೆ ಪೂರ್ಣಗೊಳ್ಳದಿದ್ದರೆ ಈವರೆಗೂ ತನಿಖೆ ಪೂರ್ಣಗೊಳ್ಳದೇ ಇರಲು ಕಾರಣವೇನು ಎಂಬುದರ ಬಗ್ಗೆ ಪ್ರತಿ ತಿಂಗಳು ಆಯಾ ಜಿಲ್ಲಾ ಪೊಲೀಸ್ ಅಧೀಕ್ಷಕರು ವರದಿ ನೀಡತಕ್ಕದ್ದು, ಅಭಿಯೋಜನಾ ಮಂಜೂರಾತಿಗಾಗಿ ಕಾಯುತ್ತಿರುವ ಪ್ರಕರಣಗಳಿದ್ದಲ್ಲಿ, ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರನ್ನು ಭೇಟಿ ಮಾಡಿ, ಚರ್ಚಿಸಿ, ಶೀಘ್ರವಾಗಿ ಅಭಿಯೋಜನಾ ಮಂಜೂರಾತಿ ಪಡೆದುಕೊಳ್ಳಲು ಕ್ರಮಜರುಗಿಸುವುದು.
2) ದೂರು ಪ್ರಕರಣಗಳಲ್ಲಿ ನೀಡಬೇಕಾದ ತನಿಖಾ ವರದಿಗಳು
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ರ ಕಲಂ 9 ಮತ್ತು 12 ಕ್ಕೆ ದಿನಾಂಕ 19-10-2020 ರಂದು ತಿದ್ದುಪಡಿಯಾಗಿದ್ದು, ಸದರಿ ತಿದ್ದುಪಡಿಯಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ದೂರು ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕಾಗಿದೆ. ಆದುದರಿಂದ, ದೂರು ಪ್ರಕರಣಗಳಲ್ಲಿ ತನಿಖೆಗಾಗಿ ಪೊಲೀಸ್ ವಿಭಾಗಕ್ಕೆ ಕಳುಹಿಸಲಾದ ಎಲ್ಲಾ ಪ್ರಕರಣಗಳಲ್ಲಿ ಗೌರವಾನ್ವಿತ ಲೋಕಾಯುಕ್ತರು ಮತ್ತು ಗೌರವಾನ್ವಿತ ಉಪಲೋಕಾಯುಕ್ತರು ನಿಗದಿಪಡಿಸಿದ ಅವಧಿಯೊಳಗಾಗಿ ತನಿಖೆ ಮುಗಿಸಿ, ವರದಿ ಕಳುಹಿಸಿಕೊಡತಕ್ಕದ್ದು, ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಅಧೀನ ಅಧಿಕಾರಿಗಳಿಗೆ ಪ್ರಕರಣವನ್ನು ತನಿಖೆಗೆ ವಹಿಸಿಕೊಟ್ಟಿದ್ದಲ್ಲಿ, ಆ ಅಧಿಕಾರಿಗಳು ವರದಿಗಳನ್ನು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸತಕ್ಕದ್ದು ಹಾಗೂ ಎಲ್ಲಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವರದಿಯನ್ನು ಪರಿಶೀಲಿಸಿ, ಮತ್ತಷ್ಟು ತನಿಖೆ ಅವಶ್ಯವಿದ್ದಲ್ಲಿ ಹೆಚ್ಚಿನ ತನಿಖೆ ನಡೆಸಿ, ವರದಿಯನ್ನು ಕಳುಹಿಸತಕ್ಕದ್ದು. ನಿಗದಿಪಡಿಸಿದ ಕಾಲಮಿತಿಯೊಳಗೆ ತನಿಖಾ ವರದಿಯನ್ನು ಸಲ್ಲಿಸದಿದ್ದಲ್ಲಿ, ಸಂಬಂಧಪಟ್ಟ ತನಿಖಾಧಿಕಾರಿಯು ಪೊಲೀಸ್ ಅಧೀಕ್ಷಕರ ಮೂಲಕ ವಿವರಣೆ ಸಲ್ಲಿಸತಕ್ಕದ್ದು. ಆ ರೀತಿ ಸಲ್ಲಿಸಿರುವ ವಿವರಣೆ ತೃಪ್ತಿಕರವಾಗಿರದಿದ್ದಲ್ಲಿ ಕರ್ತವ್ಯಲೋಪ ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುವುದು.
