ಮಂಡ್ಯ : ಅನುಮಾನ ಎಂಬುದು ಮನ್ಯುಷ್ಯನನ್ನು ಏನೆಲ್ಲ ಅಪರಾಧಗಳನ್ನು ಮಾಡಿಸುತ್ತದೆ ನೋಡಿ. ಪತ್ನಿ ತುಂಬು ಗರ್ಭಿಣಿ ಎಂಬುದನ್ನೂ ನೋಡದೇ ಆಕೆಯನ್ನೇ ಪತಿಯೇ ಹತ್ಯೆ ಮಾಡಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಶನಿವಾರ ಬೆಳಗಿನ ಜಾವ ಜರುಗಿತ್ತು. ಈ ಪ್ರಕರಣ ಸಂಬಂಧ ಆಕೆಯ ಪತಿಯನ್ನು ಪೋಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕಾಮಗೆರೆ ನಿವಾಸಿಗಳಾದ ಚಂದನ್ ಗೌಡ (24) ಹಾಗೂ ಆಶಾ (19) ಇಬ್ಬರು ಪ್ರೇಮಿಗಳು ಕಳೆದ ಒಂದುವರೆ ವರ್ಷದ ಹಿಂದೆ ಕುಟುಂಬದವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು.
ಬಳಿಕ ಚಂದನ್ ಗೌಡ ಎಳೆ ನೀರು ವ್ಯಾಪಾರ ಮಾಡಿಕೊಂಡು ಮದ್ದೂರು ಪಟ್ಟಣದ ಚನ್ನೆಗೌಡ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಆದರೆ, ದಿನ ಕಳೆದಂತೆ ಪತಿ ಪತ್ನಿ ನಡುವೆ ಮನಸ್ತಾಪ ಉಂಟಾಗಿದೆ. ಪತ್ನಿ ಆಶಾ ಯಾರೋದಿಂಗೋ ಪೋನ್ ನಲ್ಲಿ ಬ್ಯುಸಿ ಇರುತ್ತಾಳೆ ಬೇರೆ ಯಾರ ಜೊತೆ ಅಕ್ರಮ ಸಂಬಂಧವಿದೆ ಎಂದು ಪ್ರತಿ ದಿನ ಜಗಳವಾಗುತ್ತಿತ್ತು ಎನ್ನಲಾಗಿದೆ.
ಆದರೆ, ಅದನೆಲ್ಲಾ ಮರೆತು ಭಾನುವಾರ ಪತ್ನಿ ಆಶಾ ಗೆ ಸೀಮಂತ ಕಾರ್ಯಕ್ರಮವನ್ನು ಮಾಡಲು ತಯಾರಿ ಕೂಡ ನಡೆಸಲಾಗಿತ್ತು.
ಆದರೆ, ಶುಕ್ರವಾರ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ಉಂಟಾಗಿ ತೀವ್ರ ಸ್ವರೂಪ ಪಡೆದು ವೇಲ್ ನಿಂದ ತುಂಬು ಗರ್ಭಿಣಿ ಪತ್ನಿಯ ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾನೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಮದ್ದೂರು ಪೋಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್, ಪಿಎಸ್ಐಗಳಾದ ಮಂಜುನಾಥ್, ರವಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪತಿ ಚಂದನ್ ಗೌಡ ನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದಾಗ ಪತ್ನಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಳಿಕ ಮದ್ದೂರು ಪೋಲೀಸ್ ಠಾಣೆಗೆ ಆರೋಪಿ ಚಂದನ್ ಗೌಡ ನನ್ನು ಮದ್ದೂರು ಪಟ್ಟಣದ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ : ಗಿರೀಶ್ ರಾಜ್ ಮಂಡ್ಯ