ಶಿವಮೊಗ್ಗ: ಮೆಸ್ಕಾಂ ಸಂಸ್ಥೆಯ ಘನತೆಗೆ ಕುಂದು ಉಂಟುಮಾಡುವ ರೀತಿಯಲ್ಲಿ ನಡೆದುಕೊಂಡು, ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸೊರಬ ಉಪವಿಭಾಗದ ಉಳವಿ ಶಾಖೆಯ ಸಹಾಯಕ ಇಂಜಿನಿಯರ್ (ವಿದ್ಯುತ್) ಇಬ್ರಾಹಿಂ ಎನ್. ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಶಿವಮೊಗ್ಗ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಸಚಿವರ ಆಪ್ತ ಕಾರ್ಯದರ್ಶಿಗೆ ಅಪಮಾನ ಮತ್ತು ಕರ್ತವ್ಯ ನಿರಾಕರಣೆ
ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳಿಂದ ಉಳವಿ ಶಾಖೆಯ ವಿದ್ಯುತ್ ಸಮಸ್ಯೆಗಳ ಕುರಿತು ಸಾಲು-ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿ ವೀರಭದ್ರಪ್ಪ ಅವರು ಇಬ್ರಾಹಿಂ ಅವರಿಗೆ ಕಾನ್ಫರೆನ್ಸ್ ಕರೆಯಲ್ಲಿ ಸಂಪರ್ಕಿಸಿದ್ದರು. ಈ ವೇಳೆ ಬೇಜವಾಬ್ದಾರಿಯಿಂದ ಮಾತನಾಡಿದ ಇಬ್ರಾಹಿಂ, “ನನಗೆ ಉಳವಿ ಶಾಖೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ, ನೀವು ಏನು ಬೇಕಾದರೂ ಮಾಡಿ, ವರ್ಗಾವಣೆ ಮಾಡಿಕೊಳ್ಳಿ” ಎಂದು ಸಚಿವರ ಆಪ್ತ ಕಾರ್ಯದರ್ಶಿಗೆ ಅನುಚಿತವಾಗಿ ಉತ್ತರಿಸಿ ಕರೆಯನ್ನು ಕಡಿತಗೊಳಿಸಿದ್ದರು. ಇದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲೂ ಸಹ ಗ್ರಾಹಕರ ವಿದ್ಯುತ್ ಸಂಬಂಧಿತ ದೂರುಗಳ ಬಗ್ಗೆ ಕರೆ ಮಾಡಿದಾಗ ಇವರು ಫೋನ್ ಸ್ವೀಕರಿಸುತ್ತಿರಲಿಲ್ಲ ಎಂದು ಗ್ರಾಹಕರು ಸಚಿವರಿಗೆ ನೇರವಾಗಿ ದೂರು ನೀಡಿದ್ದರು.
ಕಾಮಗಾರಿ ನಿರ್ಲಕ್ಷ್ಯ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪ
ಇತ್ತೀಚೆಗೆ ಬೀಸಿದ ಭಾರಿ ಗಾಳಿ ಮತ್ತು ಮಳೆಗೆ ಉಳವಿ ಶಾಖಾ ವ್ಯಾಪ್ತಿಯಲ್ಲಿ ಸುಮಾರು 25 ವಿದ್ಯುತ್ ಕಂಬಗಳು ನೆಲಸಮಗೊಂಡು ವಿದ್ಯುತ್ ಸರಬರಾಜು ಸಂಪೂರ್ಣ ವ್ಯತ್ಯಯವಾಗಿತ್ತು. ಇಂತಹ ತುರ್ತು ಪರಿಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪುನರ್ ಸ್ಥಾಪನೆ ಕಾರ್ಯದ ಮೇಲ್ವಿಚಾರಣೆ ನಡೆಸಬೇಕಾದ ಇಬ್ರಾಹಿಂ ಅವರು ಮರುದಿನ ಸಂಜೆಯವರೆಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳು ದೂರವಾಣಿ ಮೂಲಕ ವಿಚಾರಿಸಿದಾಗ, ತಾವು ಸ್ಥಳದಲ್ಲೇ ಇದ್ದು ತುರ್ತು ಕ್ರಮ ಕೈಗೊಳ್ಳುತ್ತಿರುವುದಾಗಿ ಸುಳ್ಳು ಮಾಹಿತಿ ನೀಡಿ ಕರ್ತವ್ಯ ಲೋಪವೆಸಗಿದ್ದರು.
ಕಛೇರಿ ದಾಖಲಾತಿ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕಛೇರಿಗೆ ಭೇಟಿ ನೀಡಿ ಆಕಸ್ಮಿಕ ತಪಾಸಣೆ ನಡೆಸಿದಾಗ ಇಬ್ರಾಹಿಂ ಅವರ ಕಛೇರಿ ನಿರ್ವಹಣೆಯ ಅಧ್ವಾನಗಳು ಬೆಳಕಿಗೆ ಬಂದಿವೆ. ಕಛೇರಿಯಲ್ಲಿ ಸತತ ಮೂರು ದಿನಗಳ ಕಾಲ ಸಿಬ್ಬಂದಿಯ ಹಾಜರಾತಿಯನ್ನು ದಾಖಲಿಸದೆ ಇರುವುದು ಮತ್ತು ಕೆಲಸ ಹಂಚಿಕೆ ಪುಸ್ತಕವನ್ನು (Work Allocation Book) ನಿರ್ವಹಿಸದೇ ಇರುವುದು ತಪಾಸಣೆಯಲ್ಲಿ ದೃಢಪಟ್ಟಿತ್ತು. ಇದರೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳಿಗೆ ಗೈರುಹಾಜರಾಗುವುದು ಮತ್ತು ಕಂಪನಿಯ ಕಂದಾಯ ವಸೂಲಾತಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿ ಆದಾಯ ಕುಂಠಿತಗೊಳ್ಳಲು ಕಾರಣರಾಗಿದ್ದಕ್ಕೆ ಇವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.
ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನ ಆದೇಶ
ಈ ಹಿನ್ನಲೆಯಲ್ಲಿ ಇಬ್ರಾಹಿಂ ಅವರು ನೀಡಿದ ಯಾವುದೇ ವಿವರಣೆಗಳು ತೃಪ್ತಿಕರವಾಗಿಲ್ಲದ ಕಾರಣ ಹಾಗೂ ಅವರ ಬೇಜವಾಬ್ದಾರಿತನದಿಂದ ಇಡೀ ಶಾಖೆಯ ಪ್ರಗತಿ ಕುಂಠಿತಗೊಂಡು ಮೆಸ್ಕಾಂ ಸಂಸ್ಥೆಯ ಹೆಸರಿಗೆ ಕಳಂಕ ಬಂದಿರುವುದರಿಂದ ಅಧೀಕ್ಷಕ ಇಂಜಿನಿಯರ್ ಅವರು ಅಮಾನತ್ತಿನ ಕಠಿಣ ಕ್ರಮ ಕೈಗೊಂಡಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಇಬ್ರಾಹಿಂ ಅವರು ನಿಯಮಾವಳಿಗಳ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಈ ಆದೇಶದ ಪ್ರತಿಯನ್ನು ಸಾಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮುಂದಿನ ಶಿಸ್ತು ಕ್ರಮಕ್ಕಾಗಿ ರವಾನಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