3) ಮಿಸೆಲೇನಿಯಸ್ ದೂರು ಪ್ರಕರಣಗಳು
ಪೊಲೀಸ್ ವಿಭಾಗಕ್ಕೆ ಕಳುಹಿಸಲಾದ ಎಲ್ಲಾ ಮಿಸಲೇನಿಯಸ್ ದೂರು ಪ್ರಕರಣಗಳ ತನಿಖೆಗಳಲ್ಲಿಯೂ ಸಹ ದೂರು ಪ್ರಕರಣಗಳಲ್ಲಿ ನಡೆಸಲಾಗುವ ತನಿಖಾ ವಿಧಾನ ಮತ್ತು ಕಾಲಮಿತಿಯನ್ನು ಪಾಲಿಸತಕ್ಕದ್ದು. ಕೆಲವೊಂದು ಮಿಸಲೇನಿಯಸ್ ದೂರುಗಳು ನೇರವಾಗಿ ಗೌರವಾನ್ವಿತ ಲೋಕಾಯುಕ್ತರಿಗೆ ಹಾಗೂ ಗೌರವಾನ್ವಿತ ಉಪಲೋಕಾಯುಕ್ತರಿಗೆ ಬಂದಿರುತ್ತವೆ. ಕೆಲವೊಂದು ದೂರುಗಳು ಪೊಲೀಸ್ ವಿಭಾಗಕ್ಕೂ ನೇರವಾಗಿ ಬಂದಿರುತ್ತವೆ. ಈ ಎಲ್ಲಾ ಮಿಸಲೇನಿಯಸ್ ಪ್ರಕರಣಗಳಲ್ಲಿ ಗೌರವಾನ್ವಿತ ಲೋಕಾಯುಕ್ತರ ಮತ್ತು ಗೌರವಾನ್ವಿತ ಉಪಲೋಕಾಯುಕ್ತರ ಅನುಮತಿ ಪಡೆದು ತನಿಖೆ ನಡೆಸಲಾಗುತ್ತದೆ. ಆದರೆ, ಕೆಲವೊಂದು ದೂರುಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ದೂರು ಶಾಖೆಯಲ್ಲಿ ದೂರು ಪ್ರಕರಣಗಳು ತನಿಖೆಗೆ ಬಾಕಿ ಇರುವ ಸಾಧ್ಯತೆ ಇರುತ್ತದೆ ಹಾಗೂ ಇಲಾಖಾ ವಿಚಾರಣೆ ನಡೆಯುತ್ತಿರುವ ಸಾಧ್ಯತೆ ಇರುತ್ತದೆ. ಆದುದರಿಂದ, ಮಿಸಲೇನಿಯಸ್ ದೂರು ಪ್ರಕರಣಗಳಲ್ಲಿ ತನಿಖೆ ಪ್ರಾರಂಭಿಸುವ ಮೊದಲು ಆ ದೂರಿಗೆ ಸಂಬಂಧಪಟ್ಟಂತೆ ಈಗಾಗಲೇ ದೂರು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆಯೇ ಅಥವಾ ವಿಚಾರಣಾ ಪ್ರಕರಣಗಳು ದಾಖಲಾಗಿವೆಯೇ ಎಂಬುದನ್ನು ಸಿಸ್ಾಕ್ ತಂತ್ರಾಂಶದ ಮೂಲಕ ಹಾಗೂ ಈ ಸಂಸ್ಥೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಮಾಹಿತಿಗಳನ್ನು ಪರಿಗಣಿಸಿ, ದೂರು ಅರ್ಜಿಯಲ್ಲಿ ಆರೋಪಿಸಲಾದ ಅಂಶಗಳ ಬಗ್ಗೆ ಈಗಾಗಲೇ ತನಿಖೆ/ವಿಚಾರಣೆ ನಡೆದಿಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳುವುದು. ಈಗಾಗಲೇ ದೂರು ದಾಖಲಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಜೊತೆಯಾಗಿ ತನಿಖೆ ನಡೆಸಲು ಕ್ರಮವಹಿಸುವುದು. ಒಂದು ವೇಳೆ ಆರೋಪಿಸಿದ ಅಂಶಗಳಿಗೆ ಸಂಬಂಧಪಟ್ಟಂತೆ ಬೇರೆ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡಿದ್ದಲ್ಲಿ ವರದಿ ಸಲ್ಲಿಸುವುದು.
