ಬೆಂಗಳೂರು: ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲಿನ ಹಲ್ಲೆಗೆ KSDMF ಅಧ್ಯಕ್ಷ ಸಮೀವುಲ್ಲಾ ಬೆಲಗೂರು ಖಂಡಿಸಿದ್ದಾರೆ. ಅಲ್ಲದೇ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದಂತ ಪುಂಡರ ವಿರುದ್ಧ ಕಾನೂನು ಕ್ರಮಕ್ಕೆ ಗೃಹಸಚಿವರಿಗೆ ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು ಧರ್ಮಸ್ಥಳದಲ್ಲಿ ಕಾರ್ಯನಿರತರಾಗಿದ್ದ ಡಿಜಿಟಲ್ ಮಾದ್ಯಮದ ಮೇಲೆ ಮತ್ತು ಇತರೆ ಪತ್ರಕರ್ತರ ಮೇಲೂ ಕೆಲವು ಪುಂಡರು ನಡೆಸಿರುವ ಹಲ್ಲೆ , ಅಭಿವ್ಯಕ್ತಿ ಸ್ವತಂತ್ರದ ಮೇಲೆ ನಡೆದ ದಾಳಿ ಆಗಿದೆ. ವಸ್ತುಸ್ಥಿತಿಯನ್ನು ವರದಿ ಮಾಡಲು ಹೋದ ಡಿಜಿಟಲ್ ಮಾದ್ಯಮದ ಪತ್ರಕರ್ತರನ್ನು ಈ ಗುಂಪು ಟಾರ್ಗೆಟ್ ಮಾಡಿರುವುದು ಹೇಯ ಕೃತ್ಯ. ಧರ್ಮಸ್ಥಳದ ಘನತೆಗೆ ಈ ಪುಂಡರು ಚ್ಯುತಿ ತಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿರುವ ವಿದ್ಯಮಾನಗಳು ದೇಶದ ಗಮನಸೆಳೆದಿದ್ದು, ಸಹಜವಾಗಿ ಡಿಜಿಟಲ್ ಮಾಧ್ಯಮಗಳೂ ಸಹ ವರದಿ ಮಾಡಲು ಹೋಗಿದ್ದರಲ್ಲಿ ತಪ್ಪೇನಿದೆ? ಇದು ಪತ್ರಿಕಾ ಸ್ವತಂತ್ರದ ಮೇಲೆ ನಡೆದ ಹಲ್ಲೆ ಆಗಿದೆ. ಚಾನೆಲ್ ನ ವರದಿಗಾರರ ಮೇಲೂ ಹಲ್ಲೆ ನಡೆದಿದ್ದು ಇದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ಹಲ್ಲೆ ನಡೆಸಿದ ಪುಂಡರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಡಿಜಿಟಲ್ ಮಾಧ್ಯಮ ಸೇರಿ ಹಲವು ಮಾದ್ಯಮಗಳ ಪ್ರತಿನಿಧಿಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ರಕ್ಷಣೆ ನೀಡಬೇಕು ಎಂದು ರಾಜ್ಯದ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್ ಅವರನ್ನು ಆಗ್ರಹಪಡಿಸಿದ್ದಾರೆ.
ಇದೊಂದು ಸೂಕ್ಷ್ಮ ವಿಚಾರ ಆಗಿದ್ದು, ವರದಿ ಮಾಡಬೇಕಾದರೆ ಸಮತೋಲನ ಮತ್ತು ಸಂಯಮದಿಂದ ವರದಿ ಮಾಡಬೇಕೆಂದು ವೃತ್ತಿ ಬಾಂಧವರನ್ನು ವಿನಂತಿಸಿದ್ದಾರೆ.