ಶಿವಮೊಗ್ಗ: ಅವಳು ಮತ್ತೊಮ್ಮೆ ತಾಯಿಯಾಗುವ ಸಂಭ್ರಮದಲ್ಲಿದ್ದಳು. ಹೊಟ್ಟೆಯಲ್ಲಿ ಐದು ತಿಂಗಳ ಜೀವವೊಂದು ಆಕಾರ ಪಡೆಯುತ್ತಿತ್ತು. ಕೈಯಲ್ಲಿ ಹಿಡಿದ ಸ್ಟೆತಸ್ಕೋಪ್ ಮೂಲಕ ಸಾವಿರಾರು ಜನರ ಜೀವ ಉಳಿಸುತ್ತಿದ್ದ ಆ ‘ನರ್ಸ್’ ಕೈಗಳು, ಇಂದು ತಾನೇ ಜೀವನ್ಮರಣ ಹೋರಾಟ ನಡೆಸಿ ಸೋತು ಹೋಗಿವೆ. ಪ್ರೀತಿ ಮಾಡಿ ಮದುವೆಯಾದ ಪತಿಯ ಮೇಲಿನ ಅನುರಾಗ, ಇಬ್ಬನಿ ಅರಳುವಂತಿದ್ದ ಪುಟ್ಟ ಮಗಳ ಮುಖ.. ಯಾವುದೂ ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವರದಕ್ಷಿಣೆ ಎಂಬ ಕಿಚ್ಚು, ಐದು ತಿಂಗಳ ಗರ್ಭಿಣಿ ಶ್ವೇತಾ (30) ಎಂಬ ನಂದಾದೀಪವನ್ನು ಜೀವಂತವಾಗಿ ದಹಿಸಿಬಿಟ್ಟಿದೆ.
ಪ್ರೀತಿಯ ಹಾದಿಯಲ್ಲಿ ಕೆನ್ನಾಲಿಗೆಯ ನೆರಳು
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಮಂಜಪ್ಪ ಮತ್ತು ನಾಗರತ್ನ ದಂಪತಿಯ ಪುತ್ರಿ ಶ್ವೇತಾ, ಹೊಡಬಟ್ಟೆಯ ನವೀನ್ ಎಂಬುವವರನ್ನು ಪ್ರೀತಿಸಿದ್ದರು. 2020ರ ಮೇ ತಿಂಗಳಲ್ಲಿ ಪೋಷಕರ ಸಮ್ಮತಿಯೊಂದಿಗೆ ಇಬ್ಬರೂ ಹಸೆಮಣೆ ಏರಿದ್ದರು. ವೈವಾಹಿಕ ಜೀವನದ ಫಲವಾಗಿ ಒಂದು ಹೆಣ್ಣು ಮಗುವೂ ಜನಿಸಿತ್ತು. ಆದರೆ, ಈ ಸುಂದರ ಸಂಸಾರಕ್ಕೆ ಕಂಟಕವಾಗಿದ್ದು ಮಾತ್ರ ಸ್ವಂತ ಅತ್ತೆ-ಮಾವ. ಹಿರಿಯ ಮಗನ ಮೇಲೆ ಅತಿ ಪ್ರೀತಿ, ಕಿರಿಯ ಮಗ ನವೀನ್ ಮತ್ತು ಸೊಸೆ ಶ್ವೇತಾ ಮೇಲೆ ನಿರಂತರ ದ್ವೇಷ – ಇದು ಆ ಮನೆಯಲ್ಲಿ ನಿತ್ಯೋತ್ಸವವಾಗಿತ್ತು.
ಕರಾಳ ಮಾರ್ಚ್ 29: ಅಂದು ನಡೆದಿದ್ದೇನು?