4) ನ್ಯಾಯಾಲಯಗಳಲ್ಲಿ ವಿಚಾರಣೆಗೆ ಇರುವ ಪ್ರಕರಣಗಳು
ನ್ಯಾಯಾಲಯದಲ್ಲಿ ವಿಚಾರಣೆಗೆ ಇರುವ ಎಲ್ಲಾ ಪ್ರಕರಣಗಳ ಕರ್ನಾಟಕ ಪೊಲೀಸ್ ಮ್ಯಾನ್ಯುಯಲ್ನಲ್ಲಿ ನೀಡಿರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಜೊತೆಗೆ ನಿರ್ದಿಷ್ಟಪಡಿಸಿದ ತನಿಖಾಧಿಕಾರಿಯು (Holding Investigating Officer) ಆ ಪ್ರಕರಣಗಳ ಪಟ್ಟಿ ಮಾಡಿ, ಪ್ರಕರಣಗಳ ಪ್ರಗತಿ ಬಗ್ಗೆ ಸಂಪೂರ್ಣ ಮಾಹಿತಿ ದಾಖಲಿಸಿಕೊಳ್ಳತತಕ್ಕದ್ದು. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷಿದಾರರು ಸಾಕ್ಷಿ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗದಿದ್ದ ಕಾರಣ, ಪ್ರಕರಣಗಳಲ್ಲಿ ಆರೋಪಿಯು ಖುಲಾಸೆಯಾಗಿರುವುದು ಗಮನಕ್ಕೆ ಬಂದಿರುತ್ತದೆ. ಇದನ್ನು ತಪ್ಪಿಸಲು ಎಲ್ಲಾ ಸಾಕ್ಷಿದಾರರು ಸಮನ್ಸ್ ನೀಡಲಾದ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಡಿಕೊಳ್ಳತಕ್ಕದ್ದು. ಸಾಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಿಂದ ಮಾಹಿತಿ ಪಡೆದುಕೊಳ್ಳಲು ಕ್ರಮವಹಿಸುವುದು; ಸಾಕ್ಷಿದಾರರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವುದು; ಸಾಕ್ಷಿದಾರರಿಗೆ ಅವಶ್ಯಕತೆಯಿದ್ದಲ್ಲಿ ಸೂಕ್ತ ರಕ್ಷಣೆ
ಒದಗಿಸಲು ಕ್ರಮ ತೆಗೆದುಕೊಳ್ಳುವುದು; ಸಾರ್ವಜನಿಕ ಅಭಿಯೋಜಕರಿಗೆ ತನಿಖಾಧಿಕಾರಿಯು ಪ್ರಕರಣದ ಬಗ್ಗೆ ಎಲ್ಲ ಮಾಹಿತಿಯನ್ನು ಒದಗಿಸುವುದು. ಪ್ರಕರಣದ ತನಿಖಾಧಿಕಾರಿ ಅಥವಾ ಹಿರಿಯ ಅಧಿಕಾರಿಗಳು, ನ್ಯಾಯಾಲಯ ನೀಡಿದ ಸಮನ್ಸ್ಗೆ ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ, ನ್ಯಾಯಾಲಯ ಹೊರಡಿಸುವ ವಾರಂಟನ್ನು ಜಾರಿಗೊಳಿಸಲು ಸ್ವತ: ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಅಗತ್ಯ ಕ್ರಮವಹಿಸುವುದು.
