ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರು ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಕೋರ್ಟ್ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭೂಸ್ವಾಧೀನ ಅಧಿಕಾರಿಗಳು ಜಮೀನಿನ ಬೆಲೆ ನಿಗದಿಪಡಿಸುವ ವಿಧಾನ ಹಾಗೂ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಭೂಬೆಲೆ ನಿಗದಿಪಡಿಸಲು 5 ಪ್ರಮುಖ ವಿಧಾನಗಳು
ಭೂಸ್ವಾಧೀನಾಧಿಕಾರಿಗಳು ಪರಿಹಾರ ಧನ ನಿಗದಿಪಡಿಸುವಾಗ ಈ ಕೆಳಗಿನ ಐದು ವಿಧಾನಗಳನ್ನು ಅನುಸರಿಸಬಹುದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ:
ಸ್ಥಳೀಯ ಪಂಚರು ನಿಗದಿಪಡಿಸಿದ ಬೆಲೆ.
ಆದಾಯದ ಬಂಡವಾಳೀಕರಣ ವಿಧಾನ (Capitalization of Income Method).
ತಜ್ಞರ ಅಭಿಮತ.
ಭೂಮಾಲೀಕರು ಹಾಗೂ ಬೇಡಿಕೆ ಇಲಾಖೆಯವರು ಒಪ್ಪಂದದ ಮೇರೆಗೆ ಮಾತುಕತೆ ನಡೆಸಿ ನಿಗದಿಪಡಿಸಿದ ಬೆಲೆ.
ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಮಾರಾಟವಾದ ಜಮೀನುಗಳ ಅಂಕಿ-ಅಂಶಗಳ ಸರಾಸರಿ ಬೆಲೆ.
ಗಮನಾರ್ಹ ಅಂಶ: ಸಾಮಾನ್ಯವಾಗಿ ಅಧಿಕಾರಿಗಳು 5ನೇ ವಿಧಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ನೋಂದಣಿ ಬೆಲೆಗೂ ವಾಸ್ತವ ಬೆಲೆಗೂ ವ್ಯತ್ಯಾಸವಾಗಿ ವ್ಯಾಜ್ಯಗಳು ಹೆಚ್ಚುತ್ತಿವೆ. ಆದ್ದರಿಂದ ಇನ್ಮುಂದೆ “ಬಂಡವಾಳೀಕರಣ ಪದ್ಧತಿ”ಯನ್ನು ಹೆಚ್ಚಾಗಿ ಬಳಸಲು ಸೂಚಿಸಲಾಗಿದೆ. ಇದರಿಂದ ಸಿವಿಲ್ ನ್ಯಾಯಾಲಯಗಳಿಗೆ ಹೋಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ.
ಅನಗತ್ಯ ಮೇಲ್ಮನವಿ ಸಲ್ಲಿಕೆಗೆ ಬ್ರೇಕ್: ಸರ್ಕಾರದ ಪ್ರಮುಖ ನಿರ್ಣಯಗಳು
ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಸರ್ಕಾರಿ ಇಲಾಖೆಗಳು ಮೇಲ್ಮನವಿ (Appeal) ಸಲ್ಲಿಸುವುದರಿಂದ ಬಡ್ಡಿ ಹಣ ಹೆಚ್ಚಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿತ್ತು ಮತ್ತು ರೈತರಿಗೂ ಸಕಾಲದಲ್ಲಿ ಹಣ ಸಿಗುತ್ತಿರಲಿಲ್ಲ. ಇದನ್ನು ತಡೆಯಲು ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ದರಗಳನ್ನು ಪರಿಷ್ಕರಿಸಿ, ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಲಾಗಿದೆ:
ಒಣ ಭೂಮಿ (ಖುಷ್ಕಿ): ಪ್ರತಿ ಎಕರೆಗೆ ರೂ. 70,200 ವರೆಗೆ.
ತರಿ ಭೂಮಿ (ವರ್ಷಕ್ಕೆ ಒಂದು ಬೆಳೆ): ಪ್ರತಿ ಎಕರೆಗೆ ರೂ. 1,17,000 ವರೆಗೆ.
ತರಿ ಭೂಮಿ (ವರ್ಷಕ್ಕೆ ಎರಡು ಬೆಳೆ): ಪ್ರತಿ ಎಕರೆಗೆ ರೂ. 1,48,200 ವರೆಗೆ.
ನ್ಯಾಯಾಲಯಗಳು ನಿಗದಿಪಡಿಸಿದ ಬೆಲೆಯು ಈ ಮೇಲಿನ ಮಿತಿಯ ಒಳಗಿದ್ದರೆ ಅಥವಾ ಅದಕ್ಕೆ ಪ್ರತಿ ವರ್ಷ ಶೇ. 10 ರಷ್ಟು ಹೆಚ್ಚುವರಿ ಮಾಡಿ, ಶೇ. 5 ರಷ್ಟು ಕೋರ್ಟ್ ವೆಚ್ಚವನ್ನು ಸೇರಿಸಿ ಬರುವ ಮೊತ್ತಕ್ಕೆ ಸಮನಾಗಿದ್ದರೆ, ಅಂತಹ ಪ್ರಕರಣಗಳ ವಿರುದ್ಧ ಇಲಾಖೆಗಳು ಮೇಲ್ಮನವಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಸಣ್ಣ ಮತ್ತು ಅತಿ ಸಣ್ಣ ರೈತರ ರಕ್ಷಣೆಗೆ ಆದ್ಯತೆ
ನ್ಯಾಯಾಲಯ ನಿಗದಿಪಡಿಸಿದ ಪರಿಹಾರವು ನಿಗದಿತ ಪ್ರಮಾಣಕ್ಕಿಂತ ಅತ್ಯಂತ ಕಡಿಮೆಯಾಗಿದ್ದು, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನ್ಯಾಯವಾಗಿರುವ ಪ್ರಕರಣಗಳು ಕಂಡುಬಂದಲ್ಲಿ, ಸರ್ಕಾರ ತಕ್ಷಣವೇ ಅದನ್ನು ಗಂಭೀರವಾಗಿ ಪರಿಗಣಿಸಲಿದೆ. ಅಂತಹ ಪ್ರಕರಣಗಳನ್ನು ತಕ್ಷಣವೇ ಕಾನೂನು ಸೇವಾ ಪ್ರಾಧಿಕಾರಕ್ಕೆ (Legal Services Authority) ಕಳುಹಿಸಿ, ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿ ರೈತರಿಗೆ ಉಚಿತ ಕಾನೂನು ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಒಂದು ವೇಳೆ ನ್ಯಾಯಾಲಯವು ಅಸಮಂಜಸವಾಗಿ ಹಾಗೂ ಅತಿಯಾಗಿ ಪರಿಹಾರ ನಿಗದಿಪಡಿಸಿದ್ದರೆ, ಅಂತಹ ಪ್ರಕರಣಗಳನ್ನು ಕಾನೂನು ಮತ್ತು ತಾಂತ್ರಿಕ ಆಂಶಗಳ ಅಡಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ತದನಂತರವಷ್ಟೇ ಮೇಲ್ಮನವಿ ಸಲ್ಲಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.









