ಗೋವಾ / ಬೆಂಗಳೂರು : ‘ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯತ್ ಸಾಮರ್ಥ್ಯ’ಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಕರ್ನಾಟಕ ತನ್ನದಾಗಿಸಿಕೊಡಿದೆ.
ಗೋವಾದಲ್ಲಿ ನಡೆದ 2026ನೇ ಸಾಲಿನ ವಿಶ್ವ ಪವನ ದಿನಾಚರಣೆಯಲ್ಲಿ ಕರ್ನಾಟಕಕ್ಕೆ ಪ್ರತಿಷ್ಠಿತ “ಹೈಯೆಸ್ಟ್ ವಿಂಡ್ ಕ್ಯಾಪಾಸಿಟಿ ಪೈಪ್ಲೈನ್” ಪ್ರಶಸ್ತಿ ಸಂದಿದೆ.
ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಈ ಪ್ರಶಸ್ತಿ ಸ್ವೀಕರಿಸಿದರು. 9 ಗಿಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನ ಹಂತದಲ್ಲಿದೆ.
ನವ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಗೋವಾದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ರಾಮಕೃಷ್ಣ ಧವಳೀಕರ್ ಅವರ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಈ ಪ್ರಶಸ್ತಿಯೊಂದಿಗೆ ಪವನ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನವೀಕರಿಸಬಹುದಾದ ಇಂಧನ ಪರಿವರ್ತನೆಯನ್ನು ಬಲಪಡಿಸುವಲ್ಲಿ ರಾಜ್ಯದ ನಾಯಕತ್ವ ಹಾಗೂ ಬದ್ಧತೆಯನ್ನು ಸಾಬೀತುಪಡಿಸಿದಂತಾಗಿದೆ.
ಇಂಧನ ಸಚಿವ ಜಾರ್ಜ್ ಹರ್ಷ
ಪವನ ವಿದ್ಯುತ್ ವಲಯದಲ್ಲಿ ಕರ್ನಾಟಕದ ಸಾಧನೆಗೆ ಸಂದಿರುವ ಪ್ರಶಸ್ತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್,”ಕಳೆದ ಬಾರಿಯೂ ಕರ್ನಾಟಕ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಈ ಪ್ರಶಸ್ತಿಯು ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ನಮ್ಮ ಸರ್ಕಾರಕ್ಕೆ ಇರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನವೀಕರಿಸಬಹುದಾದ ಇಂಧನ ವಲಯದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ ಹೂಡಿಕೆ ಆಕರ್ಷಿಸುವ ಜತೆಗೆ ದೇಶದ ಇಂಧನ ಪರಿವರ್ತನೆ ಮತ್ತು ನಿವ್ವಳ-ಶೂನ್ಯ ಇಂಗಾಲದ ಗುರಿ ಸಾಧನೆಗೆ ಕೈಜೋಡಿಸಲಿದ್ದೇವೆ,”ಎಂದಿದ್ದಾರೆ.
ವಿಶ್ವ ಪವನ ದಿನ 2026
ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಗೋವಾ ಇಂಧನ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಪವನ ದಿನ ಆಯೋಜಿಸಿತ್ತು. “ಪವನ ಶಕ್ತಿ: ಮಹತ್ವಾಕಾಂಕ್ಷೆಯಿಂದ ವೇಗವರ್ಧನೆಗೆ” ಎಂಬ ಪರಿಕಲ್ಪನೆಯಡಿ ಆಯೋಜಿಸಿದ್ದ ಈ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯೂಟಿಎಂಎ) ಸೇರಿದಂತೆ ಡಬ್ಲ್ಯೂಐಪಿಪಿಎ, ಐಡಬ್ಲ್ಯೂಪಿಎ ಭಾಗಿಯಾಗಿದ್ದವು. ನೀತಿ ನಿರೂಪಕರು, ತಂತ್ರಜ್ಞಾನ ವಲಯದ ಜಾಗತಿಕ ನಾಯಕರು, ಹೂಡಿಕೆದಾರರು, ಉದ್ಯಮದ ಪಾಲುದಾರರ ಸಂವಾದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತ್ತು.
ವಿಶ್ವ ಪವನ ದಿನದ ಆಚರಣೆಯ ಭಾಗವಾಗಿ ನವೀಕರಿಸಬಹುದಾದ ಇಂಧನ ಅದರಲ್ಲೂ ವಿಶೇಷವಾಗಿ ಪವನ ಶಕ್ತಿಯನ್ನು ಉತ್ತೇಜಿಸುವಲ್ಲಿ ಅನುಕರಣೀಯ ಉಪಕ್ರಮಗಳನ್ನು ಪಾಲಿಸುವ ಹಾಗೂ ವಿಶೇಷ ಸಾಧನೆ ಮಾಡಿರುವ ರಾಜ್ಯಗಳನ್ನು ಗುರುತಿಸಿ, ಗೌರವಿಸಲಾಯಿತು.