5) ತನಿಖೆ ಪೂರ್ಣಗೊಳಿಸಲಾದ ಕ್ರಿಮಿನಲ್ ಪ್ರಕರಣಗಳು
ತನಿಖೆ ಪೂರ್ಣಗೊಂಡಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಅಭಿಯೋಜನಾ ಮಂಜೂರಾತಿ ಬರಲು ಬಾಕಿ ಇದ್ದು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲು ಬಾಕಿ ಇದ್ದರೂ ಸಹ, ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ಅನುಮೋದನೆಯಾದ ಗರಿಷ್ಠ 45 ದಿನಗಳೊಳಗಾಗಿ (ಅಭಿಯೋಜನಾ ಮಂಜೂರಾತಿ ಬರುವವರೆಗೆ ಮತ್ತು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಯದೆ) ದೋಷಾರೋಪಣ ಪಟ್ಟಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ದೃಢೀಕರಿಸಿ, ಆರೋಪಿತರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮುಂದಿನ ಕ್ರಮಕ್ಕಾಗಿ ನಿಬಂಧಕರಿಗೆ ಕಳುಹಿಸಿಕೊಡತಕ್ಕದ್ದು. ದೋಷಾರೋಪಣ ಪತ್ರದ ಪ್ರತಿಯನ್ನು ಕಳುಹಿಸಿಕೊಡಲು ವಿಳಂಬವಾದಲ್ಲಿ ಆರೋಪಿತ ಅಧಿಕಾರಿ/ನೌಕರರು ನಿವೃತ್ತಿಯಾಗುವ ಸಾಧ್ಯತೆಗಳಿರುವುದರಿಂದ, ಮೇಲ್ಕಂಡಂತೆ ತನಿಖೆ ಪೂರ್ಣಗೊಳಿಸಿದ ತಕ್ಷಣ, ಯಾವುದೇ ವಿಳಂಬವಿಲ್ಲದೇ ದೋಷಾರೋಪಣ ಪಟ್ಟಿಯ ಪ್ರತಿಯನ್ನು ಕಳುಹಿಸಿಕೊಡತಕ್ಕದ್ದು. ಒಂದು ವೇಳೆ ಸಕಾರಣಗಳಿಲ್ಲದೇ ದೋಷಾರೋಪಣಾ ಪಟ್ಟಿಯ ಪ್ರತಿಯನ್ನು ಒದಗಿಸಲು ವಿಳಂಬವಾಗಿದ್ದಲ್ಲಿ ಯಾವ ಕಾರಣಕ್ಕೆ ವಿಳಂಬವಾಗಿದೆ ಹಾಗೂ ಯಾರಿಂದ ವಿಳಂಬವಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು.
6) ಮೇಲ್ಮನವಿ / ಪುನರ್ ಪರಿಶೀಲನಾ ಅರ್ಜಿ / ಕ್ರಿಮಿನಲ್ ಪಿಟಿಷನ್ / ರಿಟ್ ಅರ್ಜಿ ಸಲ್ಲಿಸಬೇಕಾದ
ಪ್ರಕರಣಗಳು
a) ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳಲ್ಲಿ ಪ್ರಕರಣದ ವಿಚಾರಣೆಯಲ್ಲಿ ಯಾವುದಾದರೂ ವ್ಯತಿರಿಕ್ತ ತೀರ್ಪು ಅಥವಾ ಆದೇಶವಾದಲ್ಲಿ, ಮೇಲ್ಮನವಿ / ಪುನರ್ ಪರಿಶೀಲನಾ ಅಥವಾ ಕ್ರಿಮಿನಲ್ ಪಿಟಿಷನ್ಗಳನ್ನು ಸಲ್ಲಿಸಲು ಕಾಲಪರಿಮಿತಿ ಕಾಯ್ದೆ / ನಿಯಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆದೇಶವಾದ ಮರುದಿನವೇ ಅದರ ದೃಢೀಕೃತ ಪ್ರತಿಗೆ ಅರ್ಜಿ ಸಲ್ಲಿಸಲು ಕ್ರಮ ವಹಿಸಿ. ದೃಢೀಕೃತ ಪ್ರತಿ ಪಡೆದು, ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ ಎಂಬುದರ ಬಗ್ಗೆ ಸಂಬಂಧಪಟ್ಟ ಸಾರ್ವಜನಿಕ ಅಭಿಯೋಜಕರಲ್ಲಿ ಚರ್ಚಿಸಿ, ಅವರ ಅಭಿಪ್ರಾಯದೊಂದಿಗೆ ಆದೇಶದ ದೃಢೀಕೃತ ನಕಲನ್ನು ನ್ಯಾಯಾಲಯದಿಂದ ಸ್ವೀಕರಿಸಿದ ಗರಿಷ್ಠ 10 ದಿನಗಳೊಳಗಾಗಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸತಕ್ಕದ್ದು.