ಬೆಂಗಳೂರು : ದೀಪಾವಳಿಗೂ ಮುನ್ನ ಜನಸಾಮಾನ್ಯರಿಗೆ ಮತ್ತೊಂದು ಶಾಕ್. ಹಬ್ಬ ಹರಿದಿನಗಳಲ್ಲಿ ದಿನಸಿ, ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಒಂದು ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಅಭೂತಪೂರ್ವ ಏರಿಕೆ ಕಂಡು ಬಂದಿದೆ. ಇದೀಗ ತರಕಾರಿ ಬೆಲೆ ಗಗನಕ್ಕೇರಿದೆ.
ಕಳೆದ ತಿಂಗಳು ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಆಮದು ಸುಂಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಿದ್ದರಿಂದ ಅಡುಗೆ ಎಣ್ಣೆ ದರ 20 ರಿಂದ 25 ರೂ. ಹೆಚ್ಚಳವಾಗಿತ್ತು. ಇದೀಗ ಮತ್ತೆ 5 ರೂ.ವರೆಗೆ ಹೆಚ್ಚಳವಾಗಿದೆ. ಸಗಟು ದರದಲ್ಲಿ ಪ್ರತಿ ಲೀಟರ್ ಸೂರ್ಯಕಾಂತಿ ಎಣ್ಣೆ ದರ ಕಳೆದ ವಾರ 120ರೂವರೆಗೂ ಇದ್ದು, ಈಗ 128 ರೂ. ಆಗಿದೆ. ತಾಳೆಎಣ್ಣೆ ದರ 117.50 ರೂ.ನಿಂದ 120 ರೂಪಾಯಿ ದಾಟಿದೆ. ಸೋಯಾಬೀನ್ ಎಣ್ಣೆ ದರ ಕೆಜಿ 20-22 ರೂ. ಹೆಚ್ಚಳವಾಗಿದೆ.
ಈರುಳ್ಳಿ ಬೆಲೆ ಏರಿಕೆ
ರಾಜ್ಯದಲ್ಲಿ ಒಂದು ವಾರದಲ್ಲಿ ಸುರಿದ ಮಳೆಗೆ ಈರುಳ್ಳಿ ಫಸಲು ಹಾನಿಗೀಡಾಗಿದೆ. ಇದರಿಂದ ಗುಣಮಟ್ಟದ ಈರುಳ್ಳಿಯ ಚಿಲ್ಲರೆ ದರವು ಕೆ.ಜಿಗೆ 70 ರೂ.ಗೆ ಮುಟ್ಟಿದೆ. ಸದ್ಯ ಬೆಂಗಳೂರಿನಲ್ಲಿ’ಎ’ ಗ್ರೇಡ್ ಈರುಳ್ಳಿಯ ಸಗಟು ದರ ಕ್ವಿಂಟಲ್ಗೆ 4500 ರೂ. ಇದೆ. ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿಯ ಸಗಟು ಬೆಲೆ ಕ್ವಿಂಟಲ್ಗೆ 5000ದಿಂದ 5200 ರೂ. ಇದೆ. ‘ಮಳೆಯಿಂದಾಗಿ ಪೂರೈಕೆ ಕಡಿಮೆಯಾಗಿದೆ. ಇದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ಟೊಮೆಟೊ ಬೆಲೆಯಲ್ಲಿ ಏರಿಕೆ
ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಕೆ.ಜಿ ಟೊಮೆಟೊ ಧಾರಣೆಯು 60 ರಿಂದ 90 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಈ ಬಾರಿ ನಾಟಿ ಮಾಡಿದ್ದ ಫಸಲಿನ ಪೈಕಿ ಶೇ 50ರಷ್ಟು ಹಾನಿಗೀಡಾಗಿದೆ. ಹೀಗಾಗಿ ಟೊಮೆಟೊ ಬೆಲೆಗೆ ಏರಿಕೆಗೆ ಕಾರಣ ಎನ್ನಲಾಗಿದೆ.
ಬೆಳ್ಳುಳ್ಳಿ ಬೆಲೆ ಏರಿಕೆ
ರಾಜ್ಯದಲ್ಲಿ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿದ್ದು, ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ನವೆಂಬರ್ ವೇಳೆಗೆ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗಲಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ. ಕಳೆದ ಫೆಬ್ರವರಿಯಲ್ಲಿ ಬೆಳ್ಳುಳ್ಳಿ ದರ 500 ರೂ. ಸಮೀಪಿಸಿತ್ತು. ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಬೆಳ್ಳುಳ್ಳಿ ದರ 360 ರಿಂದ 370 ರೂ.ಗೆ ಮಾರಾಟವಾಗುತ್ತಿದೆ. ಕೆಲವು ಕಡೆ ಕೆಜಿಗೆ 400 ರೂ. ತಲುಪಿದೆ. ಕೇಂದ್ರ ಸರ್ಕಾರ ದೇಶದ ರೈತರ ಹಿತ ದೃಷ್ಟಿಯಿಂದ ಬೆಳ್ಳುಳ್ಳಿ ಮೇಲಿನ ಆಮದು ಸುಂಕವನ್ನು 100ರಷ್ಟು ಹೆಚ್ಚಿಸಿದೆ.