ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಏಪ್ರಿಲ್ 18 ರಿಂದ 20 ರವರೆಗೆ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಸಭೆ ನಡೆಸುವ ನಿರ್ಧಾರವು ಬಿಜೆಪಿಯ ಮಿಷನ್ ಸೌತ್ ಯೋಜನೆಗೆ ಮಹತ್ವದ ಸಂಕೇತವಾಗಿದೆ.
ಇದು ದಕ್ಷಿಣ ಭಾರತದ ಕಡೆಗೆ ಪಕ್ಷದ ಚುನಾವಣಾ ಕಾರ್ಯತಂತ್ರದ ಬದಲಾವಣೆಯನ್ನು ಸೂಚಿಸುತ್ತದೆ, ಈಗ ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಂತಹ ರಾಜ್ಯಗಳಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವ ಕೇಂದ್ರೀಕೃತ ಪ್ರಯತ್ನವಾಗಿದೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪಕ್ಷದ ಹೊಸ ಅಧ್ಯಕ್ಷರನ್ನು ಘೋಷಿಸುವುದು ಕಾರ್ಯಸೂಚಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ, ಹೊಸ ಮುಖ್ಯಸ್ಥರು ದಕ್ಷಿಣ ಭಾರತದವರಾಗಿರಬಹುದು, ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪಕ್ಷದ ನೀತಿಗೆ ಅನುಗುಣವಾಗಿ ಮಹಿಳಾ ನಾಯಕರು ಮೇಲುಗೈ ಸಾಧಿಸಬಹುದು ಎನ್ನಲಾಗಿದೆ.
ಆಂಧ್ರಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ ಅವರನ್ನು ಪರಿಗಣಿಸಲಾಗುತ್ತಿರುವ ಮಹಿಳಾ ನಾಯಕರಲ್ಲಿ ಒಬ್ಬರು. ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಭೂಪೇಂದ್ರ ಯಾದವ್ ಮತ್ತು ಧರ್ಮೇಂದ್ರ ಪ್ರಧಾನ್ ಅವರ ಹೆಸರುಗಳು ಕೇಳಿಬರುತ್ತಿವೆ.
ಸುಧಾ ಯಾದವ್, ವಿನೋದ್ ತಾವ್ಡೆ, ತರುಣ್ ಚುಗ್ ಮತ್ತು ಅರುಣ್ ಕುಮಾರ್ ಕೂಡ ರೇಸ್ ನಲ್ಲಿದ್ದಾರೆ. ಸಂಜಯ್ ಜೋಶಿ ಮತ್ತು ರಾಮ್ ಮಾಧವ್ ಅವರೊಂದಿಗೆ ಸರ್ಬಾನಂದ ಸೋನೊವಾಲ್ ಮತ್ತು ಕಿರಣ್ ರಿಜಿಜು ಅವರನ್ನು ಪಕ್ಷದ ಉನ್ನತ ಹುದ್ದೆಗೆ ಪರಿಗಣಿಸುವ ಬಗ್ಗೆ ಊಹಾಪೋಹಗಳಿವೆ.








