ಬೆಂಗಳೂರು : ಔಷಧಿಗಳ ಆನ್ಲೈನ್ ಮಾರಾಟ, ಔಷಧ ವ್ಯಾಪಾರ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ವಿರುದ್ಧ ಪ್ರತಿಭಟನೆಯಾಗಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ (AIOCD) ಸಂಸ್ಥೆಯು ಮೇ 20ರಂದು ದೇಶವ್ಯಾಪಿ ವೈದ್ಯಕೀಯ ಅಂಗಡಿಗಳ ಬಂದ್ಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆ, ಅಗತ್ಯ ಔಷಧಿಗಳ ಲಭ್ಯತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಪ್ರಕಟಣೆ ಹೊರಡಿಸಿದ್ದು, ಬಂದ್ ಅವಧಿಯಲ್ಲಿ ಸಾರ್ವಜನಿಕರು ಮತ್ತು ವಿವಿಧ ಇಲಾಖೆಗಳಿಗೆ ಪ್ರಮುಖ ಮಾರ್ಗಸೂಚಿಗಳನ್ನು ನೀಡಿದೆ.
ಸಾರ್ವಜನಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು:
ಮುಂಚಿತವಾಗಿ ಔಷಧಿ ಖರೀದಿಸಿ: ಮಧುಮೇಹ, ರಕ್ತದೊತ್ತಡ, ಆಸ್ತಮಾ, ಹೃದಯ ಸಂಬಂಧಿತ ಕಾಯಿಲೆಗಳು, ಅಪಸ್ಮಾರ, ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳು ಅಗತ್ಯ ಔಷಧಿಗಳನ್ನು ಮುಂಚಿತವಾಗಿ ಖರೀದಿಸಿ ಸಾಕಷ್ಟು ಸಂಗ್ರಹಿಸಿಟ್ಟುಕೊಳ್ಳಬೇಕು.
ತುರ್ತು ಔಷಧಿಗಳ ಲಭ್ಯತೆ: ಇನ್ಸುಲಿನ್, ಇನ್ಹೇಲರ್ಗಳು, ಜೀವ ರಕ್ಷಕ ಔಷಧಿಗಳು ಹಾಗೂ ಮಕ್ಕಳ ಔಷಧಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುಂಚಿತವಾಗಿಯೇ ಖರೀದಿಸುವುದು ಸೂಕ್ತ.
ಭಯಭೀತರಾಗಬೇಡಿ: ಅನಗತ್ಯವಾಗಿ ಭಯಭೀತರಾಗಿ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದು ಅಥವಾ ಸಂಗ್ರಹಿಸುವುದನ್ನು ತಪ್ಪಿಸಬೇಕು. ನಿಯಂತ್ರಿತ ಔಷಧಿಗಳಿಗಾಗಿ ನೋಂದಾಯಿತ ವೈದ್ಯರ ಸಲಹಾ ಚೀಟಿಗಳನ್ನು ಹೊಂದಿರಬೇಕು ಹಾಗೂ ಔಷಧ ಅಂಗಡಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕು.
ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಸಮೀಪದ ಆಸ್ಪತ್ರೆಗಳು, ತುರ್ತು ವೈದ್ಯಕೀಯ ಸೇವೆಗಳು ಅಥವಾ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ತಕ್ಷಣ ಸಂಪರ್ಕಿಸಬೇಕು.
ಕೆಮಿಸ್ಟ್ ಮತ್ತು ಡ್ರಗಿಸ್ಟ್ಗಳಿಗೆ ಸೂಚನೆ:
ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಮತ್ತು ಜೀವ ರಕ್ಷಕ ಔಷಧಿಗಳನ್ನು ಪೂರೈಸಲು ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೆ ಔಷಧ ಕೊರತೆ ಆಗದಂತೆ ಸಹಕರಿಸಲು ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣಗಳು ಅಥವಾ ಇತರೆ ಮಾಧ್ಯಮಗಳ ಮೂಲಕ ಯಾವುದೇ ರೀತಿಯ ವದಂತಿ ಅಥವಾ ತಪ್ಪು ಮಾಹಿತಿಯನ್ನು ಹರಡಬಾರದು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳ ಜವಾಬ್ದಾರಿ:
ರಾಜ್ಯದಾದ್ಯಂತ ಅಗತ್ಯ ಮತ್ತು ಜೀವ ರಕ್ಷಕ ಔಷಧಿಗಳ ಲಭ್ಯತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು.
ಆಸ್ಪತ್ರೆಗಳು, ತುರ್ತು ಔಷಧ ಅಂಗಡಿಗಳು, ಸಗಟು ವ್ಯಾಪಾರಿಗಳು ಮತ್ತು ಜಿಲ್ಲಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಔಷಧಿಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.
ಔಷಧ ಪೂರೈಕೆ ಮತ್ತು ಸಾರ್ವಜನಿಕ ಆರೋಗ್ಯ ಪರಿಸ್ಥಿತಿಗಳ ಕುರಿತು ಮೇಲಧಿಕಾರಿಗಳಿಗೆ ಪ್ರತಿ ಎರಡು ಗಂಟೆಗೊಮ್ಮೆ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ಹೆಲ್ಪ್ಲೈನ್ ಗೆ ವರದಿಗಳನ್ನು ಸಲ್ಲಿಸಬೇಕು.
ಪೊಲೀಸ್ ಇಲಾಖೆಗೆ ಮುನ್ನೆಚ್ಚರಿಕೆಗಳು:
ಬಲವಂತದ ಅಂಗಡಿ ಮುಚ್ಚುವಿಕೆ, ಬೆದರಿಕೆ ಹಾಗೂ ಸಾರ್ವಜನಿಕರಿಗೆ ಅಡ್ಡಿಪಡಿಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಆಂಬ್ಯುಲೆನ್ಸ್ಗಳು, ತುರ್ತು ಔಷಧ ಪೂರೈಕೆ ವಾಹನಗಳು ಮತ್ತು ಆರೋಗ್ಯ ಸಿಬ್ಬಂದಿಯ ಸುಗಮ ಸಂಚಾರಕ್ಕೆ ನೆರವಾಗಬೇಕು.
ವದಂತಿ ಹಬ್ಬಿಸುವಿಕೆ, ಹಿಂಸಾಚಾರ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಘಟನೆಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕ ಆರೋಗ್ಯ, ರೋಗಿಗಳ ಸುರಕ್ಷತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಹಿತಾಸಕ್ತಿಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