ಕಳೆದ ಭಾನುವಾರ (ಮಾರ್ಚ್ 29) ಆ ಮನೆಯಲ್ಲಿ ಸಂಭವಿಸಿದ್ದು ಸಣ್ಣ ಜಗಳವಲ್ಲ, ಅದು ಅಮಾನವೀಯತೆಯ ಪರಾಕಾಷ್ಠೆ. ಅತ್ತೆ ಜಾನಕಿ ಮತ್ತು ಮಾವ ಸಣ್ಣಪ್ಪ ಕ್ಷುಲ್ಲಕ ಕಾರಣಕ್ಕೆ ತೆಗೆದ ಗಲಾಟೆ ರಾಜಿ ಪಂಚಾಯ್ತಿಯಲ್ಲಿ ಮುಗಿಯಬೇಕಿತ್ತು. ಆದರೆ, ಇವರ ಮನಸ್ಸಿನಲ್ಲಿದ್ದ ಕ್ರೌರ್ಯ ಪೆಟ್ರೋಲ್ ರೂಪದಲ್ಲಿ ಹೊರಬಂತು. ನಡುಮನೆಯಲ್ಲೇ ಅಸಹಾಯಕ ಗರ್ಭಿಣಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು.
“ಮುಖ ಸೇರಿದಂತೆ ದೇಹದ ಶೇ. 90ರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಆಕೆ ಸಾವು-ನೋವಿನ ನಡುವೆ ಹೋರಾಟ ನಡೆಸಿದಳು. ಆದರೆ ಏಪ್ರಿಲ್ 1ರ ರಾತ್ರಿ ವಿಧಿಯ ಆಟದ ಮುಂದೆ ವೈದ್ಯಕೀಯ ಚಿಕಿತ್ಸೆ ಸೋಲೊಪ್ಪಿತು. ಶ್ವೇತಾ ಚಿಕಿತ್ಸೆ ಫಲಿಸದೇ 5 ತಿಂಗಳ ಗರ್ಭಿಣಿ ಸಾವನ್ನಪ್ಪಿದಳು. ಶ್ವೇತಾ ಹೊಟ್ಟೆಯಲ್ಲಿದ್ದ ಮಗುವನ್ನು ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಬದುಕಿಸೋ ಪ್ರಯತ್ನ ಮಾಡಿದರೂ ಅದು ಸಾಧ್ಯವೇ ಆಗಲಿಲ್ಲ”
ತಂದೆ-ತಾಯಿ ಮತ್ತು ಸಹೋದರನ ರೋದನ
“ನನ್ನ ಮಗಳು-ಅಳಿಯ ತುಂಬಾ ಚೆನ್ನಾಗಿದ್ದರು. ಆ ಅತ್ತೆ ಜಾನಕಿ, ಮಾವ ಸಣ್ಣಪ್ಪ, ದೊಡ್ಡ ಮಗ ಹೇಮಂತ್, ಅವರ ಪತ್ನಿ ದಿವ್ಯ, ಸಣ್ಣಪ್ಪ ಅವರ ತಂಗಿ ಮಂಜಮ್ಮ, ಪುತ್ರಿ ಸುಜಾತ ಕಿರುಕುಳ ನೀಡಿ ಪೆಟ್ರೋಲ್ ಸುರಿದು ನನ್ನ ಮಗಳನ್ನು ಕೊಂದಿದ್ದಾರೆ ಎಂದು ತಾಯಿ ನಾಗರತ್ನ ಆಕ್ರೋಶ ಹೊರಹಾಕಿದ್ದಾರೆ.
ಶ್ವೇತಾ ತಂದೆ ಮಂಜಪ್ಪ ಅವರು “ಮಧ್ಯರಾತ್ರಿಯೆಲ್ಲಾ ಓಡಿ ಮನೆಗೆ ಬರುತ್ತಿದ್ದಳು, ಕೇಳಿದರೆ ಏನೂ ಹೇಳುತ್ತಿರಲಿಲ್ಲ. ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾಳೆಂದು ಅನಿಸಿರಲಿಲ್ಲ” ಎಂದು ಅವರು ಬಿಕ್ಕಳಿಸುತ್ತಿದ್ದಾರೆ.
ತಮ್ಮ ಯೋಗೇಶ್ನ ಆಕ್ರಂದನವಂತೂ ಕಲ್ಲು ಮನಸ್ಸನ್ನೂ ಕರಗಿಸುವಂತಿದೆ. “ನಾನು ಇನ್ಯಾರಿಗೆ ಸೀರೆ ತರಲಿ ಅಕ್ಕ? ದಿನವೂ ಫೋನ್ ಮಾಡಿ ನನ್ನನ್ನೇ ಸಲಹೆ ಕೇಳುತ್ತಿದ್ದಳು. ಅವಳು ಹೇಡಿಯಲ್ಲ, ಇದು ಖಂಡಿತವಾಗಿಯೂ ಕೊಲೆ” ಎಂದು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾನೆ.
