ಬೆಂಗಳೂರು: ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗೆ ಅಧಿಕೃತ ಮುದ್ರೆ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ನೊಣವಿನಕೆರೆಯ ಅಜ್ಜಯ್ಯ ನೀಡಿದ್ದಂತ ಮುಹೂರ್ತದಲ್ಲೇ ಡಿಕೆ ಶಿವಕುಮಾರ್ ಅವರು ಜೂನ್.3ರಂದು ಸಂಜೆ 4.05 ಗಂಟೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಮೇ 30ರ ಇಂದು ಸಲ್ಲಿಸಿದ್ದ ಸರ್ಕಾರ ರಚನೆಯ ಹಕ್ಕು ಮಂಡನೆ ಪತ್ರವನ್ನು ಪುರಸ್ಕರಿಸಿ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದಾರೆ.
ರಾಜ್ಯಪಾಲರ ಅಧಿಕೃತ ಪತ್ರದಲ್ಲೇನಿದೆ?
ರಾಜ್ಯಪಾಲರ ಕಾರ್ಯಾಲಯದಿಂದ (ಪತ್ರ ಸಂಖ್ಯೆ: NO GS 57 GOB 2026) ಹೊರಬಿದ್ದಿರುವ ಅಧಿಕೃತ ಪ್ರಕಟಣೆಯಲ್ಲಿ, “ಮೇ 30, 2026 ರಂದು ನೀವು ಸರ್ಕಾರ ರಚಿಸಲು ಹಕ್ಕು ಮಂಡಿಸಿ ಸಲ್ಲಿಸಿದ ಪತ್ರ ನನಗೆ ತಲುಪಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಹಾಗೂ ನಿಮ್ಮ ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನಾನು ನಿಮಗೆ ಮುಕ್ತ ಆಹ್ವಾನ ನೀಡುತ್ತಿದ್ದೇನೆ” ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಜೂನ್ 3ರ ಸಂಜೆ 4:05ಕ್ಕೆ ಪದಗ್ರಹಣ
ರಾಜ್ಯಪಾಲರ ಪತ್ರದ ಪ್ರಕಾರ, ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮುಂಬರುವ ಜೂನ್ 3, 2026ರ ಬುಧವಾರ ಸಂಜೆ 04:05 ಕ್ಕೆ ಬೆಂಗಳೂರಿನ ಲೋಕಭವನದ ಆವರಣದಲ್ಲಿ ಜರುಗಲಿದೆ.
ಈ ಪತ್ರದ ಪ್ರತಿಯನ್ನು ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ತಲುಪಿಸಲಾಗಿದೆ. ಈ ಮೂಲಕ ಜೂನ್ 3ರಂದು ರಾಜ್ಯದಲ್ಲಿ ಅಧಿಕೃತವಾಗಿ ಡಿಕೆಶಿ ಯುಗ ಆರಂಭವಾಗುವುದು ಖಚಿತವಾಗಿದೆ.

ಅಡುಗೆಮನೆಯ ಯಡವಟ್ಟುಗಳಿಂದಲೇ ಜನ್ಮತಾಳಿದ ವಿಶ್ವದ 5 ಅತ್ಯಂತ ಜನಪ್ರಿಯ ಆಹಾರಗಳಿವು!
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








