ಬೆಂಗಳೂರು : ರಾಜ್ಯದಲ್ಲಿ ಜಲಮಾಲಿನ್ಯ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ 474 ಗ್ರಾಮ ಪಂಚಾಯತಿಗಳಲ್ಲಿ ಎರಡು ಹಂತದಲ್ಲಿ 500 ಬೂದು ನೀರಿನ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಮನೆಗಳಲ್ಲಿ ಬಟ್ಟೆ, ಪಾತ್ರೆ ತೊಳೆಯಲು ಹಾಗೂ ಬಚ್ಚಲು ಮನೆಯಿಂದ ಹೊರಬಂದ ಬೂದು ನೀರನ್ನು ಸಮರ್ಪಕವಾಗಿ ನಿರ್ವಹಿಸಿದೇ ಇರುವ ಕಾರಣದಿಂದ ಜಲಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಬೂದು ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಶುದ್ಧೀಕರಣ ಮಾಡುವ ಮಹತ್ವದ ಯೋಜನೆಯನ್ನು ಮನರೇಗಾ ಅಡಿ ಅನುಷ್ಠಾನ ಮಾಡಲಾಗುತ್ತಿದ್ದು, ರಾಜ್ಯದ 474 ಗ್ರಾಮ ಪಂಚಾಯತಿಗಳಲ್ಲಿ ಎರಡು ಹಂತದಲ್ಲಿ 500 ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರತಿ ಮನೆಯಿಂದ 60-70 ಲೀಟರ್ ಬೂದು ನೀರು ಉತ್ಪತ್ತಿಯಾಗುತ್ತದೆ. ಇದು ಹಳ್ಳ, ಕೆರೆ, ನದಿ ಸೇರುವ ಮುನ್ನ ಸಂಸ್ಕರಣೆ ಮಾಡುವುದು, ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ತಡೆಗಟ್ಟುವುದು, ವೈಜ್ಞಾನಿಕವಾಗಿ ನೀರು ಇಂಗಿಸಿ ಅಂತರ್ಜಲಮಟ್ಟ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದೇಶವಾಗಿದೆ. ರಾಜ್ಯದ ಪ್ರತಿ ತಾಲೂಕಿಗೆ ಕನಿಷ್ಠ 2 ರಿಂದ 3 ಘಟಕಗಳನ್ನು ನಿರ್ಮಿಸಲು ಗುರಿ ಹೊಂದಲಾಗಿದ್ದು ಮೊದಲ ಹಂತದಲ್ಲಿ ಬೆಳಗಾವಿ ಗ್ರಾಮಪಂಚಾಯತಿಗಳಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರತಿ ಪಂಚಾಯತಿಯಲ್ಲಿಯೂ ನೈರ್ಮಲ್ಯ ಕಾಪಾಡಲು ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಮಹಾತ್ಮ ಗಾಂಧಿ ಅವರ ಸ್ವಚ್ಛ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ನಮ್ಮ ಇಲಾಖೆ ಬದ್ಧವಾಗಿದೆ ಎಂದರು.