ಪತಿಯ ಅಸಹಾಯಕತೆ
ಪತಿ ನವೀನ್ ಅವರ ಸ್ಥಿತಿ ಅಯೋಮಯವಾಗಿದೆ. “ನಾನು ಅವರನ್ನು ತಂದೆ-ತಾಯಿ ಎಂದು ಕರೆಯಲು ಇಷ್ಟಪಡದಷ್ಟು ಕಿರುಕುಳ ನೀಡುತ್ತಿದ್ದರು. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಶ್ವೇತಾ ಅನೇಕ ವಿಷಯಗಳನ್ನು ನನ್ನಿಂದ ಮುಚ್ಚಿಟ್ಟಿದ್ದಳು. ನಮ್ಮ ಮೊದಲ ಮಗಳು ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ಪ್ರಾಣ ಬಿಡುತ್ತಿದ್ದೆ,” ಎಂದು ಅವರು ಮರುಗುತ್ತಿದ್ದಾರೆ.
ನ್ಯಾಯಕ್ಕಾಗಿ ಆಗ್ರಹ
ಶ್ವೇತಾ ಕೆಲಸ ಮಾಡುತ್ತಿದ್ದ ಡೈಯೋಗ್ನಾಸ್ಟಿಕ್ ಸೆಂಟರ್ ಹಾಗೂ ಅವರ ಊರಿನಲ್ಲಿ ಆಕೆಯ ಬಗ್ಗೆ ಎಲ್ಲರಿಗೂ ಅಪಾರ ಗೌರವವಿತ್ತು. “ಎಂತಹ ಕಷ್ಟ ಬಂದರೂ ಎದುರಿಸುವ ಗಟ್ಟಿಗಿತ್ತಿ ಆಕೆ, ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ,” ಎಂಬುದು ಸ್ಥಳೀಯರ ಒಕ್ಕೊರಲ ಧ್ವನಿ.
ಸದ್ಯಕ್ಕೆ ಆರೋಪಿಗಳಾದ ಅತ್ತೆ ಜಾನಕಿ, ಮಾವ ಸಣ್ಣಪ್ಪ ತಲೆಮರೆಸಿಕೊಂಡಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಾನೂನು ಇವರಿಗೆ ಶಿಕ್ಷೆ ನೀಡಬಹುದು, ಆದರೆ ಶ್ವೇತಾ ಹೊಟ್ಟೆಯಲ್ಲಿದ್ದ ಆ ಐದು ತಿಂಗಳ ಕಂದಮ್ಮ ಮತ್ತು ಅನಾಥವಾದ ಆ ಪುಟ್ಟ ಮಗಳ ಭವಿಷ್ಯಕ್ಕೆ ನ್ಯಾಯ ಸಿಗುವುದು ಯಾವಾಗ? ಎನ್ನುವುದು ಕುಟುಂಬಸ್ಥರ ಪ್ರಶ್ನೆಯಾಗಿದೆ.
ವರದಕ್ಷಿಣೆ ಎಂಬ ಈ ಪಿಡುಗು ಇನ್ನೆಷ್ಟು ಹೆಣ್ಣು ಮಕ್ಕಳ ಬಲಿ ಪಡೆಯಬೇಕು? ಸಮಾಜವೇ ತಲೆತಗ್ಗಿಸುವ ಈ ಘಟನೆಗೆ ನ್ಯಾಯ ಸಿಗಲಿ ಎಂಬುವುದೇ ಎಲ್ಲರ ಆಶಯ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸ್ವ-ಉದ್ಯೋಗಾಕಾಂಕ್ಷಿ ಯುವಕರ ಗಮನಕ್ಕೆ: ಉಚಿತ ‘ದ್ವಿಚಕ್ರ ವಾಹನ ರಿಪೇರಿ’ ತರಬೇತಿಗೆ ಅರ್ಜಿ ಆಹ್ವಾನ!
Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!








