ನವದೆಹಲಿ:ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳ ತೆರವಿಗೆ ರಾಜತಾಂತ್ರಿಕ ಪ್ರಯತ್ನಗಳು ವೇಗ ಪಡೆದುಕೊಂಡಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಗುರುವಾರ (ಮೇ 7, 2026) ಈ ಬಗ್ಗೆ ಮಾಹಿತಿ ನೀಡಿದ್ದು, ಈವರೆಗೆ 11 ಭಾರತೀಯ ಹಡಗುಗಳು ಅತ್ಯಂತ ಅಪಾಯಕಾರಿ ಎನ್ನಲಾದ ‘ಹಾರ್ಮುಜ್ ಜಲಸಂಧಿ’ಯನ್ನು ದಾಟಿ ಸುರಕ್ಷಿತವಾಗಿ ಹೊರಬಂದಿವೆ ಎಂದು ತಿಳಿಸಿದ್ದಾರೆ.
ಭಾರತವು ಇರಾನ್ ಸರ್ಕಾರದೊಂದಿಗೆ ನಡೆಸಿದ ನಿರಂತರ ಮಾತುಕತೆಯ ಫಲವಾಗಿ, ನಿರ್ಬಂಧಕ್ಕೊಳಗಾಗಿದ್ದ ಪ್ರದೇಶದಿಂದ 11 ಹಡಗುಗಳು ಯಶಸ್ವಿಯಾಗಿ ಹೊರಬಂದಿವೆ. ಇವುಗಳು ಭಾರತದತ್ತ ಪ್ರಯಾಣ ಬೆಳೆಸಿವೆ.
ಪ್ರಸ್ತುತ 13 ಭಾರತೀಯ ಹಡಗುಗಳು ಇನ್ನೂ ಪರ್ಷಿಯನ್ ಕೊಲ್ಲಿಯ ಒಳಗೇ ಇವೆ. ಇವುಗಳನ್ನು ಕೂಡ ಆದಷ್ಟು ಬೇಗ ಸುರಕ್ಷಿತವಾಗಿ ಹೊರತರುವ ನಿಟ್ಟಿನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಭಾರತ ಸರ್ಕಾರ ಸಂಪರ್ಕದಲ್ಲಿದೆ.
ಕೊಲ್ಲಿ ವಲಯದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಶಿಪ್ಪಿಂಗ್ ಸಚಿವಾಲಯ ತಿಳಿಸಿದೆ. ಕಳೆದ 48 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಯಾವುದೇ ಹಡಗಿನ ಮೇಲೆ ದಾಳಿ ನಡೆದ ವರದಿಯಾಗಿಲ್ಲ.
ಇರಾನ್ ಹಡಗುಗಳು ಅಮೆರಿಕದ ದಿಗ್ಬಂಧನದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಮತ್ತು ಭಾರತದ ಜಲಪ್ರದೇಶವನ್ನು ಬಳಸುತ್ತಿವೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಜೈಸ್ವಾಲ್, “ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸಲು ಅನುಮತಿಯ ಅಗತ್ಯವಿಲ್ಲ, ಆದರೆ ಭಾರತದ ಜಲಗಡಿ ಪ್ರವೇಶಿಸುವುದು ತಾಂತ್ರಿಕ ವಿಚಾರವಾಗಿದ್ದು, ಆ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಧರಿಸಲಿವೆ” ಎಂದಿದ್ದಾರೆ.








