ಮಂಡ್ಯ : ಯಾವುದಾದರೂ ಸಭೆ, ಸಮಾರಂಭ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಗಣ್ಯ, ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಸನ್ಮಾನ ಮಾಡುವುದು ಸಾಮಾನ್ಯ ಆದರೆ, ತಮ್ಮ ಸಂಸ್ಥೆಯ ಶೌಚಗೃಹ, ಕಾವಲುಗಾರರು, ಚಾಲಕರು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸುವ ಮೂಲಕ ವಿಶಿಷ್ಟ ಕಾರ್ಯಕ್ರಮಕ್ಕೆ ಆರ್.ಕೆ.ವಿದ್ಯಾಸಂಸ್ಥೆ ಸಾಕ್ಷಿಯಾಯಿತು.
ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಸಾಕ್ಷಿಯಾದರು.
ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಮಾತನಾಡಿ, ಆರ್.ಕೆ.ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸುಮಾರು 100 ಕ್ಕೂ ಹೆಚ್ಚು ಬೋಧಕೆತರ ವರ್ಗದವರನ್ನು ಸನ್ಮಾನಿಸುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಲ್ಲೂ ಒಂದೇ ಭಾವನೇ ಮೂಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು, ಆಡಳಿತ ಮಂಡಳಿ, ಜೊತೆಗೆ ಬೋಧಕೇತರ ವರ್ಗದವರ ಪಾತ್ರ ಅನನ್ಯವಾಗಿದ್ದು, ಹೀಗಾಗಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದರು.
ಸಂಸ್ಥೆಯು ಈಗಾಗಲೇ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಇದರ ಜೊತೆಗೆ ಪ್ರತಿಯೊಬ್ಬರು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದು, ಮುಂದಿನ ಪೀಳಿಗೆಗೆ ಪರಿಸರ, ಜಲಮೂಲಗಳ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಹಣ ಕೊಟ್ಟು ಆಮ್ಲಜನಕ ಉಪಯೋಗಿಸುವ ಪರಿಸ್ಥಿತಿಗೆ ನಾವೆಲ್ಲರೂ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಂಡ್ಯ ಪಿಇಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ ಜಿ.ಪಿ.ಶಿವಶಂಕರ್ ಮಾತನಾಡಿ, ಪ್ರಕೃತಿಯ ಸೌಂದರ್ಯ, ಚೈತನ್ಯ, ನೆಮ್ಮದಿಯ ಜೀವನ ಮಟ್ಟದಿಂದಲೇ ನಾಡಿನ ಕವಿಗಳು ಬೆರೆತು ಪರಿಸರದ ಮಡಿಲಲ್ಲೆ ಹಲವಾರು ಮಹಾನ್ ಗ್ರಂಥಗಳು ಹೊರಬಂದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಗಿಡ ಮರಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ದೇಶದ ಭೂ ಪ್ರದೇಶದಲ್ಲಿ ಶೇ 33 ರಷ್ಟು ಅರಣ್ಯ ಪ್ರದೇಶವಿರಬೇಕು ಆದರೆ, 25 ರಷ್ಟು ಪ್ರದೇಶವಿದೆ. ಉಳಿದ ಪ್ರದೇಶವು ಬೆಂಕಿಯಿಂದ ನಶಿಸಿ ಹೋಗುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಗಿಡ ಮರಗಳು ಹೆಚ್ಚಾದರೇ ಮಾತ್ರ ಶುದ್ದ ಗಾಳಿ ದೊರೆಯುತ್ತದೆ. ಪರಿಸರ ನಾಶವಾದರೆ ಆಮ್ಲಜನಕ ಕೊರತೆ ಎದುರಿಸಬೇಕಾಗುತ್ತದೆ. ಈಗಾಗಲೇ ದೇಶದ ರಾಜಧಾನಿ ದೆಹಲಿಯಲ್ಲಿ ಕಲುಷಿತ ವಾತಾವರಣದಿಂದ ಆಮ್ಲಜನಕಕ್ಕಾಗಿ ನಗರ ತೊರೆದು ಬೇರೆಡೆಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಣ ಕೊಟ್ಟು ಆಮ್ಲಜನಕ ಉಪಯೋಗಿಸುವ ಪರಿಸ್ಥಿತಿಗೆ ನಾವೆಲ್ಲರೂ ಬರಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತಿಚಿನ ದಿನಗಳಲ್ಲಿ ವಿಷಾಹಾರ ಸೇವನೆಯಿಂದ ಗಂಭೀರ ರೋಗಗಳು ಹೆಚ್ಚಾಗುತ್ತಿವೆ. ಲಾಭಕ್ಕಾಗಿ ಕೃಷಿಯಲ್ಲಿ ಕೀಟನಾಶಕ ಮೀತಿ ಮೀರಿ ಸಿಂಪಡಣೆ ನಡೆಯುತ್ತಿದೆ. ನಾವು ಪ್ರತಿನಿತ್ಯ ತಿನ್ನುವ ಆಹಾರ ಹಾಳಾಗುತ್ತಿದ್ದು, ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ಪಾವತಿ ಮಾಡುವ ಪರಿಸ್ಥಿತಿ ಬಂದಿದೆ. ಗ್ರಾಮೀಣ ಪ್ರದೇಶದ ಜನತೆ ಮನಸ್ಸು ಮಾಡಿದರೆ ಪರಿಸರವನ್ನು ಸುಧಾರಣೆ ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗವಿಯಪ್ಪ ಮಾತನಾಡಿ, ಆಮ್ಲಜನಕದ ಮಹತ್ವದ ಬಗ್ಗೆ ನಮಗೆ ಈಗಾಗಲೇ ತಿಳಿದಿದೆ. ಕೋರೋನಾ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ ಹಣ ಕೊಟ್ಟು ಆಮ್ಲಜನಕವನ್ನು ಪಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗದಿರಲು ಹೆಚ್ಚು ಹೆಚ್ಚು ಆಮ್ಲಜನಕ ನೀಡುವ ಗಿಡ ಮರಗಳನ್ನು ನೆಟ್ಟು ಪೋಷಿಸಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಶೌಚಗೃಹ ನಿರ್ವಹಣೆ ಮಾಡುವ ಸಿಬ್ಬಂದಿ ಮಂಜುಳಾ ಮಾತನಾಡಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ನನ್ನ ಕೈಯಲ್ಲಿ ಉದ್ಘಾಟನೆ ಮಾಡಿಸಿದ್ದು, ತುಂಬಾ ಸಂತಸ ತಂದಿದ್ದು, ಇನ್ನು ಮುಂದೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಂಸ್ಥೆಯು ವೇದಿಕೆ ಕಲ್ಪಿಸುವ ಮೂಲಕ ಮತ್ತಷ್ಟು ಜವಾಬ್ದಾರಿ ಹೊರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಶಿಕ್ಷಣ ತಜ್ಞ ತುಕಾರಾಂ, ಆಡಳಿತಾಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲ ಸತೀಶ್ ಬಾಬು, ಹಿರಿಯ ಸಹಾಯಕಿ ಭಾಗ್ಯಮ್ಮ, ಪ್ರವೀಣ್, ರಾಜೇಂದ್ರ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








