ಸಾಗರ ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೇಶ್ ಎಂಬ ಯುವಕನೇ ಈ ಕುರಿತು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
9/11 ಗಾಗಿ ಎರಡುವರೆ ವರ್ಷಗಳ ಅಲೆದಾಟ, ₹1.5 ಲಕ್ಷ ಲಂಚಕ್ಕೆ ಬೇಡಿಕೆ!
ಯುವಕ ರಾಜೇಶ್ ನೀಡಿರುವ ಮಾಹಿತಿಯ ಪ್ರಕಾರ, ಅವರು ಕಳೆದ ಎರಡುವರೆ ವರ್ಷಗಳಿಂದ ತಮ್ಮ ತಾಯಿಯ ಹೆಸರಿನ ಆಸ್ತಿಗೆ 9/11 ದಾಖಲೆ ಮಾಡಿಕೊಡುವಂತೆ ತಾಳಗುಪ್ಪ ಗ್ರಾಮ ಪಂಚಾಯಿತಿಗೆ ಅಲೆಯುತ್ತಿದ್ದಾರೆ. ಆದರೆ ಈ ಹಿಂದಿದ್ದ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ್ ಬ್ಯಾಕೋಡ್ ಹಾಗೂ ಅಂದಿನ ಪಿಡಿಓ (PDO) ಅವರು ದಾಖಲೆ ಮಾಡಿಕೊಡಲು ನಿರಂತರವಾಗಿ ಸತಾಯಿಸುತ್ತಿದ್ದರು. ಅಷ್ಟೇ ಅಲ್ಲದೆ, ಈ ಕೆಲಸಕ್ಕಾಗಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ್ ಅವರು ಬರೋಬ್ಬರಿ 1.5 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ರಾಜೇಶ್ ಆರೋಪಿಸಿದ್ದಾರೆ.
ಲೋಕಾಯುಕ್ತ ಆದೇಶಕ್ಕೂ ಕದಡದ ಅಧಿಕಾರಿಗಳು
ಪಂಚಾಯಿತಿ ಅಧಿಕಾರಿಗಳ ಈ ಕಿರುಕುಳ ಹಾಗೂ ಲಂಚದ ಬೇಡಿಕೆಯಿಂದ ಬೇಸತ್ತ ರಾಜೇಶ್, ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಲೋಕಾಯುಕ್ತ ಅಧಿಕಾರಿಗಳು ಇವರ ದಾಖಲೆಗಳನ್ನು ಪರಿಶೀಲಿಸಿ, ಅಂದಿನ ಅಧ್ಯಕ್ಷ ಹಾಗೂ ಪಿಡಿಓ ಅವರನ್ನು ಕರೆಸಿ ರಾಜೇಶ್ ಅವರಿಗೆ ತಕ್ಷಣ ಕೆಲಸ ಮಾಡಿಕೊಡುವಂತೆ ಮೌಖಿಕ ಆದೇಶ ನೀಡಿದ್ದರು. ಆದಾಗ್ಯೂ ಪಂಚಾಯಿತಿ ಅಧಿಕಾರಿಗಳು ಇಲಾಖೆಯ ಆದೇಶಕ್ಕೆ ಕ್ಯಾರೆ ಎನ್ನದೆ ಉದ್ಧಟತನ ತೋರಿದ್ದರು.
ಪಂಚಾಯಿತಿ ಕಚೇರಿಯಲ್ಲೇ ಜೀವಬೆದರಿಕೆ!
ಇತ್ತೀಚೆಗೆ ತಾಳಗುಪ್ಪ ಪಂಚಾಯಿತಿಗೆ ಹೊಸ ಪಿಡಿಓ ಬಂದಿದ್ದು, ರಾಜೇಶ್ ಅವರು ಮೇ 30, 2026ರಂದು ಬೆಳಗ್ಗೆ 11 ರಿಂದ 12:30ರ ಅವಧಿಯಲ್ಲಿ ಹೊಸ ಪಿಡಿಓ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಪಿಡಿಓ ಅವರು ಈ ಪ್ರಕರಣವನ್ನು ಸಿವಿಲ್ ಕೋರ್ಟ್ನಲ್ಲಿ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ರಾಜೇಶ್, “ನಾನು ಸಿವಿಲ್ ಕೋರ್ಟ್ಗೆ ಹೋಗುವುದಾದರೆ ಈ ಹಿಂದಿನ ಆಡಳಿತ ಮಂಡಳಿಯ 15 ಜನರ ಮೇಲೂ ಕೇಸ್ ದಾಖಲಿಸುತ್ತೇನೆ” ಎಂದಿದ್ದಾರೆ.
ಇದರಿಂದ ಕೆರಳಿದ, ಅದೇ ಕಚೇರಿಯಲ್ಲಿ ಕುಳಿತಿದ್ದ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ್ ಬ್ಯಾಕೋಡ್ ಏಕಾಏಕಿ ಎದ್ದು ನಿಂತು, ಏರು ಧ್ವನಿಯಲ್ಲಿ “ನೀನು ಹೊರಗಡೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನಗೆ ಏನು ಮಾಡ್ತೀನಿ ನೋಡು” ಎಂದು ಸಾರ್ವಜನಿಕರ ಎದುರೇ ರಾಜೇಶ್ಗೆ ಜೀವಬೆದರಿಕೆ ಒಡ್ಡಿದ್ದಾರೆ.
