ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಭಾಷಣದಿಂದ ಸ್ಫೂರ್ತಿ ಪಡೆದಿರುವ ಮಹಾರಾಷ್ಟ್ರದ ಕುಟುಂಬವೊಂದು, ತಮ್ಮ ಮಗನ ಮದುವೆಗೆ ಯಾವುದೇ ಹೊಸ ಚಿನ್ನಾಭರಣಗಳನ್ನು ಖರೀದಿಸದಿರಲು ನಿರ್ಧರಿಸುವ ಮೂಲಕ ದೇಶದ ಗಮನ ಸೆಳೆದಿದೆ. ಇಷ್ಟೇ ಅಲ್ಲದೆ, ಭಾವಿ ಸೊಸೆಗೆ ಹೊಸ ಮಂಗಳಸೂತ್ರವನ್ನು ಕೊಡಿಸುವ ಬದಲಾಗಿ, ತಮ್ಮ ಬಳಿ ಇರುವ ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ನೀಡಲು ಮುಂದಾಗಿದೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪುಲಗಾಂವ್ನಲ್ಲಿ ಪೂಜಾ ಸಾಮಗ್ರಿಗಳ ಅಂಗಡಿ ನಡೆಸುತ್ತಿರುವ ಸತೀಶ್ ಗೌರಿಶಂಕರ್ ಚೌಬೆ ಅವರ ಕುಟುಂಬವೇ ಈ ಅಪರೂಪದ ಹಾಗೂ ಆದರ್ಶ ನಿರ್ಧಾರ ಕೈಗೊಂಡಿರುವುದು. ಈ ಕುರಿತು ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದು ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಪತ್ರ ಬರೆದಿದ್ದೇಕೆ?
ದಶಕಗಳ ಹಿಂದೆ ರಾಜಸ್ಥಾನದ ಜುಂಜುನುವಿನಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದು ನೆಲೆಸಿರುವ ಚೌಬೆ ಅವರದ್ದು ಸರಳ ಮಾರ್ವಾಡಿ ಕುಟುಂಬ. ಜುಲೈ 1ರಂದು ಇವರ ಮಗ ಯಶ್ ಅವರ ವಿವಾಹ ಮಹೋತ್ಸವ ನಿಗದಿಯಾಗಿದೆ. ಮದುವೆಗೆ ಬಂಗಾರದ ಒಡವೆ ಹಾಗೂ ಮಂಗಳಸೂತ್ರ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ, ಸತೀಶ್ ಅವರ ಪತ್ನಿ ಸೀಮಾ ಚೌಬೆ ಅವರು ತಮ್ಮ ಬಳಿಯಿರುವ ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ಸೊಸೆಗೆ ನೀಡುವ ಪ್ರಸ್ತಾಪ ಇಟ್ಟಿದ್ದಾರೆ. ಇದಕ್ಕೆ ಕುಟುಂಬದ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಜವಾಬ್ದಾರಿಯುತವಾಗಿ ಖರ್ಚು ಮಾಡಲು ಈ ತೀರ್ಮಾನ ಕೈಗೊಂಡಿರುವುದಾಗಿ ಸತೀಶ್ ಚೌಬೆ ಅವರು ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. “ಈ ನಮ್ಮ ನಿರ್ಧಾರ ಕೇವಲ ಹಣ ಉಳಿಸುವುದಕ್ಕಾಗಿ ಅಲ್ಲ. ಬದಲಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ತನ್ನ ವೈಯಕ್ತಿಕ ಆಯ್ಕೆಗಳನ್ನು ಬದಲಿಸಿಕೊಳ್ಳುವ ಮೂಲಕ ದೇಶದ ಹಿತಾಸಕ್ತಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ತೋರಿಸುವ ಪ್ರಜ್ಞಾಪೂರ್ವಕ ಪ್ರಯತ್ನವಾಗಿದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತೀರಾ ಸರಳವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ಕಡಿಮೆ ವೆಚ್ಚದಲ್ಲಿ ಮದುವೆ ಮಾಡಲಿದ್ದೇವೆ ಎಂದಿರುವ ಅವರು, ಪ್ರಧಾನಿ ಮೋದಿಯವರೇ ಖುದ್ದಾಗಿ ಆಗಮಿಸಿ ನವದಂಪತಿಗೆ ಆಶೀರ್ವಾದ ಮಾಡಬೇಕು ಎಂದೂ ಆಮಂತ್ರಣ ನೀಡಿದ್ದಾರೆ.
ಈ ನಿರ್ಧಾರದ ಹಿಂದಿನ ಅಸಲಿ ಕಾರಣವೇನು?
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಜಾಗತಿಕ ರಾಜಕಾರಣದಿಂದಾಗಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದವು. ಇದರಿಂದಾಗಿ ಭಾರತಕ್ಕೆ ತೈಲವನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯ (Foreign Exchange) ವೆಚ್ಚವಾಗುತ್ತಿತ್ತು.
ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಮತ್ತು ಅತ್ಯಂತ ಅವಶ್ಯಕವಾಗಿರುವ ತೈಲ ಆಮದಿಗಾಗಿ ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ, ದೇಶದ ಜನರು ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಶುಭಕಾರ್ಯಗಳಿಗೆ ಅನಗತ್ಯವಾಗಿ ಬಂಗಾರವನ್ನು ಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಮಾತನ್ನೇ ಗಂಭೀರವಾಗಿ ಪರಿಗಣಿಸಿದ ಚೌಬೆ ಕುಟುಂಬ, ಹೊಸ ಚಿನ್ನ ಖರೀದಿಗೆ ಬ್ರೇಕ್ ಹಾಕಿ ಇತರರಿಗೆ ಮಾದರಿಯಾಗಿದೆ.
Lipstick Ban: ಮಕ್ಕಳನ್ನು ‘ಕ್ಯಾನ್ಸರ್’ನಿಂದ ರಕ್ಷಿಸಲು ಶಾಲೆಗಳಲ್ಲಿ ಲಿಪ್ ಸ್ಟಿಕ್ ನಿಷೇಧಿಸಿದ ಕೇರಳ








