ನವದೆಹಲಿ: ಕಳೆದ ನಾಲ್ಕು ದಿನಗಳಲ್ಲಿ ಎಲ್ಲ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಹುಸಿ ಬಾಂಬ್ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್)ಯ ಮಹಾನಿರ್ದೇಶಕರು (ಡಿಜಿ) ಶನಿವಾರ ದಿಲ್ಲಿಯ ಬಿಸಿಎಎಸ್ ಪ್ರಧಾನ ಕಚೇರಿಯಲ್ಲಿ ವಿಮಾನಯಾನ ಸಂಸ್ಥೆಗಳ ಸಭೆ ನಡೆಸಿದರು
ವಿಮಾನಯಾನ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ಡಿಜಿ ಬಿಸಿಎಎಸ್ ಜುಲ್ಫಿಕರ್ ಹಸನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ, ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸರಣಿ ಹುಸಿ ಬಾಂಬ್ ಬೆದರಿಕೆಗಳಿಂದಾಗಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹಬ್ಬದ ಋತುವಿನಲ್ಲಿ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ವಿಮಾನ ನಿಲ್ದಾಣದಲ್ಲಿ ದಟ್ಟಣೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಸಭೆಯಲ್ಲಿ, ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಬಿಸಿಎಎಸ್ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿತು. ಸಮಸ್ಯೆಯ ಮೂಲ ಕಾರಣವನ್ನು ತಲುಪಲು ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಬಿಸಿಎಎಸ್ ಅಧಿಕಾರಿಗಳು ವಿಮಾನಯಾನ ಪ್ರತಿನಿಧಿಗಳಿಗೆ ಭರವಸೆ ನೀಡಿದರು.
ಬ್ಯಾಕ್ ಟು ಬ್ಯಾಕ್ ಬೆದರಿಕೆಗಳು ವಿಮಾನಯಾನ ಸಂಸ್ಥೆಗಳು, ಭದ್ರತಾ ಪಡೆಗಳು ಮತ್ತು ಪ್ರಯಾಣಿಕರ ಮೇಲೆ ಗಮನಾರ್ಹ ಹೊರೆಯನ್ನು ಹೇರಿವೆ. ಹಬ್ಬದ ಸಮಯದಲ್ಲಿ ಕಾರ್ಯಾಚರಣೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ವಾಯುಯಾನ ಭದ್ರತೆಯ ಎಲ್ಲಾ ಪಾಲುದಾರರಿಗೆ ಕಠಿಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ, ಸ್ಪೈಸ್ ಜೆಟ್ ಮತ್ತು ಏರ್ ಏಷ್ಯಾ ವಿಮಾನಗಳಿಗೆ ತಲಾ ಐದು ಬಾಂಬ್ ಬೆದರಿಕೆಗಳು ಬಂದಿದ್ದವು, ಕಳೆದ ದಿನಗಳಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ಒಟ್ಟು 30 ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ್ದವು