“ಪಂಚಾಯಿತಿಯಲ್ಲಿ ಬೆದರಿಕೆ ಹಾಕಿದ ನಂತರ ನಾನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ ವಾಪಸ್ ಬರುತ್ತಿದ್ದೆ. ಆಗ ರಸ್ತೆಯಲ್ಲೂ ಸಿಕ್ಕ ಲಕ್ಷ್ಮಿನಾರಾಯಣ್, ‘ನನ್ನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದೀಯಾ, ನಿನ್ನನ್ನು ಸುಮ್ಮನೆ ಬಿಡಲ್ಲ’ ಎಂದು ಮತ್ತೊಮ್ಮೆ ಜೀವಬೆದರಿಕೆ ಹಾಕಿದ್ದಾನೆ. ಇದರಿಂದ ನಾನು ಮತ್ತು ನನ್ನ ಇಡೀ ಕುಟುಂಬ ತೀವ್ರ ಭೀತಿಯಲ್ಲಿದ್ದೇವೆ,” ಎಂದು ನೊಂದ ಯುವಕ ರಾಜೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಸಕ ಮಧು ಬಂಗಾರಪ್ಪ ಅವರ ಗಮನಕ್ಕೆ
ತಾಳಗುಪ್ಪ ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಸದ್ಯ ಸಚಿವರೂ ಆಗಿರುವ ಸ್ಥಳೀಯ ಶಾಸಕ ಮಧು ಬಂಗಾರಪ್ಪ ಅವರ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ರಾಜೇಶ್ ಹೇಳಿದ್ದಾರೆ. ಈ ಇಡೀ ಜಂಟಿ ಕಿರುಕುಳ ಮತ್ತು ಬೆದರಿಕೆ ಪ್ರಕರಣವನ್ನು ಅವರು ಎಸ್ಪಿ (SP) ಹಾಗೂ ಶಾಸಕ ಮಧು ಬಂಗಾರಪ್ಪ ಅವರ ಗಮನಕ್ಕೆ ತರುತ್ತಿದ್ದಾರೆ. ಮುಂದೆ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಯಾವುದೇ ತೊಂದರೆಯಾದರೂ ಅದಕ್ಕೆ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ್ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿರುವ ರಾಜೇಶ್, ಪೊಲೀಸ್ ಇಲಾಖೆ ಹಾಗೂ ಶಾಸಕರು ತಮಗೆ ಸೂಕ್ತ ಜೀವ ರಕ್ಷಣೆ ನೀಡಬೇಕು ಎಂದು ಕೈಮುಗಿದು ವಿನಂತಿಸಿದ್ದಾರೆ.
ಆಣೆ ಪ್ರಮಾಣದ ಸವಾಲ್ ಹಾಕಿದ ತಾಳಗುಪ್ಪ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು
ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ತಾಳಗುಪ್ಪ ಗ್ರಾಮ ಪಂಚಾಯ್ತಿ ಮಾಜಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು ಅವರು ರಾಜೇಶ್ ಮಾಡುತ್ತಿರುವಂತ ಆರೋಪಗಳು ನಿರಾಧಾರವಾಗಿವೆ. ನಾನು ಯಾವುದೇ ಲಂಚಕ್ಕೆ ಬೇಡಿ ಇಟ್ಟಿಲ್ಲ. ಕಾನೂನಿನ ಅಡಿಯಲ್ಲಿ ಅವರ ಜಾಗವನ್ನು ಮಾಡಿಕೊಡೋದಕ್ಕೆ ಪಿಡಿಓಗೆ ನನ್ನ ಅಧಿಕಾರದ ಅವಧಿಯಲ್ಲಿ ಸೂಚಿಸಿದ್ದೇನೆ. ಅದರ ಹೊರತು ನಾನು ಅವರಿಂದ ಲಂಚಕ್ಕೆ ಬೇಡಿಕೆ ಇರಿಸಿಲ್ಲ. ರಾಜೇಶ್ ಅವರು ನಾನು ಲಂಚ ಕೇಳಿದ್ದೇನೆ ಎಂಬುದಾಗಿ ಸಿಗಂದೂರು ಚೌಡೇಶ್ವರಿ ಸನ್ನಿಧಿಗೆ ಬಂದು ಆಣೆ ಪ್ರಮಾಣ ಮಾಡಲಿ. ನಾನು ಆಣೆ ಪ್ರಮಾಣಕ್ಕೆ ಸಿದ್ಧ. ಮುಂದಿನದ್ದು ಆ ತಾಯಿ ಚೌಡೇಶ್ವರಿ ನೋಡಿಕೊಳ್ಳಲಿ ಎಂಬುದಾಗಿ ಸವಾಲ್ ಹಾಕಿದರು.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮ ಪಂಚಾಯ್ತಿಯ ಗ್ರಾಮಸ್ಥರಾದಂತ ರಾಜೇಶ್ ಹಾಗೂ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು ಅವರು ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದ್ದಾವೆ. ಇದು ಎಷ್ಟು ನಿಜ, ಎಷ್ಟು ಸತ್ಯದಿಂದ ಕೂಡಿದೆ ಎಂಬುದನ್ನು ಮುಂದೆ ಕಾಲವೇ ನಿರ್ಧರಿಸಬೇಕಿದೆ.








