ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ರಾಜ್ಯಾದ್ಯಂತ ರೌಡಿಗಳ ಜೊತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಈ ಬಗ್ಗೆ ನಟ ದರ್ಶನ್ ಅವರ ಅಭಿಮಾನಿ ಸಂಘಗಳ ಪ್ರಮುಖ ಸದಸ್ಯರು ಮತ್ತು ಅವರ ಚಟುವಟಿಕೆಗಳನ್ನು ಕರ್ನಾಟಕ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಅಭಿಮಾನಿ ಗುಂಪುಗಳ ಪರದೆಯ ಹಿಂದೆ ಅಡಗಿರುವ ಈ ಕ್ರಿಮಿನಲ್ ಶಕ್ತಿಗಳಿಗೆ ನಟ ದರ್ಶನ್ ರಕ್ಷಕರಾಗಿದ್ದರರು ಎಂದು ಪೊಲೀಸರು ಹೇಳಿದ್ದಾರೆ. ತನ್ನ ಅಭಿಮಾನಿ ಸಂಘಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ವಿವಿಧ ಭಾಗಗಳಲ್ಲಿನ ರೌಡಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಸ್ಯಾಂಡಲ್ವುಡ್ ಸ್ಟಾರ್ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಯೋಚಿಸುತ್ತಿದ್ದಾರೆ. “ದರ್ಶನ್ ತಮ್ಮ ಹಣಬಲ ಮತ್ತು ಪ್ರಭಾವದಿಂದ ಅವರನ್ನು ರಕ್ಷಿಸುತ್ತಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದರ್ಶನ್ ಸಿನಿಮಾಗಳು ‘ಪ್ರತಿಸ್ಪರ್ಧಿ ನಟ’ನೊಂದಿಗೆ ಏಕಕಾಲದಲ್ಲಿ ಬಿಡುಗಡೆಯಾದಾಗಲೆಲ್ಲಾ ಈ ಫ್ಯಾನ್ ಕ್ಲಬ್ ಸದಸ್ಯರು ಇತರ ನಟರ ಫ್ಯಾನ್ ಕ್ಲಬ್ ಸದಸ್ಯರೊಂದಿಗೆ ಘರ್ಷಣೆ ನಡೆಸುತ್ತಾರೆ ಎಂದು ಗಮನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.