ಭೋಪಾಲ್: ಮಹಿಳೆಯರು ತಮ್ಮ ಗಂಡಂದಿರಿಗೆ ಮನೆಯಲ್ಲಿ ಮದ್ಯ ತಂದು ಕುಡಿಯುವಂತೆ ಹೇಳಬೇಕು ಎಂದು ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ನಾರಾಯಣ್ ಸಿಂಗ್ ಕುಶ್ವಾಹ ಸಲಹೆ ನೀಡಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ವಿಕಲಚೇತನರ ಸಬಲೀಕರಣ ಸಚಿವ ನಾರಾಯಣ್ ಸಿಂಗ್ ಕುಶ್ವಾಹ ಅವರು ರಾಜ್ಯ ರಾಜಧಾನಿ ಭೋಪಾಲ್ನಲ್ಲಿ ನಡೆದ ನಶಾ ಮುಕ್ತಿ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. “ಹೊರಗಿನಿಂದ ಮದ್ಯ ಸೇವಿಸಿ ಮನೆಗೆ ಬರುವ ಪುರುಷರು, ಅವರ ಹೆಂಡತಿಯರು ಮದ್ಯವನ್ನು ಮನೆಗೆ ತಂದು ಕುಡಿಯಲು ಹೇಳಬೇಕು. ಅವರು ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮುಂದೆ ಮದ್ಯ ಸೇವಿಸಿದರೆ, ಅವರು ನಾಚಿಕೆಪಡುತ್ತಾರೆ ಮತ್ತು ಅದು ಕ್ರಮೇಣ ಕುಡಿತದ ಚಟವನ್ನು ತೊಡೆದುಹಾಕಲು ಅನುವು ಮಾಡಿಕೊಡುತ್ತದೆ” ಎಂದು ಸಚಿವರು ಹೇಳಿದರು.