ದಾವಣಗೆರೆ : ದಾವಣಗೆರೆಯಲ್ಲಿ ಗುರುವಾರ ನಡೆದ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಗಣೇಶ ಮೆರವಣಿಯಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದಲೇ ಅನ್ಯಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು ಎಂಬ ವಿಚಾರ ಪೊಲೀಸ್ ಎಫ್ ಐಆರ್ ನಲ್ಲಿ ದಾಖಲಾಗಿದೆ.
ಸೆಪ್ಟೆಂಬರ್ 19 ರಂದು ಸಂಜೆ ಕೆ.ಆರ್. ರಸ್ತೆಯ ಮುದೇಗೌಡ್ರು ಮಲ್ಲಮ್ಮ ಮುರಿಗೆಪ್ಪ ಪ್ರೌಢಶಾಲೆ ಪಕ್ಕದ ಪಾರ್ಕ್ ನಲ್ಲಿ ಸುಮಾರು 70-80 ಅನ್ಯಕೋಮಿನ ಯುವಕರ ಗುಂಪು ಅಜಾದ್ ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳ 13 ನೇ ದಿನದ ವಿಸರ್ಜನಾ ಮೆರವಣಿಗೆ ದಿನ ಈ ಷಡ್ಯಂತ್ರ ನಡೆದಿತ್ತು ಎಂದು ಪೊಲೀಸರ ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.
ಗಣೇಶ ಮೆರವಣಿಗೆ ಜಗಳೂರು ಬಸ್ ನಿಲ್ದಾಣದ ಸಮೀಪದ ವಾಟರ್ ಟ್ಯಾಂಕ್ ಸನಿಹ ಬರುತ್ತಿದ್ದಂತೆ ಕಲ್ಲು ತೂರಾಟ ನಡೆದಿದ್ದು, ನರಸರಾಜ ಪೇಟೆ ಮುಖ್ಯ ರಸ್ತೆ ಕಡೆಯಿಂದ ಬಂದ ಸುಮಾರು 70-80 ಯುವಕರು ಏಕಾಏಕಿ ಮೆರವಣಿಗೆ ಕಡೆಗೆ ಕಲ್ಲು ತೂರಿದ್ದು, ಇದರಿಂದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಲ್ಲಿನೇಟು ಬಿದ್ದು ಗಾಯಗಳಾದವು. ತಕ್ಷಣವೇ ಗುಂಪು ಚದುರಿಸಿ, ಮೆರವಣಿಗೆ ಮುಂದೆ ಸಾಗುವಂತೆ ನೋಡಿಕೊಳ್ಳಲಾಯಿತು ಎಂದು ದೂರಿನಲ್ಲಿ ತಿಳಿಸಿಲಾಗಿದೆ.
ಕಲ್ಲು ತೂರಾಟ ಪ್ರಕರಣ ಸಂಬಂಧ 6 ಎಫ್ ಐಆರ್ ದಾಖಲಿಸಲಾಗಿದ್ದು, ಈವರೆಗೆ 48 ಮಂದಿಯನ್ನು ಬಂಧಿಸಲಾಗಿದೆ. ಸಾಕ್ಷ್ಯಾಧಾರ ಆಧರಿಸಿ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ನಡೆದಿದೆ ಎಮದು ಎಸ್ ಪಿ ಉಮಾ ಪ್ರಶಾಂತ ಮಾಹಿತಿ ನೀಡಿದ್ದಾರೆ.